Homeಮುಖಪುಟ180 ಪದಗಳಲ್ಲಿ; ಮೇಲೇಳದ ಟ್ರುಥ್ ಸೋಶಿಯಲ್; ಶರಣನಾದ ಕಾಶ್ಮೀರಿ ಅರಸ; ಗಾಂಧಿ ಮೇಲಿನ ದೇಶದ್ರೋಹಕ್ಕೆ 100

180 ಪದಗಳಲ್ಲಿ; ಮೇಲೇಳದ ಟ್ರುಥ್ ಸೋಶಿಯಲ್; ಶರಣನಾದ ಕಾಶ್ಮೀರಿ ಅರಸ; ಗಾಂಧಿ ಮೇಲಿನ ದೇಶದ್ರೋಹಕ್ಕೆ 100

- Advertisement -
- Advertisement -

ಆರಕ್ಕೇರದ ಬಲಪಂಥೀಯರು ಮೆಚ್ಚಿನ ಎರಡು ತಂತ್ರಜ್ಞಾನಗಳು

ತೀವ್ರ ಬಲಪಂಥೀಯರು ಮತ್ತು ಕಾನ್ಸಪಿರೆಸಿ ಥಿಯರಿಗಳನ್ನು ಹೆಚ್ಚು ಅರಸುವವರು (ಆದರಲ್ಲಿಯೂ ವ್ಯಾಕ್ಸೀನ್ ಉಂಟುಮಾಡಲಿರುವ ಅಪಾಯಗಳ ಬಗೆಗೆ) ಇತ್ತೀಚೆಗಷ್ಟೇ ಗೂಗಲ್ ಸರ್ಚ್ ಎಂಜಿನ್ ಬಿಟ್ಟು ‘ಡಕ್‌ಡಕ್‌ಗೋ’ ಕಡೆಗೆ ಹಸ್ತ ಚಾಚಿದ್ದರು. ಗೂಗಲ್‌ನಲ್ಲಿ ಹುಡುಕಿದರೆ ತಮಗೆ ಬೇಕಾದ ಲಿಂಕ್‌ಗಳನ್ನು ಅದು ಆದ್ಯತೆಯ ಮೇರೆಗೆ ಪಟ್ಟಿ ಮಾಡುವುದಿಲ್ಲ, ತನಗೆ ಬೇಕಾದಂತೆ ಅದು ಸೆನ್ಸಾರ್ ಮಾಡತ್ತೆ ಅನ್ನುವುದು ಈ ಜನರ ಆರೋಪ. ನಮಗೆ ಬೇಕಾಗಿರುವ ಸಂಗತಿ ಮತ್ತು ಮಾಹಿತಿಗಳನ್ನು ಮಿಸ್‌ಇನ್ಫರ್‌ಮೇಷನ್ ಹೆಸರಿನಲ್ಲಿ ತಡೆಯುವುದಕ್ಕೆ ಗೂಗಲ್ ಯಾರು ಎಂದು ರೋಶಾವೇಷದಿಂದ ಹೇಳಿದ್ದರು.

