2020ರ ಟಿಆರ್ಪಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ವಿರುದ್ಧದ ಪ್ರಕರಣ ಹಿಂಪಡೆಯುವ ಮುಂಬೈ ಪೊಲೀಸರ ಅರ್ಜಿಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮ್ಮತಿಸಿದೆ.
ಮುಂಬೈ ಪೊಲೀಸ್ ತನಿಖೆಯಲ್ಲಿನ ವಿರೋಧಾಭಾಸಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ರಾಜ್ಯ ಗೃಹ ಇಲಾಖೆ ಪ್ರಕರಣವನ್ನು ಹಿಂಪಡೆಯಲು ನಿರ್ಧಾರ ಕೈಗೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಪ್ರಕರಣದ ಕುರಿತು ಆಲಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಲ್ಎಸ್ ಪಧೇನ್ ಅವರು ಪ್ರಕರಣ ಹಿಂಪಡೆಯಲು ಪೊಲೀಸರಿಗೆ ಅನುಮತಿ ನೀಡಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹಿರಾಯ್ ದೃಢಪಡಿಸಿದ್ದಾರೆ.
2020ರಲ್ಲಿ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಸೇರಿದಂತೆ ಹಲವಾರು ಚಾನೆಲ್ಗಳ ವಿರುದ್ಧ ಟಿಆರ್ಪಿ ಹೆಚ್ಚಿಸಿರುವ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಆಗ ಮುಂಬೈನ ಪೊಲೀಸ್ ಕಮಿಷನರ್ ಆಗಿದ್ದ ಪರಮ್ ಬೀರ್ ಸಿಂಗ್ ಈ ಪ್ರಕರಣವನ್ನು ನಿರ್ವಹಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿಶಿರ್ ಹಿರಾಯ್ ಅವರು ವಿಚಾರಣೆಯನ್ನು ಮುಂದುವರಿಸುವುದರಿಂದ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ, ಬದಲಿಗೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದು, ಇದರಿಂದ ಪ್ರಕರಣವನ್ನು ಹಿಂಪಡೆಯಲು ನ್ಯಾಯಾಲಯವು ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಮುಂಬೈ ಪೊಲೀಸರ ಎಫ್ಐಆರ್ ಆಧರಿಸಿ, ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು. ತನ್ನ ತನಿಖಾ ವರದಿಯಲ್ಲಿ ಪ್ರಕರಣದಲ್ಲಿ ಟಿಆರ್ಪಿ ಸಂಖ್ಯೆಗಳನ್ನು ದುರ್ಬಳಕೆ ಮಾಡಿದ ಆರೋಪದಿಂದ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ನ್ನು ಜಾರಿ ನಿರ್ದೇಶನಾಲಯವು ಈಗಾಗಲೇ ಮುಕ್ತಗೊಳಿಸಿದೆ.
2021ರಲ್ಲಿ ಈ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿತ್ತು. ಈ ಹಗರಣದಿಂದ ರಿಪಬ್ಲಿಕ್ ಟಿವಿ ಚಾನೆಲ್ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸಿದೆ ಎಂದು ಉಲ್ಲೇಖಿಸಿತ್ತು. 2023ರಲ್ಲಿ ರಾಜ್ಯ ಗೃಹ ಇಲಾಖೆ ಅಧಿಕಾರಿಗಳು ಮುಂಬೈ ಪೊಲೀಸರಿಂದ ದಾಖಲೆಗಳನ್ನು ಪಡೆದರು ಮತ್ತು ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಝೆ ಮತ್ತು ತಂಡವು ನಡೆಸಿದ ತನಿಖೆಯಲ್ಲಿ ಹಲವಾರು ನ್ಯೂನತೆಗಳಿವೆ ಎಂದು ಮರು ತನಿಖೆಯಲ್ಲಿ ಹೇಳಿದೆ. ವಝೆ ಅವರು ಪ್ರಕರಣದ ತನಿಖೆ ನಡೆಸಿದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದರು.
ನಿರ್ದಿಷ್ಟ ಟಿವಿ ಚಾನೆಲ್ಗಳನ್ನು ವೀಕ್ಷಿಸಲು ಜನರಿಗೆ ಹಣ ಪಾವತಿಸುವ ಮೂಲಕ ಟಿಆರ್ಪಿಯಲ್ಲಿ ಹಗರಣ ನಡೆಯುತ್ತಿದೆ ಎಂದು 2020ರಲ್ಲಿ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಹಂಸಾ ರಿಸರ್ಚ್ ಗ್ರೂಪ್ ಮೂಲಕ ದೂರು ದಾಖಲಿಸಿದೆ. ಪ್ರಕರಣದ ಚಾರ್ಜ್ಶೀಟ್ನಲ್ಲಿ ಪೊಲೀಸರು ಅರ್ನಬ್ ಗೋಸ್ವಾಮಿಯನ್ನು ಆರೋಪಿ ಎಂದು ಹೆಸರಿಸಿದ್ದರು. ಈ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಎಲ್ಲ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ.
ಇದನ್ನು ಓದಿ: ಇಡಿ ದಾಳಿ ಬೆನ್ನಲ್ಲೇ ಬಿಜೆಪಿ ಸೇರಿದ ಟಿಎಂಸಿಯ ಹಿರಿಯ ಶಾಸಕ