ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮುಂದುವರಿಯುತ್ತಲೇ ಇದೆ. ಲಕ್ಷಾಂತರ ಯುವಜನತೆ ಅರ್ಹ ಉದ್ಯೋಗವೇ ಇಲ್ಲವಾಗಿದೆ. ಉನ್ನತ ಪದವೀಧರರು ಈ ಮೊದಲು ಡೈವರ್ಗಳಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವುದು ಕಂಡು ಬಂದಿತ್ತು. ಇದೀಗ ಕಲ್ಯಾಣ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿದ್ದ ಕೇವಲ 15 ಸೂಪರಿಂಟೆಂಡೆಂಟ್ ಹುದ್ದೆಗಳಿಗೆ 25,000ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ದೇಶದಲ್ಲಿನ ನಿರುದ್ಯೋಗದ ಚಿತ್ರಣವನ್ನು ಬಿಚ್ಚಿಟ್ಟಿದೆ.
15 ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಜನವರಿ 6 ಮತ್ತು 7 ರಂದು ಪರೀಕ್ಷೆಗಳನ್ನು ನಡೆಯಲಿದೆ. ಇದಕ್ಕೆ 25,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳಿದ್ದರೂ, ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿದೆ. ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ರಾಜ್ಯದಲ್ಲಿ 2.56 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ, ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆಗೆ ಹಣಕಾಸು ಇಲಾಖೆಯು ಒಪ್ಪಿಗೆಯನ್ನು ನೀಡಲು ಸಾಧ್ಯವಾಗದ ಕಾರಣ ನೇಮಕಾತಿ ಬಾಕಿ ಉಳಿದಿದೆ.
ರಾಜ್ಯದ ಸರಕಾರಿ ಇಲಾಖೆಗಳು ಗಣನೀಯವಾಗಿ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ 75,000 ಖಾಲಿ ಹುದ್ದೆಗಳು, ಆರೋಗ್ಯ ಕ್ಷೇತ್ರದಲ್ಲಿ 35,000 ಮತ್ತು ಗೃಹ ಇಲಾಖೆಯಲ್ಲಿ 22,000 ಹುದ್ದೆಗಳು ಖಾಲಿ ಇದೆ. ಕಂದಾಯ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಪಶುಸಂಗೋಪನೆ, ಹಣಕಾಸು ಇಲಾಖೆಗಳಲ್ಲಿ ತಲಾ 10,000 ಖಾಲಿ ಹುದ್ದೆಗಳು ಖಾಲಿ ಇದೆ.
ಇತ್ತೀಚಿನ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಡೇಟಾ ಪ್ರಕಾರ, ಭಾರತದ ನಿರುದ್ಯೋಗ ದರವು ನವೆಂಬರ್ 2023ರಲ್ಲಿ 10.09%ಕ್ಕೆ ಹೆಚ್ಚಳವಾಗಿದ್ದು, ಇದು ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿರುವುದಾಗಿದೆ. ಸೆಪ್ಟೆಂಬರ್ 2023ರ ವೇಳೆ ನಿರುದ್ಯೋಗದ ದರವು 7.09% ಆಗಿತ್ತು. ಇದು ನವಂಬರ್ಗೆ ತಲುಪಿದಾಗ ಮೂರು ಶೇಕಡಾವಾರು ಹೆಚ್ಚಳವನ್ನು ಸೂಚಿಸುತ್ತದೆ. ಗ್ರಾಮೀಣ ನಿರುದ್ಯೋಗವು 6.2% ರಿಂದ 10.82% ಕ್ಕೆ ಏರಿದೆ ಮತ್ತು ನಗರ ಪ್ರದೇಶದಲ್ಲಿನ ನಿರುದ್ಯೋಗದ ದರವು ನವೆಂಬರ್ನಲ್ಲಿ 8.44% ಕ್ಕೆ ತಲುಪಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಈ ಕುರಿತು ಮಾತನಾಡಿದ್ದು, ಬಿಲ್ ಕಲೆಕ್ಟರ್ಗಳಂತಹ ಹುದ್ದೆಗಳಿಗೆ ಇಂಜಿನಿಯರ್ಗಳು, ಎಂಬಿಎ ಪದವೀಧರರು ಸೇರಿ ಉನ್ನತ ಪದವಿ ಪಡೆದ ಯುವ ಜನತೆ ಅರ್ಜಿ ಸಲ್ಲಿಸುವುದನ್ನು ಕಾಣಬಹುದು. ಕಳೆದ ವರ್ಷ ಜಲಸಂಪನ್ಮೂಲ ಇಲಾಖೆಯಲ್ಲಿ 10 ಚಾಲಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, 1.8 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಕೋವಿಡ್ ನಂತರ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.
ಈ ಕುರಿತು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದು, ನಾವು ದೊಡ್ಡ ಮಟ್ಟದಲ್ಲಿ ಹುದ್ದೆಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಒಂದು ಇಲಾಖೆಯಲ್ಲಿ 100 ಹುದ್ದೆಗಳು ಖಾಲಿಯಿದ್ದರೆ, ಹಣಕಾಸು ಇಲಾಖೆ ಅನುಮತಿ ನೀಡದ ಕಾರಣ ನಾವು ಕನಿಷ್ಠ 10 ಹುದ್ದೆಯನ್ನು ಕೂಡ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಸರ್ಕಾರ ಅರ್ಜಿ ಆಹ್ವಾನಿಸಿತ್ತು. 50,000 ಖಾಲಿ ಹುದ್ದೆಗಳಿದ್ದರೂ, ಹಣಕಾಸು ಇಲಾಖೆಯು 15,000ಕ್ಕೆ ಮಾತ್ರ ತನ್ನ ಒಪ್ಪಿಗೆ ನೀಡಿದೆ. 1.3 ಲಕ್ಷಕ್ಕೂ ಹೆಚ್ಚು ಜನರು ಪರೀಕ್ಷೆಯನ್ನು ಬರೆಯುತ್ತಾರೆ ಎಂದು ವರದಿಯು ತಿಳಿಸಿದೆ.
ಇದನ್ನು ಓದಿ: ಭಾರತದ ಪ್ರಧಾನಿಯೋರ್ವರು ಕೊನೆಯ ಪತ್ರಿಕಾಗೋಷ್ಟಿ ನಡೆಸಿ ಇಂದಿಗೆ 10 ವರ್ಷ!