2023ರ ಇಡೀ ವರ್ಷ ಹೋರಾಟದ ವರ್ಷವಾಗಬೇಕು ಹಾಗೂ 2024ರ ಚುನಾವಣೆಯಲ್ಲಿ ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನ ನಿರ್ಣಯಿಸಿದೆ. ಕಾರ್ಮಿಕರು, ರೈತರು ಹಾಗೂ ಕೂಲಿಕಾರರ ಬದುಕನ್ನು ಕಸಿಯುತ್ತಿರುವ ಸರ್ಕಾರಗಳನ್ನು ಮತ್ತು ಅವುಗಳ ನೀತಿಗಳನ್ನು ಕಿತ್ತೊಗೆಯಲು ಇಡೀ ದೇಶದ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಜಾತಿ, ಧರ್ಮ, ವರ್ಣ, ವರ್ಗ ಭೇದಗಳನ್ನು ಮರೆತು ಐಕ್ಯ ಹೋರಾಟ ನಡೆಸಬೇಕು ಎಂದು ಸಿಐಟಿಯು ಕರೆ ನೀಡಿದೆ.
ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ದೇಶದ ಪ್ರಮುಖ ಕಾರ್ಮಿಕ ಸಂಘಟನೆಯಾದ ‘ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್’ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ನಡೆದಿದ್ದು, ಭಾನುವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಸುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ವೇಳೆ ದುಡಿಯುವ ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಕೈಗೊಂಡಿರುವ ಹಲವು ನಿರ್ಣಯಗಳನ್ನು ಘೋಷಿಸಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಅವರು, “ಆರ್ಎಸ್ಎಸ್ ಅಣತಿಯಂತೆ ಒಕ್ಕೂಟ ಸರ್ಕಾರ ನಡೆಯುತ್ತಿದ್ದು, ಧರ್ಮದ ರಾಜಕಾರಣ ಮಾಡಿ ಜನರನ್ನು ಬೀದಿಗೆ ತಳ್ಳುತ್ತಿದೆ. ಅದಾನಿ, ಅಂಬಾನಿಯಂತಹ ದೇಶದ ಶ್ರೀಮಂತರ ಸಂಪತ್ತನ್ನು ಹೆಚ್ಚುಮಾಡಲು ರೈತರು, ಕಾರ್ಮಿಕರು, ಬಡವರ ಬದುಕನ್ನು ಜರ್ಜರಿತಗೊಳಿಸಿದೆ. ಇಂತಹ ಸರ್ಕಾರಕ್ಕೆ ಮಾತಿನ ಮೂಲಕ ಹೇಳಿದರೆ ತಿಳಿಯಲ್ಲ. ಹಾಗಾಗಿ ದೇಶದ ಜನರು, ರೈತರು ಕಾರ್ಮಿಕರು ಐಕ್ಯತೆ ಸಾಧಿಸಿ ಹೋರಾಟದ ಮೂಲಕವೇ ಅವರನ್ನು ಕಿತ್ತೊಗೆಯಬೇಕು” ಎಂದು ಕರೆ ನೀಡಿದರು.
“ನಾಲ್ಕು ಕಾರ್ಮಿಕ ತಿದ್ದುಪಡಿ ಮಸೂದೆಗಳನ್ನು ಜಾರಿ ತಂದು ಕಾರ್ಮಿಕರು ಸಂಘ ಕಟ್ಟುವ ಹಕ್ಕನ್ನು ಕಸಿಯಲು ಮುಂದಾಗಿದೆ. ಕಾರ್ಮಿಕರ ಹಕ್ಕುಗಳನ್ನು ಕಸಿದು ಮತ್ತೆ ಗುಲಾಮಿ ಸಂಸ್ಕೃತಿಯನ್ನು ಜಾರಿಗೆ ತಂದು ಕೆಲಸದ ಅವಧಿಯನ್ನು ಎಂಟರಿಂದ 12 ಗಂಟೆಗೆ ಏರಿಸಲು ಒಕ್ಕೂಟ ಸರ್ಕಾರ ಮುಂದಾಗಿದ್ದು, ಅದನ್ನು ಕಾರ್ಮಿಕ ವರ್ಗ ಹಾಗೂ ಸಿಐಟಿಯು ಪ್ರಬಲ ಹೋರಾಟದಿಂದ ಹಿಮ್ಮೆಟ್ಟಿಸಿವೆ. ಮುಂದೆಯೂ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿಗಳನ್ನು ಹೋರಾಟದ ಮೂಲಕ ಬಗ್ಗು ಬಡಿಯಬೇಕು” ಎಂದು ಅವರು ಹೇಳಿದರು.
