ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಮೇ 7ರವರೆಗೆ ವಿಸ್ತರಿಸಿದೆ.
ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನದ ಅವಧಿ ಕೊನೆಗೊಂಡ ಹಿನ್ನೆಲೆ ಅವರನ್ನು ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಪೀಠದ ಮುಂದೆ ವೀಡಿಯೊ ಕಾನ್ಫರೆನ್ಸ್ ಮೂಲಕ ಇಡಿ ಮತ್ತು ಸಿಬಿಐ ಅಧಿಕಾರಿಗಳು ಹಾಜರುಪಡಿಸಿದ್ದರು.
ಭ್ರಷ್ಟಾಚಾರ ಪ್ರಕರಣದಲ್ಲಿ ತೆಲಂಗಾಣ ಎಂಎಲ್ಸಿ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಕೂಡ ಮೇ 7ರವರೆಗೆ ನ್ಯಾಯಾಧೀಶರು ವಿಸ್ತರಿಸಿದ್ದಾರೆ.
ಸುನೀತಾ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಕೇಜ್ರಿವಾಲ್ಗೆ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ಸಂಚಾಲಕನ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ಒಂದು ದಿನದ ನಂತರ ನ್ಯಾಯಾಲಯದ ಈ ನಿರ್ಧಾರವು ಹೊರ ಬಂದಿದೆ. ದೆಹಲಿ ನ್ಯಾಯಾಲಯವು ಕೇಜ್ರಿವಾಲ್ಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವಂತೆ ನಿರ್ದೇಶಿಸಿದೆ ಮತ್ತು ಯಾವುದೇ ವಿಶೇಷ ಸಮಾಲೋಚನೆಯ ಅಗತ್ಯವಿದ್ದಲ್ಲಿ, ತಿಹಾರ್ ಜೈಲು ಅಧಿಕಾರಿಗಳು AIIMS ನಿರ್ದೇಶಕರು ರಚಿಸಿರುವ ವೈದ್ಯಕೀಯ ಮಂಡಳಿಯ ಸಲಹೆಯನ್ನು ಪಡೆಯಬೇಕು ಎಂದು ಹೇಳಿದೆ.
ಸೋಮವಾರ ಸಂಜೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಿದ ನಂತರ ಕೇಜ್ರಿವಾಲ್ ಅವರಿಗೆ “ಕಡಿಮೆ ಪ್ರಮಾಣದ” ಇನ್ಸುಲಿನ್ನ್ನು ನೀಡಲಾಯಿತು ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಏಮ್ಸ್ ವೈದ್ಯರ ಸಲಹೆಯ ಮೇರೆಗೆ ಕೇಜ್ರಿವಾಲ್ ಅವರಿಗೆ ಸೋಮವಾರ ಸಂಜೆ ಕಡಿಮೆ ಪ್ರಮಾಣದ ಇನ್ಸುಲಿನ್ ನೀಡಲಾಯಿತು ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
‘ಇಡಿ’ಯ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ನಂತರ ಮಾ. 21ರಂದು ಜಾರಿ ನಿರ್ದೇಶನಾಲಯ (ಇಡಿ) ಕೇಜ್ರಿವಾಲ್ ಅವರನ್ನು ಬಂಧಿಸಿದೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ‘ಇಡಿ’ ಮತ್ತು ‘ಸಿಬಿಐ’ ದಾಖಲಿಸಿರುವ ಎರಡೂ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನು ಓದಿ: ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್ ಹತ್ಯೆ ಬಗ್ಗೆ ಉಲ್ಲೇಖ