ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣದ ಐದನೇ ಆರೋಪಿ, ಕೋಲ್ಕತ್ತಾ ನಿವಾಸಿ ಲಲಿತ್ ಝಾ ಅವರನ್ನು ದೆಹಲಿ ಪೊಲೀಸರು ಗುರುವಾರ ಸಂಜೆ ದೆಹಲಿಯಲ್ಲಿ ಬಂಧಿಸಿದ್ದರು. ಇದೀಗ ಝಾ ಮತ್ತು ಟಿಎಂಸಿ ಶಾಸಕ ತಪಸ್ ರಾಯ್ ಇರುವ ಫೋಟೋವನ್ನು ಬಿಜೆಪಿ ಟ್ವೀಟ್ ಮಾಡಿದ್ದು, ಉಭಯ ಪಕ್ಷಗಳು ಎಕ್ಸ್ನಲ್ಲಿ ವಾಗ್ವಾದಕ್ಕಿಳಿದಿವೆ.
ಗುರುಗ್ರಾಮ ನಿವಾಸಿ 32 ವರ್ಷದ ಝಾ, 2020ರ ಫೆಬ್ರವರಿ 23ರಂದು ಸರಸ್ವತಿ ಪೂಜೆಯ ಕಾರ್ಯಕ್ರಮದಲ್ಲಿ ತೆಗೆದ ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಟಿಎಂಸಿ ಶಾಸಕ ರಾಯ್ ಇದ್ದಾರೆ.
‘ನಮ್ಮ ಪ್ರಜಾಪ್ರಭುತ್ವದ ದೇಗುಲದ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ ಅವರು ಟಿಎಂಸಿಯ ತಪಸ್ ರಾಯ್ ಅವರೊಂದಿಗೆ ಬಹಳ ಸಮಯದಿಂದ ನಿಕಟ ಒಡನಾಟ ಹೊಂದಿದ್ದರು. ಅವರ ಸಹಕಾರದ ತನಿಖೆಗೆ ಈ ಪುರಾವೆ ಸಾಕಾಗುವುದಿಲ್ಲವೇ’ ಎಂದು ಬಿಜೆಪಿಯ ಪಶ್ಚಿಮ ಬಂಗಾಳದ ಅಧ್ಯಕ್ಷ ಸುಕಾಂತ ಮಜುಂದಾರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಯ್, ‘ಸಾಮಾಜಿಕ ಮಾಧ್ಯಮದ ಪೋಸ್ಟ್ಗೆ ಯಾವುದೇ ಮೌಲ್ಯವಿಲ್ಲ. ಒಬ್ಬ ಸಾರ್ವಜನಿಕ ಪ್ರತಿನಿಧಿಯಾಗಿ ನನಗೆ ಅನೇಕ ಬೆಂಬಲಿಗರು ಮತ್ತು ಸಹವರ್ತಿಗಳು ಇದ್ದಾರೆ. ಈ ಕುರಿತು ತನಿಖೆಯಾಗಲಿ; ಆರೋಪ ಸಾಬೀತಾದರೆ ರಾಜಕೀಯ ತ್ಯಜಿಸುತ್ತೇನೆ. ನಾವು ಸಾರ್ವಜನಿಕ ಜೀವನದಲ್ಲಿ ಇದ್ದೇವೆ, ಅನೇಕ ಜನರು ಫೋಟೋ ತೆಗೆದುಕೊಳ್ಳುತ್ತಾರೆ. ಇದು ಫೆಬ್ರವರಿ 2020 ರಲ್ಲಿ ನಡೆದಿದೆ, ಅಂದರೆ ನಾಲ್ಕು ವರ್ಷಗಳ ಹಿಂದೆ ಎಂದು ನಾನು ಕೇಳಿದೆ. ನನಗೆ ಆತನ ಪರಿಚಯವಿಲ್ಲ. ಸಂಸತ್ತಿನ ಭದ್ರತೆ ಗಂಭೀರ ವಿಷಯವಾಗಿದೆ. ಗಮನವನ್ನು ಬೇರೆಡೆಗೆ ತಿರುಗಿಸುವ ಬದಲು ಸೂಕ್ತ ತನಿಖೆಯಾಗಲಿ’ ಎಂದು ಆಗ್ರಹಿಸಿದ್ದಾರೆ.
TMC connection of Lalit Jha, wanted in the Parliament security breach, now emerges. Several pictures of his with TMC leaders have gone viral.
So far, people involved in the entire episode have been found to have links with the Congress, CPI(Maoist) and now the TMC.
Isn’t it…
— Amit Malviya (@amitmalviya) December 14, 2023
‘ಲಲಿತ್ ಝಾ ಅವರಿಗಿರುವ ಟಿಎಂಸಿ ಸಂಪರ್ಕವು ಬೆಳಕಿಗೆ ಬಂದಿದೆ, ಟಿಎಂಸಿ ನಾಯಕರೊಂದಿಗಿನ ಅವರ ಹಲವಾರು ಚಿತ್ರಗಳು ವೈರಲ್ ಆಗಿವೆ’ ಎಂದು ಬಿಜೆಪಿ ರಾಷ್ಟ್ರೀಯ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಹೇಳಿದ್ದಾರೆ.
‘ಇಲ್ಲಿಯವರೆಗೆ, ಇಡೀ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಕಾಂಗ್ರೆಸ್, ಸಿಪಿಐ (ಮಾವೋವಾದಿ) ಮತ್ತು ಈಗ ಟಿಎಂಸಿಯೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆಂದು ಕಂಡುಬಂದಿದೆ. ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವುದು ಹತಾಶ I.N.D.I ಮೈತ್ರಿ ಎಂಬುದು ಸ್ಪಷ್ಟವಾಗುತ್ತಿದೆಯೇ’ ಎಂದಿದ್ದಾರೆ.
Let's scrutinize the facts: the culprits were granted access by none other than @BJP4Karnataka MP @mepratap. Only 176 Delhi Police personnel were on duty instead of the usual 300 to secure the Parliament.@BJP4India's internal failings led to this unprecedented breach of… https://t.co/prB0SIh3e7
— Kunal Ghosh (@KunalGhoshAgain) December 14, 2023
ಮಾಳವಿಯಾ ಪೋಸ್ಟ್ಗೆ ತಿರುಗೇಟು ಕೊಟ್ಟಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್, ‘ನಾವು ಸತ್ಯವನ್ನು ಪರಿಶೀಲಿಸೋಣ… ಅಪರಾಧಿಗಳಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೊರತುಪಡಿಸಿ ಬೇರೆ ಯಾರೂ ಪ್ರವೇಶ ಪಾಸ್ ನೀಡಲಿಲ್ಲ. ಸಾಮಾನ್ಯವಾಗಿ ಸಂಸತ್ತಿನ ಭದ್ರತೆಗಾಗಿ 300 ಜನ ಇರುತ್ತಿದ್ದರು. ಆದರೆ, ಕೇವಲ 176 ದೆಹಲಿ ಪೊಲೀಸ್ ಸಿಬ್ಬಂದಿ ಮಾತ್ರ ಅಂದು ಕರ್ತವ್ಯದಲ್ಲಿದ್ದರು. ಬಿಜೆಪಿಯ ಆಂತರಿಕ ವೈಫಲ್ಯಗಳು ಸಂಸತ್ತಿನ ಭದ್ರತೆ ಉಲ್ಲಂಘನೆಗೆ ಕಾರಣವಾಯಿತು. ಈಗ, ಈ ಕರ್ತವ್ಯಲೋಪಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವಾಗ, ಅವರ ತಪ್ಪಿನ ಗಮನವನ್ನು ಬೇರೆಡೆ ಸೆಳೆಯಲು ಮಾಳವಿಯಾ ಅವರಂತಹ ಬಿಜೆಪಿ ಪ್ರಚಾರಕರನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ; ಸಂಸತ್ ಭದ್ರತಾ ಲೋಪ: ಬಂಧಿತ ನಾಲ್ವರು 7 ದಿನ ಪೊಲೀಸ್ ಕಸ್ಟಡಿಗೆ