40% ಸರ್ಕಾರ ಕಿತ್ತೊಗೆಯೋಣ; ಮೀನಾಕ್ಷಿ ಸುಂದರಂ
ಸಭೆಯಲ್ಲಿ ಮಾತನಾಡಿದ ಸಿಐಟಿಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ,“ಧರ್ಮವನ್ನು ತೋರಿಸಿ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿರುವ 40% ಸರ್ಕಾರವನ್ನು ಸಂಪೂರ್ಣವಾಗಿ ಕಿತ್ತು ಬಿಸಾಕಬೇಕು. ಆ ನಿಟ್ಟಿನಲ್ಲಿ 2023ರ ಇಡೀ ವರ್ಷ ಹೋರಾಟದ ವರ್ಷವಾಗಬೇಕು. ದೆಹಲಿ ರೈತ ಹೋರಾಟ ಮೋದಿ ಸರ್ಕಾರಕ್ಕೆ ಯಾವ ಭಾಷೆಯಲ್ಲಿ ಪಾಠ ಕಲಿಸಿತೋ ಅದೇ ಹೋರಾಟದ ಭಾಷೆಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇಡೀ ದೇಶದ ಜನ ಅನುಸರಿಸಬೇಕು” ಎಂದು ಕರೆ ಹೇಳಿದರು.
“ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಜನ ಸಾಮಾನ್ಯರು ಆಯ್ಕೆ ಮಾಡಿರುವುದಲ್ಲ. ಬದಲಾಗಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರವಾಗಿ ಆಯ್ಕೆಯಾಗಿದ್ದವರನ್ನು ಖರೀದಿಸಿ ರೂಪುಗೊಂಡಿರುವುದು. ಹಾಗಂತ ಬಿಜೆಪಿ ತೊಲಗಿಸಿ ಕಾಂಗ್ರೆಸ್, ಜೆಡಿಎಸ್ ಅಥವಾ ಇನ್ಯಾವುದೊ ಪಕ್ಷ ಅಧಿಕಾರಕ್ಕೆ ಬಂದರೆ ನಮ್ಮ ಪರಿಸ್ಥಿತಿ ಬದಲಾಗುತ್ತದೆ ಎಂದು ನಂಬಲಾಗಿದೆ. ಆದರೆ, ಸರ್ಕಾರಗಳು ಅಥವಾ ಅದರ ಪ್ರತಿನಿಧಿಗಳು ಮಾತ್ರವಲ್ಲ ಅವುಗಳ ನೀತಿಗಳು ಬದಲಾಗಬೇಕಿದೆ” ಎಂದು ಅವರು ಪ್ರತಿಪಾದಿಸಿದರು.
“ಹಿಂದೆ ಐಟಿಐ ಓದಿದರೆ ಸಾಕಿತ್ತು, ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡಿ ನಂತರ ಖಾಯಂ ಉದ್ಯೋಗ ಪಡೆಯುವ ಅವಕಾಶ ಇತ್ತು. ಅದರೆ ಇಂದಿನ ಯುವಜನತೆ ಏನೇ ಶಿಕ್ಷಣ ಪಡೆದರೂ ಯಾವುದೇ ಮಾನ್ಯತೆ ಇಲ್ಲ. ಆದರೆ, ಒಂದು ಕಾರ್ಪೊರೇಟ್ ಕಂಪನಿ ನೀಡುವ ಸರ್ಟಿಫಿಕೇಟ್ಗೆ ಮಾನ್ಯತೆ ಪಡೆಯುತ್ತಿದೆ. ಕಾರ್ಮಿಕ ಕಾನೂನುಗಳ ಮೂಲಕ ಪರ್ಮನೆಂಟ್ ಕಾರ್ಮಿಕರನ್ನು ಮನೆಗೆ ಕಳಿಸುತ್ತ ಟ್ರೈನಿಗಳನ್ನು ಕೆಲಸಕ್ಕೆ ತೆಗೆದುಕೊಂಡು ಶೋಷಿಸಲಾಗುತ್ತಿದೆ. ಕೈಗಾರಿಕೆ ಸ್ಥಾಪಿಸಲು ಭೂಮಿ ಕೊಟ್ಟ ರೈತರ ಮಕ್ಕಳಿಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ” ಎಂದು ಮೀನಾಕ್ಷಿ ಸುಂದರಂ ಅಕ್ರೋಶ ವ್ಯಕ್ತಪಡಿಸಿದರು.
“ಸದಾ ಮಾಧ್ಯಮಗಳ ಮುಂದೆ ಸೈನಿಕರ ಬಗ್ಗೆ ಮಾತನಾಡುವ ಈ ಸರ್ಕಾರ, ದೇಶದ ರಕ್ಷಣೆ ಮಾಡುವವರನ್ನೂ ಕಡೆಗಣಿಸಲು ಮುಂದಾಗಿದೆ. ಅಲ್ಲಿಯೂ ಅಗ್ನಿವೀರ್ ಎಂಬ ಹೆಸರಿನಲ್ಲಿ ದೇಶದ ರಕ್ಷಣಾ ವಲಯವನ್ನು ಕಡೆಗಣಿಸಿದೆ. ಅದನ್ನೂ ಕೂಡ ಖಾಸಗಿಯವರಿಗೆ ವಹಿಸಲಾಗುತ್ತಿದೆ. ಗಡಿಯಲ್ಲಿ ಜೀವ ಕೊಡುವವರಿಗೂ ಉದ್ಯೋಗ ಭದ್ರತೆಯನ್ನು ಕಸಿಯುವ ಹುನ್ನಾರ ಮಾಡಿದೆ. ದೇಶದಲ್ಲಿ ಮಾತ್ರವಲ್ಲ ರಾಜ್ಯದಲ್ಲಿಯೂ ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ಆಸ್ತಿ, ಕಾರ್ಖಾನೆಗಳು ಸೇರಿದಂತೆ ಎಲ್ಲವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಬಿಇಎಂಎಲ್, ಭದ್ರಾವತಿಯ ವಿಶ್ವೇಶ್ವರಯ್ಯ ಕಾರ್ಖಾನೆಯನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ” ಎಂದು ಅವರು ಹೇಳಿದರು.
