ಮಾವೋವಾದಿಗಳ ಜೊತೆ ನಂಟು ಆರೋಪದಲ್ಲಿ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಪ್ರೊ. ಜಿಎನ್ ಸಾಯಿಬಾಬಾ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹತ್ತು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಸಾಯಿಬಾಬಾ ಅವರು ದೋಷ ಮುಕ್ತರಾಗಿ ಹೊರ ಬಂದಿದ್ದಾರೆ.
ಮಾರ್ಚ್ 5ರಂದು ಪ್ರೊ. ಜಿ.ಎನ್ ಸಾಯಿಬಾಬಾ ಮತ್ತು ಇತರ ಐವರನ್ನು ಬಾಂಬೆ ಹೈಕೋರ್ಟ್ ನಿರ್ದೋಷಿಗಳೆಂದು ಘೋಷಿಸಿತ್ತು.
2014ರಲ್ಲಿ ಬಂಧಿತರಾದ ಸಾಯಿಬಾಬಾ ಮತ್ತು ಇತರರನ್ನು 2017ರಲ್ಲಿ ಗಡ್ಚಿರೋಲಿಯ ಸೆಷನ್ಸ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿತ್ತು. ಅಕ್ಟೋಬರ್ 14,2022ರಂದು ಅಂಗವೈಕಲ್ಯ ಹೊಂದಿರುವ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿ, ಪ್ರಕರಣದ ಹೊಸ ವಿಚಾರಣೆಗಾಗಿ ಹೈಕೋರ್ಟ್ಗೆ ಹಿಂತಿರುಗಿಸಿತ್ತು. ಹಾಗಾಗಿ, ಸಾಯಿಬಾಬಾ ಅವರು ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿದ್ದರು.
2017ರಲ್ಲಿ, ಗಡ್ಚಿರೋಲಿಯ ಸೆಷನ್ಸ್ ನ್ಯಾಯಾಲಯವು ಸಾಯಿಬಾಬಾ ಮತ್ತು ಇತರರನ್ನು ಮಾವೋವಾದಿಗಳ ಜೊತೆ ನಂಟು ಮತ್ತು ದೇಶದ ವಿರುದ್ಧ ಯುದ್ಧ ಸಾರುವ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಪು ನೀಡಿತ್ತು. ಸಾಯಿಬಾಬಾ ಅವರು ಗಡ್ಚಿರೋಲಿ ಮತ್ತು ಇತರ ಪ್ರದೇಶಗಳಲ್ಲಿ ಮಾವೋವಾದಿಗಳಿಗೆ ಹಿಂಸಾಚಾರವನ್ನು ಪ್ರಚೋದಿಸುವ ಸಾಹಿತ್ಯಗಳನ್ನು ನೀಡಲು ಉದ್ದೇಶಿಸಿದ್ದರು ಎಂದು ನ್ಯಾಯಾಲಯ ಹೇಳಿತ್ತು.
ಸೆಷನ್ಸ್ ಕೋರ್ಟ್ ತೀರ್ಪನ್ನು ಸಾಯಿಬಾಬಾ ಅವರು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್ಎ ಮೆನೇಜಸ್ ಅವರ ವಿಭಾಗೀಯ ಪೀಠವು, ಪ್ರಾಸಿಕ್ಯೂಷನ್ ಸಾಯಿಬಾಬಾ ಅವರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪ ಹೊರಿಸಲು ಪ್ರಾಸಿಕ್ಯೂಷನ್ ನೀಡಿದ ಅನುಮತಿಯನ್ನೂ ಹೈಕೋರ್ಟ್ ರದ್ದುಗೊಳಿಸಿದೆ.
ಇದನ್ನೂ ಓದಿ : ಗೋಧ್ರಾ ಗಲಭೆಯ 22 ವರ್ಷಗಳ ನಂತರ ಸಾಮರಸ್ಯಕ್ಕೆ ಸಾಕ್ಷಿಯಾದ ಗುಲ್ಬರ್ಗ್ ಸೊಸೈಟಿ