“ಮುಸ್ಲಿಂ ಅಸ್ಲಂ: ಸ್ವಚ್ಚ ಇರುವವರು, ನಾವು ಅವರ ಅಂಗಡಿಯಿಂದ ಸಿಹಿ ತಿನಿಸು ಖರೀದಿಸಬಹುದು.”
“ಹಿಂದೂ ಅಪ್ಪನ್ : ಸ್ವಚ್ಚ ಇಲ್ಲದಿರುವವರು, ಇವರಿಂದ ಯಾರೂ ಕೂಡ ಸಿಹಿ ತಿನಿಸು ಖರೀದಿಸಬಾರದು.”
“ಮುಸ್ಲಿಂ ಆದಿಲ್: ಸ್ವಚ್ಚವಾಗಿರುವವರು, ಮತ್ತು ಒಳ್ಳೆಯ ಗುಣ ನಡತೆ ಹೊಂದಿರುವವರು”
“ಹಿಂದೂ ಅಭಿಮನ್ಯು : ಸ್ವಚ್ಚ ಇಲ್ಲದಿರುವವರು, ಅವರು ಸ್ನಾನ ಮಾಡಲ್ಲ, ಕೆಟ್ಟ ವಾಸನೆ ಬರುತ್ತಾರೆ.”
“ಇದು ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ಮಾಡುವ ಪಾಠ. ಇದು ಕಮ್ಯುನಿಷ್ಠರು ಸಣ್ಣ ಮಕ್ಕಳನ್ನು ಬ್ರೈನ್ ವಾಶ್ ಮಾಡುವ ರೀತಿ” ಎಂದು ಪ್ರತಿಪಾದಿಸಿ ಮಿ.ಸಿನ್ಹ (ಮೋದಿ ಫ್ಯಾಮಿಲಿ) ಎಂಬ ಎಕ್ಸ್ ಬಳಕೆದಾರ ಪುಸ್ತಕವೊಂದರ ಫೋಟೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಕೇರಳದ ಸರ್ಕಾರ ಅಧಿಕೃತವಾಗಿ ಶಾಲಾ ಮಕ್ಕಳಿಗೆ ವಿತರಿಸಿದ ಪಾಠ ಪುಸ್ತಕಗಳಲ್ಲಿ ಈ ರೀತಿಯಿದೆ ಎಂಬರ್ಥದಲ್ಲಿ ಸಿನ್ಹ ಸುದ್ದಿ ಹಬ್ಬಿಸಿದ್ದಾರೆ.
ಫ್ಯಾಕ್ಟ್ ಚೆಕ್ : ಎಕ್ಸ್ ಪೋಸ್ಟ್ನಲ್ಲಿರುವ ಹೇಳಿರುವ ವಿಷಯದ ಸತ್ಯಾಸತ್ಯತೆಯನ್ನು ನಾನುಗೌರಿ.ಕಾಂ ಪರಿಶೀಲನೆ ನಡೆಸಿದಾಗ, ಇದು ಕೇರಳದ ಪೀಸ್ ಇಂಟರ್ನ್ಯಾಷನಲ್ ಸಮೂಹ ಶಿಕ್ಷಣ ಸಂಸ್ಥೆಗಳ ಪಠ್ಯ ಪುಸ್ತಕದ ಫೋಟೋ ಎಂದು ಗೊತ್ತಾಗಿದೆ.
ಕೇರಳದ ಎರ್ನಾಕುಲಂ ಕೆಂದ್ರವಾಗಿ ಕಾರ್ಯಾಚರಿಸುತ್ತಿದ್ದ ‘ಪೀಸ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್’ ರಾಜ್ಯಾದ್ಯಂತ ಪೀಸ್ ಇಂಟರ್ನ್ಯಾಷನಲ್ ಎಂಬ ಹೆಸರಿನ ಹಲವು ಶಾಲೆಗಳನ್ನು ನಡೆಸುತ್ತಿತ್ತು.