ಕೇರಳದ ಎಡಪಂಥೀಯ ಸರ್ಕಾರ ಕಾರ್ಮಿಕರ ಪರವಾಗಿದೆ: ಡಾ.ಕೆ. ಹೇಮಲತ
ಸಮ್ಮೇಳನದಲ್ಲಿ ಮಾತನಾಡಿದ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ. ಹೇಮಲತ, “ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳ ಕಾರ್ಮಿಕ ನಾಯಕರು ಸಮ್ಮೇಳನದಲ್ಲಿ ನಡೆದ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಆಗ ಅಲ್ಲಿನ ಬಿಜೆಪಿ ಸರ್ಕಾರದ ನೀತಿಗಳು ಎಷ್ಟು ತೊಂದರೆ ಮಾಡುತ್ತಿವೆ ಎಂದು ಅವರು ವಿವರಿಸಿದ್ದಾರೆ. ಅದೇ ರೀತಿ ಕೇರಳದ ಕಾರ್ಮಿಕ ನಾಯಕರು ಕೂಡಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅವರು ಕೇರಳದ ಎಡಪಂಥೀಯ ಸರ್ಕಾರ ಕಾರ್ಮಿಕರ ಪರವಾಗಿ ನಿಂತಿದೆ ಎಂದು ವಿವರಿಸಿದ್ದರು” ಎಂದು ಅವರು ಹೇಳಿದರು.
“ಕೇರಳದ ಎಡಪಂಥೀಯ ಸರ್ಕಾರ ಖಾಸಗೀಕರನದ ವಿರುದ್ಧ ನಿಂತಿದೆ. ಕೊರೊನಾ ಸಂದರ್ಭದಲ್ಲಿ ಕಾರ್ಮಿಕರು, ರೈತರು ಹಾಗೂ ಬಡವರ ಹಾಗೂ ಆ ರಾಜ್ಯದ ಜನರಿಗಾಗಿ ಕೇರಳ ಸರ್ಕಾರ ಕೆಲಸ ಮಾಡಿದೆ. ಹಾಗಾಗಿ ದೇಶದ ಬೇರೆ ರಾಜ್ಯಗಳಲ್ಲಿ ಕೂಡಾ ಅದೇ ರೀತಿಯ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ. ಅದಕ್ಕಾಗಿ ನಾವು ನಿರ್ಣಯ ಕೈಗೊಂಡಿದ್ದೇವೆ” ಎಂದು ಹೇಮಲತ ಅವರು ಹೇಳಿದರು.
ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ಹಾಗೂ ಕಾರ್ಮಿಕರು, ಕೊಳಗೇರಿ ನಿವಾಸಿಗಳ ಬದುಕು, ಮನೆಗೆಲಸದವರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ನಿರ್ಮಾಣಗೊಂಡ ಕಿರುಚಿತ್ರಗಳನ್ನು ಸಿಐಟಿಯು ಸಮ್ಮೇಳನದಲ್ಲಿ ಪ್ರದರ್ಶನ ನಡೆಸಿ ಬಹುಮಾನ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕೇರಳ, ತಮಿಳುನಾಡು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಕಾರ್ಮಿಕ ಪ್ರತಿನಿಧಿಗಳು ಸೇರಿದಂತೆ, ಕರ್ನಾಟಕದ ಎಲ್ಲಾ ಜಿಲ್ಲೆಗಳ ಕಾರ್ಮಿಕರು ಸೇರಿದ್ದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದವು ತುಂಬಿ ತುಳುಕಿತ್ತು. ಸಮಾರಂಭದಲ್ಲಿ ಶ್ರಮಿಕ ವರ್ಗದ ಹೋರಾಟ, ಇತಿಹಾಸ ನೆಪಿಸುವ, ಡೊಳ್ಳು ಕುಣಿತ, ತಮಟೆ ವಾದ್ಯಗಳಂತಹ ಗ್ರಾಮೀಣ ಕಲೆಯನ್ನು ಪ್ರೋತ್ಸಾಹಿಸುವ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಜರುಗಿತು.
ಇದನ್ನೂ ಓದಿ: ಬೆಂಗಳೂರು: ಕಾರ್ಮಿಕ ಸಂಘಟನೆ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟನೆ