ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಲಾದ 5 ಎಕರೆ ಜಾಗದಲ್ಲಿ ಏಮ್ಸ್ ಮಾದರಿಯ ಸೂಪರ್ ಸ್ಪೆಷಾಲಿಟಿ ಬಾಬ್ರಿ ಆಸ್ಪತ್ರೆ ಕಟ್ಟತ್ತೇವೆ ಎಂದು ಸುನ್ನಿ ವಕ್ಫ್ ಬೋರ್ಡ್ ಘೋಷಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಮುಗಿದ ಕೂಡಲೇ ಈ ಸಂದೇಶ ಹರಿದಾಡಿದ್ದು, ಹೊಸದಾಗಿ ನಿರ್ಮಿಸಲಾಗುವ ಆಸ್ಪತ್ರೆಗೆ ಡಾ.ಕಫೀಲ್ ಖಾನ್ರವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗುವುದು ಎಂದೂ ಸಹ ಹೇಳಲಾಗಿದೆ.
“ಬಾಬರೀ ಮಸೀದಿ ನಿರ್ಮಾಣಕ್ಕೆ ಸುಪ್ರೀಮ್ ಕೋರ್ಟ್ ನೀಡಿದ 5 ಎಕರೆ ಭೂಮಿಯಲ್ಲಿ ಬಾಬರಿ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧಾರ. AIIMS ನ ಮಾದರಿಯಲ್ಲಿ ನಿರ್ಮಾಣವಾಗುವ ಈ ಬಾಬರೀ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲು ನಿರ್ಧಾರ ಮಾಡಿದ ಬಾಬರೀ ಮಸೀದಿ ಟ್ರಸ್ಟಿಗಳ ನಿರ್ಧಾರ ನಿಜಕ್ಕೂ ಶ್ಲಾಘನೀಯವಾಗಿದೆ…” ಎಂದು ನೂರಾರು ಜನರು ಪೋಸ್ಟ್ ಮಾಡಿದ್ದಾರೆ.
ಇದನ್ನು ಮಾಸ್ಟರ್ ಸ್ಟ್ರೋಕ್ ಎಂದು ಕರೆದಿದ್ದು ಹಲವಾರು ಉತ್ತಮ ನಿರ್ಧಾರ ಎಂದು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ.
ಫ್ಯಾಕ್ಟ್ಚೆಕ್:
ವಾಸ್ತವದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ನೀಡಲಾದ 5 ಎಕರೆ ಜಾಗದಲ್ಲಿ ಏನನ್ನು ನಿರ್ಮಿಸಬೇಕೆಂದು ಸುನ್ನಿ ವಕ್ಫ್ ಬೋರ್ಡ್ ನಿರ್ಧಾರ ಮಾಡಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಅಲ್ಲದೇ ಹಲವಾರು ಮಾಧ್ಯಮಗಳು ಅಲ್ಲಿ ಮಸೀದಿ, ಆಸ್ಪತ್ರೆ, ಗ್ರಂಥಾಲಯ ಮತ್ತು ಇಸ್ಲಾಂ ಬಗೆಗಿನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ವರದಿ ಮಾಡಿವೆ.
ಅಯೋಧ್ಯೆಯ ಆ 5 ಎಕರೆ ಜಾಗದಲ್ಲಿ ನಾವು ಆಸ್ಪತ್ರೆ ನಿರ್ಮಿಸಿ ಡಾ.ಕಫೀಲ್ ಖಾನ್ರವರನ್ನು ನಿರ್ದೇಶಕರನ್ನಾಗಿ ನೇಮಿಸುತ್ತೇವೆ ಎಂಬುದು ಸುಳ್ಳು ಸುದ್ದಿ ಎಂದು ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಯ್ಯದ್ ಮಹಮ್ಮದ್ ಶೋಯಬ್ ಇಂಡಿಯಾ ಟುಡೆಗೆ ತಿಳಿಸಿದ್ದಾರೆ.
ನಾವು ಅಲ್ಲಿ ಏನನ್ನು ನಿರ್ಮಿಸಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆಸ್ಪತ್ರೆ, ಮಸೀದಿ, ಗ್ರಂಥಾಲಯ, ಸಂಶೋಧನ ಕೇಂದ್ರ ನಿರ್ಮಿಸಬೇಕು ಎಂದು ಹಲವು ಸಲಹೆಗಳು ಬಂದಿವೆ. ಆದರೆ ನಾವಿನ್ನು ಅಂತಿಮ ನಿರ್ಧಾರ ಮಾಡಿಲ್ಲ ಎಂದು ಶೋಯಬ್ ತಿಳಿಸಿದ್ದಾರೆ.
ಸುನ್ನಿ ವಕ್ಫ್ ಬೋರ್ಡ್ ವತಿಯಿಂದ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ಎಂಬ 15 ಜನರ ಸಮಿತಿ ಇತ್ತೀಚೆಗೆ ರಚನೆಯಾಗಿದೆ. ಅದು ಶೀಘ್ರದಲ್ಲೇ ಸಭೆ ಸೇರಿ ಆ ಜಾಗದಲ್ಲಿ ಏನನ್ನು ನಿರ್ಮಿಸಬೇಕು ಎಂದು ನಿರ್ಧರಿಸಲಿದೆ ಎನ್ನಲಾಗಿದೆ.
ಇನ್ನು ವೈರಲ್ ಆದ ಪೋಸ್ಟ್ನಲ್ಲಿನ ಚಿತ್ರಗಳಿಗೆ ಬಂದರೆ ಆಸ್ಪತ್ರೆಯ ಮಾದರಿ ಚಿತ್ರವು ಲಿಂಕ್ಡ್ಇನ್ ನಿಂದ ತೆಗೆದುಕೊಂಡ ಚಿತ್ರವಾಗಿದ್ದು ಅದಕ್ಕೆ ಬಾಬ್ರಿ ಹಾಸ್ಪಿಟಲ್ ಎಂದು ಫೋಟೊಶಾಪ್ ಮಾಡಿ ಬರೆಯಲಾಗಿದೆ.
ಒಟ್ಟಿನಲ್ಲಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಲಾದ 5 ಎಕರೆ ಜಾಗದಲ್ಲಿ ಏಮ್ಸ್ ಮಾದರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟತ್ತೇವೆ ಎಂದು ಸುನ್ನಿ ವಕ್ಫ್ ಬೋರ್ಡ್ ಘೋಷಿಸಿದೆ ಎಂಬ ಸುದ್ದಿ ಅಧಿಕೃತವಲ್ಲ ಎಂಬುದು ಖಚಿತವಾಗಿದೆ.
ಇದನ್ನೂ ಓದಿ: ಅಮೀರ್ ಖಾನ್ ಮೈದಾ ಹಿಟ್ಟಿನಲ್ಲಿ 15 ಸಾವಿರ ಹಂಚಿದ್ದು ಶುದ್ದ ಸುಳ್ಳು ಸುದ್ದಿ: ಹೀಗೆಳಿದ್ದು ಯಾರು ಗೊತ್ತೆ?