“ಏಷ್ಯಾದ ಮೊದಲ ಮಸೀದಿ ಮುಂಚೆ ದೇವಾಲಯವಾಗಿತ್ತು. ಕರ್ನಾಟಕದಲ್ಲಿ ಹಿಂದೂ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ” ಇತ್ಯಾದಿ ಬರಹಗಳೊಂದಿಗೆ ಪ್ರಾಚೀನ ಮಸೀದಿಯೊಂದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
‘ಕೇಶವ ಬೀಜಾಡಿ’ ಎಂಬ ಫೇಸ್ಬುಕ್ ಬಳಕೆದಾರ “ಏಷ್ಯಾದ ಮೊದಲ ಮಸೀದಿ ಮುಂಚೆ ದೇವಾಲಯವಾಗಿತ್ತು. ಪಣವಿಡುವೆವು ಭಗವಂತನ ಪಾದದ ಮೆಲಾಣೆ.. ಮಂದಿರವಲ್ಲೇ ಕಟ್ಟುವೆವು” ಎಂದು ಪುರಾತನ ಮಸೀದಿಯ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ನಿಬ್ಬರು ಎಕ್ಸ್ ಬಳಕೆದಾರರು “ಕರ್ನಾಟಕದಲ್ಲಿ ಹಿಂದೂ ಮಂದಿರವನ್ನು ಜಿಹಾದಿಗಳು ವಶಪಡಿಸಿಕೊಂಡು ಮಸೀದಿಯಾಗಿ ಪರಿವರ್ತಿಸಿದ್ದಾರೆ” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಫ್ಯಾಕ್ಟ್ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದೆ. ಇದಕ್ಕಾಗಿ ನಾವು ವೈರಲ್ ವಿಡಿಯೋದಲ್ಲಿರುವ ಮಸೀದಿಯ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ವಿಡಿಯೋದಲ್ಲಿರುವ ಮಸೀದಿಯು ಹಲವಾರು ಯೂಟ್ಯೂಬ್ ಚಾನೆಲ್ಗಳಲ್ಲಿ ಕಂಡು ಬಂದಿದೆ.
‘M Shameer’ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಮಸೀದಿಯ ಸಂಪೂರ್ಣ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಇದು ಭಾರತದ ಮೂರನೇ ಅತ್ಯಂತ ಪುರಾತನ ಮಸೀದಿಯಾಗಿರುವ ಮಂಗಳೂರಿನ ಝೀನತ್ ಬಕ್ಷ್ ಮಸೀದಿ ಎಂದು ತಿಳಿಸಿದ್ದಾರೆ.
ನಾವು ಗೂಗಲ್ನಲ್ಲಿ ‘ಝೀನತ್ ಬಕ್ಷ್’ ಎಂದು ಸರ್ಚ್ ಮಾಡಿದಾಗ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಝೀನತ್ ಬಕ್ಸ್ ಮಸೀದಿಯ ಕುರಿತು ಮಾಹಿತಿ ದೊರೆತಿದೆ.
ಸರ್ಕಾರದ ವೆಬ್ಸೈಟ್ನಲ್ಲಿ ಹೇಳಿರುವಂತೆ “ಮಸ್ಜಿದ್ ಝೀನತ್ ಬಕ್ಷ್ ಮಂಗಳೂರಿನ ಬಂದರ್ ಪ್ರದೇಶದಲ್ಲಿದೆ. ಈ ಮಸೀದಿಯು ಪ್ರವಾದಿ ಮೊಹಮ್ಮದ್ ಅವರ ಜೀವನ ಕಥೆಗಳನ್ನು ಚಿತ್ರಿಸುತ್ತದೆ. ಕ್ರಿಸ್ತಶಕ 644 ರಲ್ಲಿ ಅರಬ್ ಮುಸ್ಲಿಂ ವ್ಯಾಪಾರಿಗಳಿಂದ ಇದು ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಈ ಮಸೀದಿಯು ತನ್ನ ಶುದ್ಧ ಭಾರತೀಯ ವಾಸ್ತುಶಿಲ್ಪದ ಶೈಲಿಯಿಂದಾಗಿ ಎಲ್ಲಾ ಮಸೀದಿಗಳನ್ನು ಮೀರಿಸುತ್ತದೆ. ಇದು ಬಹುಶಃ ಸಂಪೂರ್ಣವಾಗಿ ಮರದಿಂದ ಮಾಡಿದ ಕರ್ನಾಟಕದ ಏಕೈಕ ಮಸೀದಿಯಾಗಿದೆ. ಮಸೀದಿಯ ಮುಖ್ಯ ಮುಖ್ಯಾಂಶವೆಂದರೆ ತೇಗದಿಂದ ಮಾಡಿದ 16 ಕಂಬಗಳನ್ನು ಇದು ಒಳಗೊಂಡಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟ್ ಲಿಂಕ್
ಸರ್ಕಾರದ ಅಧಿಕೃತ ವೆಬ್ಸೈಟ್ನಲ್ಲಿ ಹೇಳಿರುವಂತೆ ಝೀನತ್ ಬಕ್ಷ್ ಮಸೀದಿಯು ಯಾವುದೇ ದೇವಸ್ಥಾನವನ್ನು ಪರಿವರ್ತಿಸಿ ಮಾಡಿರುವಂತದಲ್ಲ.