ಡಕ್‌ಡಕ್‌ಗೋನಿಂದ ಗೂಗಲ್ ಎದೆ ಢವಢವ ಹೊಡೆದುಕೊಂಡಿರಬಹದೇ ಎಂದರೆ ಹಾಗೇನಿಲ್ಲ. ಡಕ್‌ಡಕ್‌ಗೋನಲ್ಲಿ ಮೂಡುವ ಫಲಿತಾಂಶಗಳನ್ನು ನಿಜವಾಗಿಯೂ ಹುಡುಕಿ ಕೊಡುವುದು ಮೈಕ್ರೋಸಾಫ್ಟ್‌ನ ‘ಬಿಂಗ್’ ಸರ್ಚ್ ಎಂಜಿನ ಅಲ್ಗಾರಿದಮ್. ಅದು ಹಲವು ವರ್ಷಗಳಿಂದ ಇದ್ದರೂ ಗೂಗಲ್‌ ಎದುರು ಸೆಡ್ಡು ಹೊಡೆದು ನಿಲ್ಲಲು ಸಾಧ್ಯವಾಗಿಲ್ಲ. ಇನ್ನು ಇತ್ತೀಚಿಗೆ ರಷ್ಯಾ ದೇಶ ಸುಳ್ಳು ಪ್ರೊಪೋಗಾಂಡದಲ್ಲಿ ನಿರತವಾಗಿರುವುದರಿಂದ ಆ ದೇಶದ ವೆಬ್‌ಸೈಟ್‌ಗಳ ರ‍್ಯಾಂಕ್‌ಅನ್ನು ಕೆಳಕ್ಕೆ ತಳ್ಳುತ್ತೀವೆಂದು ಡಕ್‌ಡಕ್‌ಗೋ ಅಂದದ್ದು, ಬಳಕೆದಾರರನ್ನು ಕೆರಳಿಸಿದೆಯಂತೆ. ದೈತ್ಯ ಟೆಕ್ ಕಂಪನಿಗಳ ರೀತಿಯಲ್ಲಿ ಸೆನ್ಸಾರ್‌ಗೆ ಇಳಿದರೆ ತಮ್ಮ ನಂಬಿಕೆಯೇ ಬುಡಮೇಲಾಗುತ್ತದೆಲ್ಲ ಎಂಬ ಚಿಂತೆ ಅವರದ್ದು. ಸುಳ್ಳೋಪಳ್ಳೋ ಒಟ್ಟಿನಲ್ಲಿ ನಾವು ನಂಬಿದ್ದು ನಮಗೆ ವೇದವಾಕ್ಯ ಅನ್ನುವವರ ಬೆಂಬಲದಿಂದ 3% ಮಾರ್ಕೆಟ್ ಶೇರ್ ಹೊಂದಿರುವ ಡಕ್‌ಡಕ್‌ಗೋ ಅದು ಸೆನ್ಸಾರ್ ಅಲ್ಲ, ಹಂಗಲ್ಲ ಹಿಂಗೆ ಅನ್ನುತ್ತಿದೆ.

ಇನ್ನು ಟ್ವಿಟ್ಟರ್ ಮತ್ತು ಫೇಸ್ಬುಕ್‌ನಿಂದ ಹೊರ ಹಾಕಿಸಿಕೊಂಡಿದ್ದ ಟ್ರಂಪ್, ಇವರುಗಳ ಸಹವಾಸವೇ ಬೇಡ, ಹೊಸ ಸಾಮಾಜಿಕ ಮಾಧ್ಯಮವನ್ನೇ ಕಟ್ಟುತ್ತೇನೆಂದು ಹೊರಟಿದ್ದರು. ಫೆಬ್ರವರಿ ಮೂರನೇ ವಾರದಲ್ಲಿ ಈ ಟ್ವಿಟ್ಟರ್ ವಿರೋಧಿ ಆಪ್ ಬಿಡುಗಡೆಯಾದರೂ ಸದ್ದು ಮಾಡಲು ವಿಫಲವಾಗಿದೆ. ಅತ್ತ ಇದರ ಹರಿಕಾರ ಟ್ರಂಪ್ ಅವರೇ ಅದರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಂತೆ. ಮಾರ್ಚ್‌ವರೆಗೂ ಬೆರಳೆಣಿಕೆಯಷ್ಟು ಪೋಸ್ಟ್‌ಗಳನ್ನು ಮಾತ್ರ ಅವರಲ್ಲಿ ಹಾಕಿದ್ದಾರಂತೆ.

ಒಟ್ಟಿನಲ್ಲಿ ನಕಲಿಯಿರಲಿ ಅಸಲಿಯಿರಲಿ ಸ್ವಲ್ಪವೂ ಸೆನ್ಸಾರ್ ಆಗಬಾರದು ಎಂದು ನಂಬಿರುವವರಿಗೆ ಈ ಹೊಸ ಆಪ್‌ಗಳು ಇನ್ನೂ ಆಪದ್ಬಾಂಧವರಂತೆ ಕೆಲಸ ಮಾಡುತ್ತಿಲ್ಲ ಅನ್ನುವುದಂತೂ ಸ್ಪಷ್ಟ!

