ಪಶ್ಚಿಮ ಬಂಗಾಳದ ಬಿರ್ಭೂಮ್ ಗ್ರಾಮದಲ್ಲಿ 8 ಜನರನ್ನು ಸಜೀವವಾಗಿ ಸುಟ್ಟು ಕೊಂದ ಭೀಭತ್ಸ ಘಟನೆ ನಂತರ ಗ್ರಾಮಕ್ಕೆ ಭೇಟಿ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ “ಈ ಹತ್ಯಾಕಾಂಡ ಹಿಂದೆ ಬೃಹತ್ ಷಡ್ಯಂತ್ರ ನಡೆದಿದೆ” ಎಂದು ಆರೋಪಿಸಿದ್ದಾರೆ.
ಸಂತ್ರಸ್ತ ಕುಟುಂಬದ ಸಂಬಂಧಿಕರನ್ನು ಭೇಟಿಯಾಗಿ ಐದು ಲಕ್ಷ ರೂ ಪರಿಹಾರ ಚೆಕ್ ವಿತರಿಸಿದ ಅವರು, “ಆಧುನಿಕ ಬಂಗಾಳದಲ್ಲಿ ಇಂತಹ ಬರ್ಭರ ಕೃತ್ಯ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ತಾಯಂದಿರು ಮತ್ತು ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ. ನಿಮ್ಮ ಕುಟುಂಬ ಸದಸ್ಯರು ಸುಟ್ಟು ಹೋಗಿದ್ದಾರೆ. ನನ್ನ ಹೃದಯ ಹೊಡೆದುಹೋಗಿದೆ” ಎಂದು ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ನೇರ ಕ್ರಮ ಕೈಗೊಳ್ಳಬೇಕು. ಅವರು ಶರಣಾಗದಿದ್ದರೆ ಹುಡುಕಿ ಬಂಧಿಸಬೇಕು. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಬೇಕು. ಆರೋಪಿಗಳು ಓಡಿ ಹೋಗಿದ್ದಾರೆ ಎಂದು ಹೇಳಿ ಪ್ರಯೋಜನವಿಲ್ಲ. ಅವರನ್ನು ಹುಡುಕಿ ಶಿಕ್ಷಸಬೇಕು ಮತ್ತು ಘಟನೆಗೆ ಸಂಬಂಧಿಸಿದ ದೂರುಗಳಿಗೆ ಪ್ರತಿಕ್ರಿಯಿಸುವಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸರನ್ನು ಸಹ ಶಿಕ್ಷಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹತ್ಯೆಗೆ ಸಂಬಂಧಿಸಿದಂತೆ ಸ್ಥಳೀಯ ತೃಣಮೂಲ ನಾಯಕ ಅನಾರುಲ್ ಶೇಖ್ ಅವರನ್ನು ಸಹ ಬಂಧಿಸುವಂತೆ ಮಮತಾ ಬ್ಯಾನರ್ಜಿ ಪೊಲೀಸರಿಗೆ ಸೂಚಿಸಿದ್ದಾರೆ. ಅಲ್ಲದೆ ಸಾಕ್ಷಿಗಳಗೆ ಭದ್ರತೆ ಒದಗಿಸುವಂತೆ ಆದೇಶಿಸಿದ್ದಾರೆ.
ಕಚ್ಚಾ ಬಾಂಬ್ ದಾಳಿಯಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್ ಹತ್ಯೆಯಾದ ನಂತರ ಪ್ರತೀಕಾರವಾಗಿ ರಾಮ್ಪುರಹತ್ ಸಮೀಪದ ಬೊಗ್ಟುಯಿ ಗ್ರಾಮದಲ್ಲಿ ಮಂಗಳವಾರ ಜನಸಮೂಹವೊಂದು ಒಂದೇ ಕುಟುಂಬದ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಮನೆಯೊಳಕ್ಕೆ ಕೂಡಿಹಾಕಿ ಜೀವಂತವಾಗಿ ಸುಟ್ಟು ಹಾಕಲಾಗಿದೆ. ಒಂದು ದಿನದ ನಂತರ ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ಘಟನೆಯ ನಂತರ ಅನೇಕ ಗ್ರಾಮಸ್ಥರು ಪ್ರತೀಕಾರ ಅಥವಾ ಬಂಧನಕ್ಕೆ ಹೆದರಿ ಗ್ರಾಮದಿಂದ ಓಡಿಹೋಗಿದ್ದಾರೆ. ಈ ಸಂಬಂಧ ಎರಡು ಎಫ್ಐಆರ್ ದಾಖಲಾಗಿದೆ ಎನ್ನಲಾಗಿದೆ.
ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿರುವ ಅವರು, ಮನೆ ನಿರ್ಮಾಣಕ್ಕೆ 2 ಲಕ್ಷ ಮತ್ತು ಮನೆ ದುರಸ್ಥಿಗೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಬಂಗಾಳ ಪ್ರತಿಪಕ್ಷ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದೇ ಘಟನೆಗೆ ಕಾರಣ ಎಂದು ಆರೋಪಿಸಿದೆ.
ಇದನ್ನೂ ಓದಿ: ಮತೀಯ ಗೂಂಡಾಗಿರಿಯಿಂದ ಮುಸ್ಲಿಮರ ವ್ಯಾಪಾರ ನಿಷೇಧದವರೆಗೆ: ಬೊಮ್ಮಾಯಿ ಸರ್ಕಾರದ ಮತಾಂಧತೆಯ ಹೆಜ್ಜೆಗಳು