ನ್ಯಾಯಾಲಯ ನೀಡಿದ ಗಡುವಿನೊಳಗೆ ಚುನಾವಣಾ ಬಾಂಡ್ ಕುರಿತ ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಇಂದು (ಮಾ.7) ಎಡಿಆರ್ ಅರ್ಜಿಯನ್ನು ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ್ದು, ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಾಲಯ ಒಪ್ಪಿಕೊಂಡಿದೆ.
ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಫೆಬ್ರವರಿ 15,2024ರಂದು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಈ ವೇಳೆ, ಏಪ್ರಿಲ್ 12, 2019 ರಿಂದ ಫೆ.15ವರೆಗೆ ಚುನಾವಣಾ ಬಾಂಡ್ಗಳ ಮೂಲಕ ಕೊಡುಗೆಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಮಾರ್ಚ್ 6ರೊಳಗೆ ಸಲ್ಲಿಸುವಂತೆ ಎಸ್ಬಿಐಗೆ ನಿರ್ದೇಶಿಸಿತ್ತು. ಅಲ್ಲದೆ, ಮಾರ್ಚ್ 13ರೊಳಗೆ ಎಸ್ಬಿಐ ನೀಡಿದ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಮಾರ್ಚ್ 4ರಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಎಸ್ಬಿಐ, ಚುನಾವಣಾ ಬಾಂಡ್ಗಳ ಕುರಿತು ಮಾಹಿತಿ ಒದಗಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಕೋರಿದೆ. ಎಸ್ಬಿಐನ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ಮಾರ್ಚ್ 6ರ ನ್ಯಾಯಾಲಯದ ನೀಡಿದ ಗಡುವಿನ ಮೊದಲು ಸಲ್ಲಿಸಿರುವ ಅರ್ಜಿಯಲ್ಲಿ, ಮಾಹಿತಿ ಒದಗಿಸಲು ಕೆಲವು ಪ್ರಯೋಗಿಕ ಸಮಸ್ಯೆಗಳಿವೆ ಎಂದು ಎಸ್ಬಿಐ ತಿಳಿಸಿದೆ.
ಎಸ್ಬಿಐ ಉದ್ದೇಶಪೂರ್ವಕವಾಗಿ ಸಮಯ ವಿಸ್ತರಣೆ ಕೋರಿದೆ. ಈ ಮೂಲಕ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದ ಆದೇಶವನ್ನು ಧಿಕ್ಕರಿಸಿದೆ. ಅಲ್ಲದೆ, ಚುನಾವಣಾ ಆಯೋಗಕ್ಕೆ ಮಾಹಿತಿ ಒದಗಿಸುವ ಪ್ರಕ್ರಿಯೆ ಎಲ್ಲಿಯವರೆಗೆ ಬಂತು. ಮಾಹಿತಿ ಒದಗಿಸಲು ಕೈಗೊಂಡ ಕ್ರಮಗಳೇನು? ಇತ್ಯಾದಿ ವಿಷಯಗಳನ್ನು ಎಸ್ಬಿಐ ತನ್ನ ಅರ್ಜಿಯಲ್ಲಿ ವಿವರಿಸಿಲ್ಲ ಎಂದು ಎಡಿಆರ್ ತನ್ನ ಅರ್ಜಿಯಲ್ಲಿ ದೂರಿದೆ.
ಚುನಾವಣಾ ಬಾಂಡ್ಗಳ ಕುರಿತು ಮಾಹಿತಿ ಒದಗಿಸುವುದು ಸಂಕೀರ್ಣ ಕೆಲಸವಾಗಿದೆ. ಹಾಗಾಗಿ, ಸಮಯ ವಿಸ್ತರಣೆ ಮಾಡಬೇಕು ಎಂದಿರುವ ಎಸ್ಬಿಐ ವಾದವನ್ನು ಪ್ರಶ್ನಿಸಿರುವ ಎಡಿಆರ್, ಪ್ರತಿ ಚುನಾವಣಾ ಬಾಂಡ್ ಮತ್ತು ಅದರ ಖರೀದಿದಾರನ ಕೆವೈಸಿ ವಿವರಗಳಿಗೆ ನಿಗದಿಪಡಿಸಿದ ವಿಶಿಷ್ಟ ಸಂಖ್ಯೆಯ ದಾಖಲೆಯನ್ನು ಎಸ್ಬಿಐ ಹೊಂದಿದೆ. ತಾಂತ್ರಿಕ ತಜ್ಞರ ಪ್ರಕಾರ, ಪ್ರತಿ ಚುನಾವಣಾ ಬಾಂಡ್ ವಿಶಿಷ್ಟ ಸಂಖ್ಯೆಯನ್ನು ಹೊಂದಿರುವುದರಿಂದ, ಯಾವುದೇ ಹಸ್ತಚಾಲಿತ ಪರಿಶೀಲನೆಯ ಅಗತ್ಯವಿಲ್ಲದೇ ಡೇಟಾಬೇಸ್ನ ಮಾಹಿತಿ ಅನುಸರಿಸಿ ನಿರ್ದಿಷ್ಟ ಸ್ವರೂಪದಲ್ಲಿ ವರದಿಯನ್ನು ರಚಿಸಬಹುದು ಎಂದಿದೆ.
ಇದನ್ನೂ ಓದಿ : ಚುನಾವಣಾ ಬಾಂಡ್ ಕುರಿತ ಎಸ್ಬಿಐ ಅರ್ಜಿ ಹಾಸ್ಯಾಸ್ಪದವಾಗಿದೆ: ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