ಕಾಶ್ಮೀರದ ರಾಜ ಶರಣನಾದನೆಂಬ ಪ್ರತೀತಿ

ಜೀವವ ಕಡಿವಂಗೆ ಇಲ್ಲದ ಪಾಪ ಕತ್ತಿಗುಂಟೇ ಎಲೆ ದೇವ!

ಎಚ್ಚವನಿದ್ದಂತೆ ಅಂಬಿಗೆ ಮುನಿವರೇ?

ಕೊಲ್ಲಿಸಿದ ಅರಸಿದ್ದಂತೆ ಬಂಟಗೆ ಮುನಿವರೇ?

ಎಲೆ ದಿವ್ಯ ಜ್ಞಾನವ ಪಾಲಿಸೋ, ಎನ್ನೊಡೆಯ ನಿಃಕಳಂಕ ಮಲ್ಲಿಕಾರ್ಜುನಾ

ನೀನಿದ್ದಂತೆ ಎನ್ನನೇಕೆ ಕಾಡಿಹೆ?

ಈ ವಚನವನ್ನು ನೀಡಿದವರು ಮೋಳಿಗೆ ಮಾರಯ್ಯ. ‘ನಿಃಕಳಂಕ ಮಲ್ಲಿಕಾರ್ಜುನಾ’ ಅಂಕಿತದಲ್ಲಿ ಬರೆಯುತ್ತಿದ್ದ ಮೋಳಿಗೆ ಮಾರಯ್ಯನವರ ಬಗೆಗಿನ ಕಥೆಯೇ ಬಹಳ ರೋಚಕತೆಯದ್ದು. ಹಿಂದೆ ಕಾಶ್ಮೀರದ ಸವಾಲಾಕ್ಷ ಎಂಬ ಪ್ರದೇಶದ ಮಾಂಡವ್ಯಪುರದ ಅರಸರಾಗಿದ್ದವರು ಮಹದೇವ. ಕರ್ನಾಟಕದಲ್ಲಿ ಪ್ರಾರಂಭವಾದ ಶರಣ ಚಳವಳಿ ದೇಶದ ಉದ್ದಗಲಕ್ಕೆ ಹರಡಿದ್ದ ಕಾಲವದು.

ಶರಣ ಚಳವಳಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಫ.ಗು. ಹಳಕಟ್ಟಿರಯವರು ಹೇಳುವಂತೆ, ಕಾಶ್ಮೀರದೇಶದಲ್ಲಿ ರಾಜನಾಗಿದ್ದ ಮಹದೇವರಾಜನ ಬಳಿ ಕರ್ನಾಟಕದಿಂದ ಹೋಗಿದ್ದ ಶಿವಶರಣರು ದಾಸೋಹ ಬೇಡಿದರಂತೆ. ರಾಜನಿಕ್ಕಿದ ದಾಸೋಹ ಕಾಯಕದಿಂದ ಬಂದಿದ್ದಲ್ಲವಾದ್ದರಿಂದ ಅದನ್ನು ನಿರಾಕರಿಸಿದರಂತೆ. ಇದರಿಂದ ಶಿವಭಕ್ತ ರಾಜನ ಒಳಗಣ್ಣು ತೆಗೆದು ತನ್ನ ರಾಜತ್ವವನ್ನು ತ್ಯಜಿಸಿ ಕರ್ನಾಟಕಕ್ಕೆ ಬಂದು ಶರಣನಾದರಂತೆ.

