ತೆಲಂಗಾಣದ ಮಾಜಿ ಬಿಆರ್ಎಸ್ ಶಾಸಕ ಮಂಚಿರೆಡ್ಡಿ ಕಿಶನ್ ರೆಡ್ಡಿ ಮತ್ತು ಐಎಎಸ್ ಅಧಿಕಾರಿ ಅಮೋಯ್ ಕುಮಾರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇಬ್ರಾಹಿಂಪಟ್ಟಣ ಪುರಸಭೆಯ ಅಧ್ಯಕ್ಷೆ ಕಪ್ಪಾರಿ ಶ್ರವಂತಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಬೆದರಿಕೆ, ಜಾತಿನಿಂದನೆ ಆರೋಪದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬುಡಗ ಜಂಗಮ ಪರಿಶಿಷ್ಟ ಜಾತಿಗೆ ಸೇರಿದ ಶ್ರವಂತಿ ಅವರು, ಇಬ್ರಾಹಿಂಪಟ್ಟಣ ಕ್ಷೇತ್ರದ ಮಾಜಿ ಶಾಸಕ ಬಿಆರ್ಎಸ್ನ ಮಂಚಿರೆಡ್ಡಿ ಕಿಶನ್ ರೆಡ್ಡಿ ಅವರು ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ತನ್ನ ಗೆಲುವಿಗೆ 2.5 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ, ಪುರಸಭೆಯ ಭೂಮಿಯನ್ನು ಪರಭಾರೆ ಮಾಡಲು ಒಪ್ಪದ ಕಾರಣ, ಶಾಸಕರು ತನಗೆ ಬೆದರಿಕೆ ಹಾಕಿದರು ಮತ್ತು ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಶಾಸಕರೊಂದಿಗಿನ ವಿವಾದದ ನಡುವೆ ರಂಗಾರೆಡ್ಡಿ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಅಮೋಯ್ ಕುಮಾರ್ ರಜೆಯ ಮೇಲೆ ಹೋಗಲು ನನಗೆ ಸಲಹೆ ನೀಡಿದರು. ಕೆಳ ಜಾತಿಯ ಜನರು ಸವರ್ಣಿಯ ಜಾತಿಗಳ ಜನರೊಂದಿಗೆ ಜಗಳವಾಡುವುದು ಒಳ್ಳೆಯದಲ್ಲ ಎಂದು ಸೂಚಿಸಿದರು. ನಾನು ಹಿಂದೆ ಸರಿಯದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದರು ಮತ್ತು ನನಗೆ ಶೋಕಾಸ್ ನೋಟಿಸ್ ಸಹ ಕಳುಹಿಸಿದ್ದಾರೆ ಎಂದು ಶ್ರವಂತಿ ಆರೋಪಿಸಿದ್ದಾರೆ.
ಇಬ್ರಾಹಿಂಪಟ್ಟಣ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷೆ ಅಕುಲಾ ಯಾದಗಿರಿಯಿಂದ ಮಾಜಿ ಶಾಸಕ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ 2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಶ್ರವಂತಿ ದೂರಿನಲ್ಲಿ ಆರೋಪಿಸಿದ್ದಾರೆ.
ಶ್ರವಂತಿ ಅವರ ದೂರಿನ ಆಧಾರದ ಮೇಲೆ ರಾಚಕೊಂಡ ಪೊಲೀಸರು ಬಿಆರ್ಎಸ್ ಶಾಸಕ ಮಂಚಿರೆಡ್ಡಿ ಕಿಶನ್ ರೆಡ್ಡಿ ಮತ್ತು ಐಎಎಸ್ ಅಧಿಕಾರಿ ಅಮೋಯ್ ಕುಮಾರ್ ವಿರುದ್ಧ SC/ST ದೌರ್ಜನ್ಯ ತಡೆ ಕಾಯಿದೆಯ ಸಂಬಂಧಿತ ಸೆಕ್ಷನ್ಗಳ ಜೊತೆಗೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504 (ಉದ್ದೇಶಪೂರ್ವಕವಾಗಿ ಯಾರನ್ನಾದರೂ ಅವಮಾನಿಸುವ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕುರಿತು ಬಹಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರೂ ಬಿಆರ್ಎಸ್ ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರವಂತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಸಿಪಿಐ(ಎಂ) ಬೆನ್ನಲ್ಲೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ತಿರಸ್ಕರಿಸಿದ ಟಿಎಂಸಿ!