ಈ ರೀತಿಯ ಘಟನೆಗಳು ಬೇರೆಡೆಯೂ ನಡೆದಿವೆ ಎಂದು ಹೇಳುವ ಮೂಲಕ ಮಣಿಪುರದಲ್ಲಿ ನಡೆದ ಅಮಾನವೀಯ ಕ್ರೌರ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೂವರು ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಪ್ರಕರಣದ ಅರ್ಜಿ ಆಲಿಸಿದ ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠವು, “ದೇಶದ ಎಲ್ಲಾ ಭಾಗಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ನಡೆಯುತ್ತಿವೆ ಎಂಬ ಸತ್ಯ ಹೇಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಮಣಿಪುರದಂತಹ ದೇಶದ ಒಂದು ಭಾಗದಲ್ಲಿ ನಡೆಯುತ್ತಿರುವ ಇಂತಹ ಅಪರಾಧಗಳು ಇನ್ನೊಂದರಲ್ಲಿಯೂ ನಡೆಯುತ್ತಿದೆ ಎಂಬ ಕಾರಣಕ್ಕೆ ನಿಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ. ನಾವು ಮಣಿಪುರದೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂಬುದು ಪ್ರಶ್ನೆಯಾಗಿದೆ. ಆ ಕುರಿತು ಮಾತನಾಡಿ. ಭಾರತದ ಎಲ್ಲಾ ಹೆಣ್ಣುಮಕ್ಕಳನ್ನು ರಕ್ಷಿಸಿ ಎಂದು ನೀವು ಹೇಳುತ್ತಿದ್ದೀರಾ ಅಥವಾ ಯಾರನ್ನೂ ರಕ್ಷಿಸಬೇಡಿ ಎಂದು ಹೇಳುತ್ತಿದ್ದೀರಾ?” ಎಂದು ಸಿಜೆಐ ಪ್ರಶ್ನಿಸಿದರು.
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಚತ್ತೀಸ್ಘಡ ಸೇರಿದಂತೆ ದೇಶದ ಎಲ್ಲೆಡೆ ನಡೆಯುತ್ತಿವೆ ಎಂಬ ಸರ್ಕಾರದ ಪರವಾಗಿನ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, “ನಾವು ಮಣಿಪುರದಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಮರೆಯಬಾರದು” ಎಂದಿದ್ದಾರೆ.
ನಾಗರಿಕ ಸಮಾಜದ ಗುಂಪುಗಳ ಪ್ರತಿರೋಧದಿಂದಾಗಿ ಮಣಿಪುರ ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಮಣಿಪುರದಲ್ಲಿ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ಎಷ್ಟು ದಾಖಲಾಗಿವೆ ಎಂದು ಹೇಳಲು ಸರ್ಕಾರದ ಬಳಿ ಈಗ ಮಾಹಿತಿ ಇಲ್ಲ. ಹಿಂಸಾಚಾರ ಎಸಗಿದ ಅಪರಾಧಿಗಳೊಂದಿಗೆ ಪೊಲೀಸರು ಸಹಕರಿಸುತ್ತಿದ್ದಾರೆ. ಮಹಿಳೆಯರು ಪೊಲೀಸರಿಂದ ರಕ್ಷಣೆ ಕೋರಿದರು, ಆದರೆ ಪೊಲೀಸರು ಅವರನ್ನು ಉನ್ಮತ್ತ ಗುಂಪಿನತ್ತ ಕರೆದೊಯ್ದರು. ಇದು ಅವರ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ತೋರಿಸುತ್ತದೆ ಎಂದು ಮಹಿಳೆಯರನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತರು ತಮ್ಮ ಗುರುತನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯಾಲಯದ ದಾಖಲೆಗಳಲ್ಲಿ ಇಬ್ಬರು ಮಹಿಳೆಯರನ್ನು “X” ಮತ್ತು “Y” ಎಂದು ಉಲ್ಲೇಖಿಸಲಾಗಿದೆ. ಐಜಿ ಶ್ರೇಣಿಯ ಪೊಲೀಸ್ ಅಧಿಕಾರಿಯ ನೇತೃತ್ವದ ಸ್ವತಂತ್ರ ಎಸ್ಐಟಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಮತ್ತು ವಿಚಾರಣೆಯನ್ನು ರಾಜ್ಯದ ಹೊರಗೆ ವರ್ಗಾಯಿಸಬೇಕು ಎಂದು ಅವರು ಕೋರಿದ್ದಾರೆ. ರಾಜ್ಯ ಪೊಲೀಸರ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ತಿಳಿಸಿದ ಅವರು, ತಮಗೆ ಭದ್ರತೆ ಮತ್ತು ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ಹತ್ತಿರದ ಮ್ಯಾಜಿಸ್ಟ್ರೇಟ್ಗೆ ನಿರ್ದೇಶನವನ್ನು ಕೋರಿದ್ದಾರೆ. ಕೇಂದ್ರವು ಈಗಾಗಲೇ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ.
ಜುಲೈ 20 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ರವರು ನೀವು ಕ್ರಮ ಕೈಗೊಳ್ಳದಿದ್ದರೆ ನಾವು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನಂತರ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ.
ಇದನ್ನೂ ಓದಿ; INDIAದ ನಿಯೋಗವು ಮಣಿಪುರ ಜನರ ಕಣ್ಣೀರು ಒರೆಸಿ ಬಂದಿದೆ: ರಾಘವ್ ಚಡ್ಡಾ