“ದೆಹಲಿಯ ಶ್ರೀರಾಮ್ ಕಾಲೊನಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ದ ನಾಯಕಿ ಅತಿಶಿ ಮರ್ಲೇನಾ ಅವರು ಭಾಷಣ ಮಾಡುವಾಗ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಕ್ಕೆ, ಅಲ್ಲಿಯ ಬಹುಸಂಖ್ಯಾತ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಅತಿಶಿ ಅವರು ಕ್ಷಮೆ ಕೇಳಿ ಭಾಷಣ ಮುಂದುವರಿಸಿದ್ದಾರೆ” ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
मैं सभी हिंदुओं से खासकर क्षत्रिय समुदाय से अपील करूंगा कि वह इस वीडियो को जरूर देखें और सोचे की एकता में कितनी बड़ी ताकत होती है
दिल्ली की मंत्री आतिशी मारलेना श्री राम कॉलोनी में गई थी और वहां उन्होंने जय श्री राम बोल दिया तुरंत मुसलमान की भीड़ उठी हंगामा की कि आपने जय श्री… pic.twitter.com/Kqu1d2Aje0
— Manoj Singh (@manojkrs29) April 10, 2024
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಸಚಿವೆ ಅತಿಶಿ ಅವರು ವೇದಿಕೆ ಮೇಲೆ ನಿಂತು ಭಾಷಣ ಮಾಡುತ್ತಿರುವಾಗ ಕೆಲ ವ್ಯಕ್ತಿಗಳು ಎದ್ದು ನಿಂತು ಮಾತನಾಡಲು ಶುರು ಮಾಡಿರುವುದನ್ನು ಕಾಣಬಹುದು. ಆದರೆ, ಆ ವಿಡಿಯೋದಲ್ಲಿರುವಂತೆ ನಡೆದ ಘಟನೆ ಏನು ಎಂಬುವುದರ ಬಗ್ಗೆ ಮಾಹಿತಿಯಿಲ್ಲ.
ಫ್ಯಾಕ್ಟ್ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ನಾನುಗೌರಿ. ಕಾಂ ಪರಿಶೀಲನೆ ನಡೆಸಿದೆ. ನಾವು ಸಂಬಂಧಿತ ಕೀ ವರ್ಡ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ದಿನಾಂಕ 9 ಮಾರ್ಚ್ 2024ರಂದು ಆಮ್ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ್ದ ಅಧಿಕೃತ ಪತ್ರಿಕಾ ಹೇಳಿಕೆಯೊಂದು ಲಭ್ಯವಾಗಿದೆ. ಅದರಲ್ಲಿ, ಈಶಾನ್ಯ ದೆಹಲಿಯ ಶ್ರೀರಾಮ್ ಕಾಲೋನಿಯಲ್ಲಿ ಕೇಜ್ರಿವಾಲ್ ಸರ್ಕಾರ ಎರಡು ಸರ್ಕಾರಿ ಶಾಲೆಗಳನ್ನು ಉದ್ಘಾಟಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಅತಿಶಿ ಮಾತನಾಡಿ, “ಶ್ರೀರಾಮ ಕಾಲೋನಿಯ ಈ ಶಾಲೆಯು ದೆಹಲಿಯ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ ಎಂದಿದ್ದರು” ಎಂಬ ಅಂಶವನ್ನು ಕೂಡ ಅದರಲ್ಲಿ ಉಲ್ಲೇಖಿಸಲಾಗಿದೆ.
ವೈರಲ್ ವಿಡಿಯೋ ಕುರಿತು ನಾವು ಇನ್ನಷ್ಟು ಹುಡುಕಾಡಿದಾಗ, ‘Directorate of Education GNCT of Delhi’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ದಿನಾಂಕ 9 ಮಾರ್ಚ್ 2024 ರಂದು ಅಪ್ಲೋಡ್ ಮಾಡಲಾದ ವಿಡಿಯೋವೊಂದು ಕಂಡು ಬಂದಿದೆ. ಒಟ್ಟು 49 ನಿಮಿಷ 55 ಸೆಕೆಂಡ್ನ ಈ ವಿಡಿಯೋದಲ್ಲಿ 32 ನಿಮಿಷ 14 ಸೆಕೆಂಡ್ನಿಂದ ಅತಿಶಿ ಅವರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಮತ್ತು ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿರುವುದು ಇದೆ.
ವಿಡಿಯೋದಲ್ಲಿ 40 ನಿಮಿಷ 30 ಸೆಕೆಂಡ್ನಿಂದ ಅತಿಶಿ ಅವರು ಖಜೂರಿ ಖಾಸ್ ಪ್ರದೇಶದ ಶಾಲೆಯ ಉದ್ಘಾಟನೆಯ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಕಾರ್ಯಕ್ರಮದಲ್ಲಿ ಹಾಜರಿದ್ದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅತಿಶಿ ಅಕ್ಷೇಪ ವ್ಯಕ್ತಪಡಿಸಿದವರನ್ನು ಕುಳಿತುಕೊಳ್ಳಲು ವಿನಂತಿಸಿದಾಗ, ನಗರಸಭಾ ಸದಸ್ಯ ಮೊಹಮ್ಮದ್ ಅಮಿಲ್ ಮಲಿಕ್ ವೇದಿಕೆಯ ಹಿಂದಿನಿಂದ ಅತಿಶಿಯ ಅವರ ಬಳಿಗೆ ಬಂದು, ‘ಇದು ಶ್ರೀರಾಮ್ ಕಾಲೋನಿಯ ಶಾಲೆ, ಶ್ರೀರಾಮ್ ಕಾಲೋನಿ ಎಂದು ಹೇಳಿ’ ಎಂದು ಹೇಳಿದ್ದಾರೆ.
ತಾನು ಹೇಳಿರುವುದು ತಪ್ಪು ಎಂದು ಅರಿವಾದಾಗ, ಅತಿಶಿ ಅವರು ಶ್ರೀರಾಮ್ ಕಾಲೋನಿಯ ನಿವಾಸಿಗಳಿಗೆ ಕ್ಷಮೆಯಾಚಿಸುತ್ತಾ, “ನಾನು ಶ್ರೀರಾಮ್ ಕಾಲೋನಿಯ ನಿವಾಸಿಗಳಿಗೆ ಕ್ಷಮೆ ಕೇಳಲು ಬಯಸುತ್ತೇನೆ. ಶ್ರೀರಾಮ್ ಕಾಲೋನಿಯ ಶಾಲೆಯಲ್ಲಿ ಖಜೂರಿ ಖಾಸ್, ಕರವಾಲ್ ನಗರ ಮತ್ತು ಸೋನಿಯಾ ವಿಹಾರ್ನ ಮಕ್ಕಳೂ ಕಲಿಯುತ್ತಾರೆ ಎಂದು ಸ್ಥಳದ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಎಲ್ಲಿಯೂ ಅತಿಶಿ ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದಾಗಲಿ, ಅದಕ್ಕೆ ಅವರು ಕ್ಷಮೆ ಕೇಳಿದ್ದಾಗಲಿ ಕಂಡು ಬಂದಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : Fact Check: ಮಹುವಾ ಮೊಯಿತ್ರಾ ‘ಎಗ್ಸ್’ ಎಂದಿರುವುದನ್ನು ‘ಸೆಕ್ಸ್’ ಎಂದು ತಪ್ಪಾಗಿ ಹಂಚಿಕೊಳ್ಳಲಾಗ್ತಿದೆ