ಭಾರತ ಸರ್ಕಾರವು ಮತ್ತೊಂದು ಶಾಕಿಂಗ್ ಆದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಆರ್ಥಿಕ ಕುಸಿತದ ಪರಿಣಾಮವಾಗಿ ೮ ಮೂಲ ಕೈಗಾರಿಕೆಗಳು ಋಣಾತ್ಮಕ ಬೆಳವಣಿಗೆಯ ಹಾದಿ ಹಿಡಿದಿವೆ ಎಂದು ಸರ್ಕಾರ ಹೇಳಿದೆ. ಆ ಕೈಗಾರಿಕೆಗಳ ಬೆಳವಣಿಗೆ ದರ ಸುಮಾರು -0.5 ನಷ್ಟು ಕುಸಿದಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಿಮೆಂಟ್, ರಾಸಾಯನಿಕ ಗೊಬ್ಬರ, ಕಬ್ಬಿಣ, ಸಂಸ್ಕರಣಾಗಾರ ಉತ್ಪನ್ನಗಳು ಮತ್ತು ಎಲೆಕ್ಟ್ರಿಸಿಟಿ ಕ್ಷೇತ್ರಗಳು ಸಂಪೂರ್ಣವಾಗಿ ನೆಲಕಚ್ಚಿರುವ ಆ ಎಂಟು ಕ್ಷೇತ್ರಗಳಾಗಿವೆ.
ಎಂಟು ವಲಯ ಕೈಗಾರಿಕೆಗಳ ಬೆಳವಣಿಗೆಯ ದರ ಕಳೆದ ವರ್ಷದ ಆಗಸ್ಟ್ ನಲ್ಲಿ ಶೇ 4.7 ರಷ್ಟಿತ್ತು. ಆದರೆ ಪ್ರಸಕ್ತ ಸಾಲಿನ ಆಗಸ್ಟ್ ನಲ್ಲಿ ಸಂಪೂರ್ಣವಾಗಿ ಬಿದ್ದು ಹೋಗಿದ್ದು ಶೇ. -0.5ಕ್ಕೆ ಕುಸಿಯುವ ಮೂಲಕ ಆತಂಕ ಹೆಚ್ಚಿಸಿದೆ.
ಆದರೆ ಇದ್ಯಾವುದರ ಬಗ್ಗೆಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗಮನಹರಿಸುತ್ತಿಲ್ಲ. ಅರ್ಥವ್ಯವಸ್ಥೆಯ ಸುಧಾರಣೆ ಹಾಗೂ ಉದ್ಯಮಗಳ ಸ್ಥಿತಿ ಚೇತರಿಕೆ, ಕುಸಿಯುತ್ತಿರುವ ಅರ್ಥ ವ್ಯವಸ್ಥೆಯನ್ನು ತಡೆಯಲು ಹೇಗೆ ಯೋಜನೆ ರೂಪಿಸುತ್ತಾರೆ ಅನ್ನೋದೆ ಬೃಹತ್ ಪ್ರಶ್ನೆಯಾಗಿದೆ
ಆರ್ಥಿಕ ವ್ಯವಸ್ಥೆ, ಅಭಿವೃದ್ಧಿ ಕುಂಠಿತ, ಉದ್ಯಮದಲ್ಲಿ ನಷ್ಟ, ಜಿಡಿಪಿ ಕುಸಿತದಂತಹ ಸಮಸ್ಯೆಗಳು ಪ್ರಸ್ತುತ ಭಾರತದ ಜನತೆಯನ್ನು ಹೈರಾಣಾಗಿಸಿವೆ. ಒಂದು ಕಡೆ ಕೆಲಸ ಕಳೆದುಕೊಂಡು ದಿಕ್ಕು ತೋಚದೆ ಕುಳಿತಿರುವ ನೌಕರರು, ಉದ್ಯಮದಲ್ಲಿ ಭಾರಿ ನಷ್ಟ ಅನುಭವಿಸಿ ಬಾಗಿಲು ಮುಚ್ಚುತ್ತಿರುವ ಕಂಪನಿಗಳು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆರ್ಥಿಕ ಕುಸಿತ ದೇಶದ ಉತ್ಪಾದನೆಗೆ ಹೊಡೆತ ನೀಡಿವೆ. ಸಂಪೂರ್ಣವಾಗಿ ಬಿದ್ದು ಹೋಗಿರುವ ಅಟೋಮೊಬೈಲ್, ವಾಹನ ಉದ್ಯಮ, ಪ್ರೋತ್ಸಾಹವಿಲ್ಲದೇ ಪ್ರಾಕೃತಿಕ ವಿಕೋಪದಿಂದ ಸೊರಗಿರುವ ಕೃಷಿ, ಬಂಡವಾಳವಿಲ್ಲದೆ ಸ್ತಬ್ಧವಾಗಿರುವ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದನ್ನು ಸಾರಿ ಸಾರಿ ಹೇಳುತ್ತಿವೆ.