ಅಕ್ಟೋಬರ್ 8, 2016 ರಂದು ಮಲಯಾಳಂ ಸುದ್ದಿ ವೆಬ್ಸೈಟ್ ‘ಆನ್ ಮನೋರಮಾ‘ದಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಾವು ಮೇಲೆ ಉಲ್ಲೇಖಿಸಿದ ಆಕ್ಷೇಪಾರ್ಹ ವಿಷಯವನ್ನು ಬೋಧಿಸಿದ್ದಕ್ಕಾಗಿ ಪೀಸ್ ಎಜುಕೇಷನಲ್ ಫೌಂಡೇಶನ್ ನಡೆಸುತ್ತಿದ್ದ ಎರ್ನಾಕುಲಂನ ತಮ್ಮನಮ್ಲ್ಲಿದ್ದ ಪೀಸ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜನವರಿ 4, 2018 ರಂದು ‘ಮಾತೃಭೂಮಿ‘ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಪಠ್ಯ ಪುಸ್ತಕದಲ್ಲಿ ಆಕ್ಷೇಪಾರ್ಹ ಮತ್ತು ಜಾತ್ಯತೀತವಲ್ಲದ ವಿಷಯ ಪ್ರಕಟಿಸಿ, ಬೋಧಿಸಿದ ಎರ್ನಾಕುಲಂನ ಪೀಸ್ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಮುಚ್ಚಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದಾರೆ.
ಕೋಮು ವಿಷಯಗಳನ್ನು ಕಲಿಸಿದ್ದಕ್ಕಾಗಿ ಎರ್ನಾಕುಲಂನ ವಿವಾದಾತ್ಮಕ ಪೀಸ್ ಇಂಟರ್ನ್ಯಾಷನಲ್ ಶಾಲೆಯನ್ನು ಮುಚ್ಚಲು ಕೇರಳ ಸರ್ಕಾರ 2018ರ ಜನವರಿಯಲ್ಲಿ ಆದೇಶಿಸಿತ್ತು. ಎರ್ನಾಕುಲಂ ಶಾಖೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಎರ್ನಾಕುಲಂನ ಪೀಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲಿಸುವ ಪಠ್ಯಕ್ರಮದ ಭಾಗವಾಗಿರುವ ಆಕ್ಷೇಪಾರ್ಹ ವಿಷಯಗಳೊಂದಿಗೆ ಪಠ್ಯಪುಸ್ತಕಗಳನ್ನು ಮುದ್ರಿಸಿದ್ದಕ್ಕಾಗಿ ಕೊಚ್ಚಿ ನಗರ ಪೊಲೀಸರು ಡಿಸೆಂಬರ್ 3, 2016 ರಂದು ಮುಂಬೈ ಮೂಲದ ಮೂವರು ಪ್ರಕಾಶಕರನ್ನು ಬಂಧಿಸಿದ್ದರು ಎಂದು ‘ದಿ ನ್ಯೂಸ್ ಮಿನಿಟ್’ ವರದಿ ಹೇಳಿತ್ತು.
ಎಕ್ಸ್ ಬಳಕೆದಾರ ಸಿನ್ಹ ಹಾಕಿದ್ದ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದ ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅವರು ” ಈ ಪುಸ್ತಕವನ್ನು ಕೇರಳ ಸರ್ಕಾರದ ಶಿಕ್ಷಣ ಇಲಾಖೆ ಪ್ರಕಟಿಸಿಲ್ಲ ಎಂದು ಹೇಳಿದ್ದಾರೆ. “ಈ ಪುಸ್ತಕವನ್ನು ಕೇರಳ ಸರ್ಕಾರದ ಶಿಕ್ಷಣ ಇಲಾಖೆ ಪ್ರಕಟಿಸಿಲ್ಲ. ಇದು ರಾಜ್ಯದ ವಿರುದ್ಧ ದ್ವೇಷ ಹರಡುವ ಮತ್ತೊಂದು ಪ್ರಯತ್ನವಾಗಿದೆ. ನಮ್ಮ ಪರಿಚಯವಿರುವವರಿಗೆ ಕೇರಳಿಗರ ನಡುವಿನ ಸೌಹಾರ್ದತೆ ಮತ್ತು ಏಕತೆ ಅರ್ಥವಾಗುತ್ತದೆ. ದ್ವೇಷಕ್ಕೆ ಅವಕಾಶವಿಲ್ಲ, ಕೋಮುವಾದಿ ಕಾರ್ಯಸೂಚಿ ರಾಜ್ಯದಲ್ಲಿ ಬೇರೂರಲು ಏಕೆ ವಿಫಲವಾಗಿದೆ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
This book is not published by the Kerala Govt’s Education Dept. Merely another endeavor to incite animosity towards the state. Those acquainted with us understand the camaraderie & unity among Keralites. No room for hatred – precisely why communal agenda fails to take root here. https://t.co/AinoT3GvBA pic.twitter.com/eIG1qEoYdI
— V. Sivankutty (@VSivankuttyCPIM) April 9, 2024
ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದ ಅಂಶವೇನೆಂದರೆ, ಎಕ್ಸ್ ಬಳಕೆದಾರ ಸಿನ್ಹ ಹಂಚಿಕೊಂಡ ಶಾಲಾ ಪಠ್ಯ ಪುಸ್ತಕದ ಫೋಟೋ ಕೇರಳ ಸರ್ಕಾರದ ಶಿಕ್ಷಣ ಇಲಾಖೆ ಪ್ರಕಟಿಸಿದ ಅಥವಾ ವಿತರಿಸಿದ ಪುಸ್ತಕದ್ದಲ್ಲ. ಇದು ಎರ್ನಾಕುಲಂನ ಪೀಸ್ ಇಂಟರ್ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಮಕ್ಕಳಿಗೆ ವಿತರಿಸಿದ್ದ ಪುಸ್ತಕ. ಆ ಶಾಲೆಯನ್ನು ಮುಚ್ಚಲು ಕಮ್ಯುನಿಷ್ಠ್ ಪಕ್ಷದ ನೇತೃತ್ವದ ಕೇರಳ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 2018ರ ಜನವರಿಯಲ್ಲಿ ಆದೇಶಿಸಿದ್ದರು.