ಇಂದು ಕಾಶ್ಮೀರದಲ್ಲಿ ಮಾಂಡವ್ಯಪುರ ಇದೆಯೋ ಇಲ್ಲವೋ, ಹೆಸರು ಗೊತ್ತಾಗದಷ್ಟು ಬದಲಾಗಿ ಹೋಗಿದೆಯೋ ಎಂಬಿತ್ಯಾದಿ ಪ್ರಶ್ನೆಗಳನ್ನು ಬದಿಗಿಟ್ಟು ನೋಡಿದರೂ, ವೈದಿಕತೆಯನ್ನು ವಿರೋಧಿಸಿ ಬೆಳೆದ ಶರಣ ಚಳವಳಿ ದೇಶದಾದ್ಯಂತ ಹಬ್ಬಿ ಅರಸನನ್ನು ಸಾಮಾನ್ಯನಾಗಿಸಿದ ಈ ಪುರಾಣದ ಕಥೆ ಸಾಂಕೇತಿಕವಾಗಿಯೂ ಮಹತ್ವವನ್ನು ಪಡೆಯುತ್ತದೆ. ಅನುಭವ ಮಂಟಪಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕವನ್ನು ಮಾಡಿಕೊಂಡು ಬಸವಣ್ಣನವರ ಸಮಕಾಲೀನದಲ್ಲಿ ಸುಮಾರು 800ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಹಾಡಿದ ಮೋಳಿಗೆ ಮಾರಯ್ಯನ ಕತೆ ಅಷ್ಟು ಜನಪ್ರಿಯವಾಗದೆ ಇರುವುದಕ್ಕೆ ಕಾರಣವೇನು?

ಶಂಕರಾಚಾರ್ಯರು ಕಾಶ್ಮೀರಕ್ಕೆ ಹೋಗಿ ದೇವಾಲಯ ನಿರ್ಮಿಸಿದರು ಎಂಬ ಕಥೆ ಇಂದು ದೇಶದ ಉದ್ದಗಲಕ್ಕೆ ಚಾಲ್ತಿಯಿರುವಂತೆ ವೈದಿಕ ಧರ್ಮ ನೋಡಿಕೊಂಡಿದೆ ಆದರೆ ಅದೇ ಸಮಯದಲ್ಲಿ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು ಕಾಯಕದಲ್ಲಿ ತೊಡಗಿಸಿಕೊಂಡ ಅರಸನ ಕಥೆಯನ್ನು ವೈದಿಕ ಪಾರಮ್ಯ ಮರೆಸಿದೆ. ಇಂದು ನಾವು ಮತ್ತೆಮತ್ತೆ ಹೇಳಬೇಕಿರುವ ಬದಲಿ ಕಥೆಗಳನ್ನು ಹುಡುಕಿ ಕೆದಕಬೇಕಿದೆ!

ಗಾಂಧಿಯವರ ಮೇಲೆ ಹೊರಿಸಿದ್ದ ದೇಶದ್ರೋಹ ಪ್ರಕರಣಕ್ಕೆ 100!

ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರಾರನ್ನು ಜೈಲಿಗೆ ಅಟ್ಟುವ ಕಾರಣಕ್ಕೆ ಜಾರಿ ಮಾಡಿದ್ದ ಸೆಡಿಶನ್ ಕಾನೂನನ್ನು ಇಂದಿಗೂ ಭಾರತದದಲ್ಲಿ ಉಳಿಸಿಕೊಂಡು ಹಲವು ಸರ್ಕಾರಗಳು ದುರುಪಯೋಗ ಮಾಡಿಕೊಳ್ಳುತಿರುವುದು ಹಳೇ ಕಥೆಯಾಯಿತು. ಅದರಲ್ಲೂ ಬಿಜೆಪಿ ಮುಂದಾಳತ್ವದ ಕೇಂದ್ರ ಸರ್ಕಾರ ಈ ದೇಶದ್ರೋಹ ಕಾನೂನನ್ನು ತನ್ನ ರಾಜಕೀಯ ವಿರೋಧಿಗಳನ್ನು, ಚಿಂತಕರನ್ನು ಹಳಿಯಲು ಎಗ್ಗಾಮುಗ್ಗ ಬಳಸಿದೆ. 2010 ರಿಂದ 2021 ರವರೆಗೆ ಸುಮಾರು 13 ಸಾವಿರಕ್ಕು ಹೆಚ್ಚು ಬಾರಿ ತನ್ನ ನಾಗರಿಕರ ಮೇಲೆ ಪ್ರಭುತ್ವ ದೇಶದ್ರೋಹ ಆರೋಪ ಹೊರಿಸಿದೆ ಎಂದರೆ ಲೆಕ್ಕ ಹಾಕಿಕೊಳ್ಳಿ!

