ಪ್ರಶ್ನೆಗಾಗಿ ನಗದು ಪಡೆದ ಆರೋಪ ಎದುರಿಸುತ್ತಿರುವ, ಲೋಕಸಭೆ ನೈತಿಕ ಸಮಿತಿ ಶಿಫಾರಸ್ಸಿನ ಮೇಲೆ ಸಂಸದೆ ಸ್ಥಾನದಿಂದ ಅಮಾನತುಗೊಂಡಿರುವ ಮಹುವಾ ಮೊಯಿತ್ರಾ ಅವರ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.
ತನ್ನ ಉಚ್ಚಾಟನೆ ಆದೇಶದ ವಿರುದ್ಧ ಟಿಎಂಸಿ ಸಂಸದೆ ಮಹುವಾ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಇಂದು ವಿಚಾರಣೆ ನಡೆಸಲಿದೆ.
ಮಹುವಾ ಅವರು ಸಂಸದೀಯ ಪೋರ್ಟಲ್ನ ಲಾಗಿನ್ ಪಾಸ್ವರ್ಡ್ಗಳನ್ನು ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದಾರೆ.
ನೈತಿಕ ಸಮಿತಿ ಶಿಫಾರಸು ಆಧರಿಸಿ ಡಿಸೆಂಬರ್ 8 ರಂದು ಮೊಯಿತ್ರಾ ಅವರನ್ನು ಲೋಕಸಭೆ ಸ್ಪೀಕರ್ ಸಂಸತ್ತಿನಿಂದ ಉಚ್ಚಾಟಿಸುವ ನಿರ್ಣಯ ಅಂಗೀಕರಿಸಿದರು. ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಲು ದುಬಾರಿ ಉಡುಗೊರೆಗಳು ಸೇರಿದಂತೆ ಲಂಚ ಸ್ವೀಕರಿಸಿದ್ದಾರೆ ಎಂದು ನೈತಿಕ ಸಮಿತಿ ಆರೋಪಿಸಿತ್ತು. ವಕೀಲ ಜೈ ಅನಂತ್ ದೇಹದ್ರಾಯ್ ಅವರ ಅಫಿಡವಿಟ್ ಆಧಾರದ ಮೇಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನೀಡಿದ ದೂರಿನ ಮೇರೆಗೆ ಈ ಬೆಳವಣಿಗೆ ನಡೆದಿದೆ.
ಈ ಬಗ್ಗೆ ಆಕ್ರೋಶ ಹೊರಹಾಕಿದ್ದ ಮಹುವಾ, ‘ಕಾಂಗರೂ ಕೋರ್ಟ್ ಮೂಲಕ ನೇಣು ಹಾಕುವುದು’ ಎಂದು ಕಿಡಿಕಾರಿದ್ದರು. ಪ್ರತಿಪಕ್ಷ ನಾಯಕರ ಧ್ವನಿ ಅಡಗಿಸಲು ಸಂಸದೀಯ ಸಮಿತಿಯನ್ನು ಸರ್ಕಾರವು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಅಸ್ತಿತ್ವದಲ್ಲಿ ಇಲ್ಲದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಾನು ತಪ್ಪಿತಸ್ಥಳೆಂದು ಕಂಡುಬಂದಿದೆ. ನಾನು ಪಡೆದುಕೊಂಡಿದ್ದೇನೆ ಎನ್ನಲಾಗಿರುವ ನಗದು ಅಥವಾ ಉಡುಗೊರೆಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಮಹುವಾ ಹೇಳಿದ್ದಾರೆ.
ಇದನ್ನೂ ಓದಿ; ಫ್ಯಾಸಿಸ್ಟರ ನಿರಂಕುಶ ವರ್ತನೆ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ; ಸಂಸದರ ಅಮಾನತು ಆದೇಶಕ್ಕೆ ಉದಯನಿಧಿ ಕಿಡಿ