ಹಲವು ಆರೋಪಗಳು ಕೇಳಿ ಬಂದ ಬಳಿಕ ಕೇರಳದ ಎಲ್ಲಾ ಪೀಸ್ ಇಂಟರ್ನ್ಯಾಷನಲ್ ಶಾಲೆಗಳನ್ನು ಮುಚ್ಚಲಾಗಿದೆ ಎಂಬ ವರದಿಗಳಿವೆ. ಈ ಬಗ್ಗೆ ಖಚಿತ ಮಾಹಿತಿ ನಮಗೆ ಲಭ್ಯವಾಗಿಲ್ಲ. ಈ ಪೀಸ್ ಇಂಟರ್ನ್ಯಾಷನಲ್ ಶಾಲೆಗಳ ಮಾಲೀಕ ಎಂ.ಎಂ ಅಕ್ಬರ್. ಈ ವ್ಯಕ್ತಿಯನ್ನು ಕೇರಳದ ಝಾಕಿರ್ ನಾಯ್ಕ್ ಎಂದೇ ಹೇಳಲಾಗುತ್ತದೆ. ಇಸ್ಲಾಮಿಕ್ ವಿದ್ವಾಂಸ ಎಂದು ಗುರುತಿಸಿಕೊಂಡಿದ್ದ ಝಾಕಿರ್ ನಾಯ್ಕ್ ಪ್ರಸ್ತುತ ಹೊರ ದೇಶದಲ್ಲಿದ್ದಾರೆ. ಝಾಕಿರ್ ನಾಯ್ಕ್ ಮತ್ತು ಎಂ.ಎಂ ಅಕ್ಬರ್ ಇಬ್ಬರೂ ಕೂಡ ಇಸ್ಲಾಮಿನ ನೂತನವಾದಿ ಪಂಗಡ ಎಂದು ಗುರುತಿಸಲಾಗಿರುವ ಸಲಫಿ ಸಿದ್ದಾಂತದ ಬೋಧಕರಾಗಿದ್ದಾರೆ. ಇವರ ವಾದಗಳನ್ನು ಸುನ್ನೀ ಪಂಥದ ಮುಸ್ಲಿಮರು ಕಟುವಾಗಿ ವಿರೋಧಿಸುತ್ತಾರೆ. ಝಾಕಿರ್ ನಾಯ್ಕ್ ಕೂಡ ಪೀಸ್ ಹೆಸರಿನ ಸಂಸ್ಥೆಗಳನ್ನು ನಡೆಸುತ್ತಿದ್ದರು. ಅವುಗಳ ಮೇಲೆಯೂ ಹಲವು ಆರೋಪಗಳು ಕೇಳಿ ಬಂದಿತ್ತು.
ಇದನ್ನೂ ಓದಿ : Fact Check : ‘ಮಹಿಳಾ ಮೀಸಲಾತಿ ಮಸೂದೆ’ಯಿಂದ ಟಿಕೆಟ್ ಸಿಕ್ಕಿದೆ ಎಂಬ ಕಂಗನಾ ರಣಾವತ್ ಹೇಳಿಕೆ ಸುಳ್ಳು