ಬ್ರಿಟಿಷರು ತಂದಿದ್ದ ಈ ಐಪಿಸಿ 124ಎ ಈಗ ಬ್ರಿಟನ್‌ನಲ್ಲಿಯೇ ಕೊನೆಗೆಂಡಿದ್ದರೂ, ಭಾರತದಲ್ಲಿ ಆಳುವವರ ಮೆಚ್ಚಿನ ಅಸ್ತ್ರವಾಗಿರುವುದು ವಿಪರ್ಯಾಸವಲ್ಲದೆ ಮತ್ತೇನು!

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಸರ್ಕಾರದಿಂದ ಸೈನಿಕರು ಹೊರಬರಬೇಕು ಎಂದು ಮಹಾತ್ಮ ತಮ್ಮ ಪತ್ರಿಕೆಯಲ್ಲಿ ಬರೆದಿದ್ದಕ್ಕೆ ಬ್ರಿಟಿಷ್ ಸರ್ಕಾರ ಮಾರ್ಚ್ 1922ರಲ್ಲಿ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿತು. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಗಾಂಧಿಯವರು ನುಡಿದ ಧೈರ್ಯದ ಮಾತುಗಳು ಇಂದಿಗೂ ಆದರ್ಶನೀಯ: “ಸೆಕ್ಷನ್ 124-ಎ ಅಡಿಯಲ್ಲಿ ನನ್ನ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ನಾಗರಿಕರ ಸ್ವಾತಂತ್ರ್ಯವನ್ನು ನಿಗ್ರಹಿಸಲು ವಿನ್ಯಾಸಗೊಳಿಸಿರುವ ಭಾರತೀಯ ಅಪರಾಧ ಸಂಹಿತೆಯ ರಾಜಕೀಯ ವಿಭಾಗಗಳಲ್ಲಿ, ಸೆಕ್ಷನ್ 124-ಎನೇ ಬಹುಶಃ ರಾಜ. ವಾತ್ಸಲ್ಯವನ್ನು (affection) ಕಾನೂನಿನಿಂದ ಉತ್ಪಾದಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಅಥವಾ ವ್ಯವಸ್ಥೆಯ ಬಗ್ಗೆ ಒಬ್ಬನಿಗೆ ವಾತ್ಸಲ್ಯವಿಲ್ಲದಿದ್ದರೆ, ಎಲ್ಲಿವರೆಗೆ ಆತ/ಆಕೆ ಹಿಂಸಾಚಾರವನ್ನು ಆಲೋಚಿಸುವುದಿಲ್ಲವೋ, ಉತ್ತೇಜಿಸುವುದಿಲ್ಲವೋ ಅಥವಾ ಪ್ರಚೋದಿಸುವುದಿಲ್ಲವೋ ಅಲ್ಲಿವರೆಗೆ, ತನ್ನ ಅಸಮಾಧಾನಕ್ಕೆ ಪೂರ್ಣ ಅಭಿವ್ಯಕ್ತಿ ನೀಡಲು ಆಕೆ/ಆತ ಮುಕ್ತನಾಗಿರಬೇಕು… ಈ ಹಿಂದಿನ ಯಾವುದೇ ವ್ಯವಸ್ಥೆಗಳಿಗಿಂತ ಭಾರತಕ್ಕೆ ಒಟ್ಟಾರೆಯಾಗಿ ಹೆಚ್ಚು ಹಾನಿ ಮಾಡಿರುವ ಈ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವುದು ಅತ್ಯುನ್ನತ ಮೌಲ್ಯ ಎಂದು ನಾನು ತಿಳಿದುಕೊಳ್ಳುತ್ತೇನೆ.”

ಗಾಂಧಿಯವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಈ ವರ್ಷಕ್ಕೆ 100 ವರ್ಷವಾದರೂ ಅವರ ಮಾತುಗಳು ಇಂದಿಗೂ ಪ್ರಸ್ತುವಾಗಿರುವಂತೆ ಕ್ರೂರ ಪ್ರಭುತ್ವಗಳು ನೋಡಿಕೊಳ್ಳುತ್ತಿವೆ!

– ಗುರುಪ್ರಸಾದ್ ಡಿ ಎನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...