ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಸಮಾಧಿಯೊಂದಕ್ಕೆ ನಮಸ್ಕರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಅಖಿಲೇಶ್ ದಂಪತಿ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿಯಾಗಿದ್ದ ಅತೀಕ್ ಅಹ್ಮದ್ ಅವರ ಸಮಾಧಿಗೆ ಗೌರವ ಸಲ್ಲಿಸಿದ್ದಾರೆ” ಎಂದು ಸುದ್ದಿ ಹಬ್ಬಿದೆ.
ಫ್ಯಾಕ್ಟ್ಚೆಕ್ : ವೈರಲ್ ಫೋಟೋಗೆ ಸಂಬಂಧಿಸಿದ ಸತ್ಯಾಸತ್ಯತೆ ಪರಿಶೀಲಿಸಲು ನಾವು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪೋಟೋ ಹುಡುಕಿದ್ದೇವೆ. ಈ ವೇಳೆ 2022ರ ನವೆಂಬರ್ 14ರಂದು ಅಖಿಲೇಶ್ ಯಾದವ್ ಅವರು ಆ ಫೋಟೋವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
— Akhilesh Yadav (@yadavakhilesh) November 14, 2022
ಅಖಿಲೇಶ್ ಯಾದವ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಂತೆ, ಅವರ ಪತ್ನಿ ಡಿಂಪಲ್ ಯಾದವ್ ಉತ್ತರ ಪ್ರದೇಶದ ಮೈನ್ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮೊದಲು ಸಮಾಜವಾದಿ ಪಕ್ಷದ ನಾಯಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮಸ್ಕರಿಸಿದ್ದು ಎಂದು ತಿಳಿದು ಬಂದಿದೆ.
ಹೆಚ್ಚುವರಿಯಾಗಿ, ಡಿಂಪಲ್ ಯಾದವ್ ಅವರು ಕೂಡ ತನ್ನ ಎಕ್ಸ್ ಖಾತೆಯಲ್ಲಿ ಅದೇ ಫೋಟೋವನ್ನು ಪೋಸ್ಟ್ ಮಾಡಿದ್ದು, ಮುಲಾಯಂ ಸಿಂಗ್ ಯಾದವ್ ಅವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿರುವುದನ್ನು ಅವರು ಖಚಿತಪಡಿಸಿದ್ದಾರೆ. ಹಾಗಾಗಿ, ಅಖಿಲೇಶ್ ದಂಪತಿ ಗ್ಯಾಂಗ್ಸ್ಟರ್ ಸಮಾಧಿಗೆ ನಮಸ್ಕರಿದ್ದಾರೆ ಎಂಬುವುದು ಸುಳ್ಳು ಎಂದು ಈ ಮೂಲಕ ಖಚಿತಪಡಿಸಬಹುದು.
नेताजी को सादर नमन के साथ, हम आज का नामांकन उनके सिद्धांतों और मूल्यों को समर्पित कर रहे हैं।
नेताजी का आशीर्वाद हम सबके साथ हमेशा रहा है, हमेशा रहेगा। pic.twitter.com/KgUkyp0gZN
— Dimple Yadav (@dimpleyadav) November 14, 2022
ಅಖಿಲೇಶ್ ದಂಪತಿ ಮುಲಾಯಂ ಸಿಂಗ್ ಯಾದವ್ ಅವರ ಸಮಾಧಿಗೆ ನಮಸ್ಕರಿಸಿದ ಬಗ್ಗೆ ನವೆಂಬರ್ 14,2022ರಂದು ಈಟಿವಿ ಭಾರತ್ ಇಂಗ್ಲಿಷ್ ಕೂಡ ವರದಿ ಮಾಡಿತ್ತು. ಅದರ ಸ್ಕ್ರೀನ್ ಶಾಟ್ ಕೆಳಗಡೆ ಇದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಖಿಲೇಶ್ ಮತ್ತು ಡಿಂಪಲ್ ಯಾದವ್ ಅವರ ವೈರಲ್ ಫೋಟೋ ಮುಲಾಯಂ ಸಿಂಗ್ ಯಾದವ್ ಅವರ ಸಮಾಧಿಗೆ ನಮಸ್ಕರಿಸುವಾಗ ತೆಗೆದಿರುವುದಾಗಿದೆ. ಅಲ್ಲದೆ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಅವರ ಸಮಾಧಿಗೆ ನಮಸ್ಕರಿಸಿದ ಫೋಟೋ ಅದಲ್ಲ.
ಅತೀಕ್ ಅಹ್ಮದ್ 2023ರ ಏಪ್ರಿಲ್ನಲ್ಲಿ ಪೊಲೀಸ್ ವಶದಲ್ಲಿದ್ದಾಗಲೇ ಗುಂಡೇಟಿಗೆ ಬಲಿಯಾಗಿದ್ದರು. ಸಾವಿಗೂ ಮುನ್ನ ಗ್ಯಾಂಗ್ಸ್ಟರ್ ಆಗಿ ಗುರುತಿಸಿಕೊಂಡಿದ್ದ ಅತೀಕ್ ಅಹ್ಮದ್, ಸಮಾಜವಾದಿ ಪಕ್ಷದಿಂದ ಲೋಕಸಭೆಯನ್ನು ಪ್ರತಿನಿಧಿಸಿದ್ದರು. ಉತ್ತರ ಪ್ರದೇಶದ ಫುಲ್ಪುರ್ ಕ್ಷೇತ್ರದಿಂದ 14ನೇ ಲೋಕಸಭೆಗೆ ಅತೀಕ್ ಅಹ್ಮದ್ ಸದಸ್ಯರಾಗಿದ್ದರು. ಸಂಸತ್ನಲ್ಲಿ ರೈಲ್ವೆ ಸಂಬಂಧಿಸಿದ ಸಮಿತಿಯೊಂದರ ಸದಸ್ಯರೂ ಆಗಿದ್ದರು. ಅಲ್ಲದೆ, ಉತ್ತರ ಪ್ರದೇಶ ವಿಧಾನಸಭೆಗೂ ಅವರು ಆಯ್ಕೆಯಾಗಿದ್ದರು.
ಇದನ್ನೂ ಓದಿ : ಪಾಕಿಸ್ತಾನ ಪರ ಘೋಷಣೆ ಆರೋಪ: ಖಾಸಗಿ ಎಫ್ಎಸ್ಎಲ್ ವರದಿ ಹರಿಬಿಟ್ಟ ಬಿಜೆಪಿ