“ಝೀನತ್ ಬಕ್ಷ್ ಜುಮಾ ಮಸೀದಿ (ಸೌಂದರ್ಯವನ್ನು ಪ್ರತಿಬಿಂಬಿಸುವ ಮಸೀದಿ) ಸಾಮಾನ್ಯವಾಗಿ ಮಸ್ಜಿದ್ ಜೀನತ್ ಬಕ್ಷ್ ಎಂದು ಇದನ್ನು ಕರೆಯಲ್ಪಡುತ್ತದೆ. ಇದು ಭಾರತದ 3 ನೇ ಅತ್ಯಂತ ಹಳೆಯ ಮಸೀದಿಯಾಗಿದೆ ಮತ್ತು 644 ಎಡಿ ಯಲ್ಲಿ ನಿರ್ಮಿಸಲಾದ ಕರ್ನಾಟಕ ರಾಜ್ಯದ ಅತ್ಯಂತ ಹಳೆಯ ಮಸೀದಿಯಾಗಿದೆ. ‘ಬೆಳ್ಳಿಯೆ ಪಲ್ಲಿ’ (ಬ್ಯಾರಿ ಭಾಷೆಯಲ್ಲಿ ದೊಡ್ಡ ಮಸೀದಿ) ಎಂದೂ ಕರೆಯಲ್ಪಡುವ ಈ ಮಸೀದಿಯು ಮಂಗಳೂರು ನಗರದ ಬಂದರ್ ಪ್ರದೇಶದಲ್ಲಿದೆ. ಇದು ಶುದ್ಧ ಭಾರತೀಯ ವಾಸ್ತುಶಿಲ್ಪ ಶೈಲಿಗೆ ಹೆಸರುವಾಸಿಯಾಗಿದೆ” ಎಂದು ವಿಕಿಪೀಡಿಯದಲ್ಲಿ ಮಾಹಿತಿಯಿದೆ.
18ನೇ ಶತಮಾನದಲ್ಲಿ, ಅಂದಿನ ಮೈಸೂರು ಸಂಸ್ಥಾನದ ರಾಜನಾಗಿದ್ದ ಟಿಪ್ಪು ಸುಲ್ತಾನ್ ಅವರು ಮಸೀದಿಯ ನವೀಕರಣ ಕಾರ್ಯ ನಡೆಸಿದ್ದರು. ಮಾತ್ರವಲ್ಲದೆ ಸೊಗಸಾದ ಮರದ ಕೆತ್ತನೆಯಿಂದ ಮಸೀದಿಯನ್ನು ಸುಂದರಗೊಳಿಸಿದ್ದರು. ಅಲ್ಲದೆ, ‘ಮಾಲಿಕ್ ದೀನಾರ್ ವೆಳಿಯ ಜುಮಅತ್ ಮಸ್ಜಿದ್’ ಎಂದಿದ್ದ ಮಸೀದಿಯ ಹೆಸರನ್ನು ‘ಝೀನತ್ ಬಕ್ಷ್’ ಎಂದು ಬದಲಾಯಿಸಿದರು ಎಂದು ಹೇಳಲಾಗಿದೆ.
ಇವಿಷ್ಟೆ ಅಲ್ಲದೆ ಝೀನತ್ ಬಕ್ಷ್ ಮಸೀದಿಯ ಕುರಿತು ಹಲವಾರು ಲೇಖನಗಳು ಆನ್ಲೈನ್ನಲ್ಲಿ ಲಭ್ಯವಿದೆ. ಇವೆಲ್ಲದರ ಆಧಾರದಲ್ಲಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿರುವುದು ಮಂಗಳೂರಿನ ಝೀನತ್ ಬಕ್ಷ್ ಮಸೀದಿ. ಅದು ಮುಂಚೆ ದೇವಸ್ಥಾನವಾಗಿತ್ತು ಎಂಬುವುದು ಸುಳ್ಳು.
ಮಸೀದಿಯ ಇತಿಹಾಸದ ಕುರಿತ ಇನ್ನಷ್ಟು ಲೇಖನಗಳು–ಇಲ್ಲಿ ಇಲ್ಲಿ ಇಲ್ಲಿ
ಸುಳ್ಳು : ಏಷ್ಯಾದ ಮೊದಲ ಮಸೀದಿ ಮುಂಚೆ ದೇವಾಲಯವಾಗಿತ್ತು. ಕರ್ನಾಟಕದಲ್ಲಿ ಹಿಂದೂ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ.
ಸತ್ಯ : ವೈರಲ್ ವಿಡಿಯೋದಲ್ಲಿರುವುದು ಮಂಗಳೂರಿನ ಝೀನತ್ ಬಕ್ಷ್ ಮಸೀದಿ. ಅದು ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಿದಲ್ಲ.
ಇದನ್ನೂ ಓದಿ : Fact Check: ಮಸೀದಿ ಮುಂದೆ ಮಹಿಳೆಯರಿಂದ ಅಶ್ಲೀಲ ಕೃತ್ಯವೆಂದು ಸುಳ್ಳು ಸುದ್ದಿ ಹಂಚಿಕೆ