ಭಾನುವಾರ (ಏ.22) ರಾಜಸ್ಥಾನದ ಬನ್ಸ್ವಾರಾದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಅವರ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ.
‘ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಅಧಿಕಾರ’ ಇರುವುದಾಗಿ ಮನಮೋಹನ್ ಸಿಂಗ್ ಹೇಳಿದ್ದಾರೆ ಎಂದು ಮೋದಿ ಪ್ರಸ್ತಾಪಿಸಿದ್ದಾರೆ. ಮೋದಿಯವರ ಭಾಷಣದ 1 ನಿಮಿಷ 13 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದೆ.
भारत देश के प्रधानमंत्री बोल रहे हैं…!#Rajasthan #LokSabhaElections2024 pic.twitter.com/wWj2s1OYip
— Avdhesh Pareek (@Zinda_Avdhesh) April 21, 2024
“ಈ ಹಿಂದಿನ ಸರ್ಕಾರದವರು ಹೇಳಿದ್ದರು. ಈ ದೇಶದ ಸಂಪತ್ತಿನ ಮೇಲಿನ ಮೊದಲ ಅಧಿಕಾರ ಮುಸ್ಲಿಮರಿಗಾಗಿದೆ. ಇದರರ್ಥ, ಈ ಸಂಪತ್ತನ್ನೆಲ್ಲಾ ಒಟ್ಟು ಮಾಡಿ, ಯಾರಿಗೆ ಹಂಚ್ತೀವಿ? ಯಾರಿಗೆ ಹೆಚ್ಚು ಮಕ್ಕಳಿದ್ದಾವೋ, ಅವರಿಗೆ ಹಂಚ್ತೀವಿ. ನುಸುಳುಕೋರರಿಗೆ ಹಂಚ್ತೀವಿ. ನಿಮ್ಮ ಶ್ರಮದ ಹಣವನ್ನು ನುಸುಳುಕೋರರಿಗೆ ಕೊಡಬಹುದಾ? ಇದಕ್ಕೆ ನಿಮ್ಮ ಒಪ್ಪಿಗೆ ಇದೆಯಾ? ಇದು ಕಾಂಗ್ರೆಸ್ನ ಪ್ರಣಾಳಿಕೆ ಹೇಳ್ತಿದೆ. ತಾಯಂದಿರು, ಸೋದರಿಯರ ಬಳಿಯ ಚಿನ್ನದ ಲೆಕ್ಕ ಹಾಕ್ತಾರೆ. ಅದನ್ನು ಜಪ್ತಿ ಮಾಡ್ತಾರೆ ಮತ್ತು ಆ ಸಂಪತ್ತನ್ನು ಹಂಚಿ ಬಿಡ್ತಾರೆ. ಯಾರಿಗೆ ಹಂಚ್ತಾರೆ ಅಂದ್ರೆ, ಮನಮೋಹನ್ ಸಿಂಗ್ ಹೇಳಿದ್ರಲ್ಲ, ‘ಸಂಪತ್ತಿನ ಮೇಲೆ ಮೊದಲ ಅಧಿಕಾರ ಇದೆ’ ಅಂತ ಅವರಿಗೆ ಹಂಚ್ತಾರೆ! ಈ ಅರ್ಬನ್ ನಕ್ಸಲ್ ಚಿಂತನೆ ತಾಯಂದಿರು, ಸೋದರಿಯರ ಮಂಗಳ ಸೂತ್ರವನ್ನೂ ಉಳಿಸುವುದಿಲ್ಲ!” ಎಂದು ಪ್ರಧಾನಿ ತನ್ನ ಭಾಷಣದಲ್ಲಿ ಹೇಳಿದ್ದಾರೆ.
ಫ್ಯಾಕ್ಟ್ಚೆಕ್ : ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಹೇಳಿದಂತೆ, ದೇಶದ ಸಂಪತ್ತಿನಲ್ಲಿ ಮೊದಲ ಅಧಿಕಾರ ಮುಸ್ಲಿಮರಿಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರಾ? ಎಂಬುವುದರ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.
ಇದಕ್ಕಾಗಿ ನಾವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹಳೆಯ ಭಾಷಣ ಹುಡುಕಾಡಿದ್ದೇವೆ. ಈ ವೇಳೆ ಏಪ್ರಿಲ್ 22,2024ರಂದು ಇಂಡಿಯಾ ಟುಡೇ ಚಾನೆಲ್ ತನ್ನ ಯೂಟ್ಯೂಬ್ನಲ್ಲಿ ಸಿಂಗ್ ಅವರ ಹಳೆ ಭಾಷಣ ಮತ್ತು ಮೋದಿಯವರ ವಿವಾದಾತ್ಮಕ ಹೇಳಿಕೆಯ ಕುರಿತು ಅಪ್ಲೋಡ್ ಮಾಡಿರುವ ವಿಡಿಯೋ ದೊರೆತಿದೆ.
ಇಂಡಿಯಾ ಟುಡೇಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ಮನಮೋಹನ್ ಸಿಂಗ್ ಅವರು, “ಅಲ್ಪ ಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪ ಸಂಖ್ಯಾತರ ಅಭಿವೃದ್ದಿಗಾಗಿ ನಾವು ಹೊಸ ಹೊಸ ಯೋಜನೆಗಳನ್ನು ರೂಪಿಸಬೇಕು. ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ನಮ್ಮ ಸಂಪತ್ತಿನಲ್ಲಿ ಅವರಿಗೂ(ಮುಸ್ಲಿಮರಿಗೂ) ಮೊದಲ ಹಕ್ಕು ಇರಬೇಕು” ಎಂದಿದ್ದಾರೆ.
ನಾವು ವಿಡಿಯೋದಲ್ಲಿ ಗಮನಿಸಿದಂತೆ ಮನಮೋಹನ್ ಸಿಂಗ್ ಅವರು “ದೇಶದ ಸಂಪತ್ತಿನ ಹಂಚಿಕೆಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇರಬೇಕು ಎಂದಿದ್ದಾರೆಯೇ ಹೊರತು, ಮುಸ್ಲಿಮರಿಗೆ ಮೊದಲ ಅಧಿಕಾರ ಇದೆ” ಎಂದಿಲ್ಲ.
ಪ್ರಧಾನಿ ಕಚೇರಿಯ ವೆಬ್ಸೈಟ್ನ ಆರ್ಕೈವ್ನಲ್ಲಿ ಮನಮೋಹನ್ ಸಿಂಗ್ ಅವರ ಭಾಷಣದ ಅಧಿಕೃತ ಲಿಖಿತ ರೂಪ ನಮಗೆ ದೊರೆತಿದೆ. ಆರ್ಕೈವ್ ಪ್ರಕಾರ, ಪ್ರಧಾನಿ ಮೋದಿ ಉಲ್ಲೇಖಿಸಿದ್ದು, 2006ರ ಡಿಸೆಂಬರ್ 9ರಂದು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ 52ನೇ ಸಭೆಯನ್ನು ಉದ್ದೇಶಿಸಿ ಮನಮೋಹನ್ ಸಿಂಗ್ ಅವರು ಮಾಡಿದ್ದ ಭಾಷಣದ ಕುರಿತು ಎಂಬುವುದು ಗೊತ್ತಾಗಿದೆ.
ತನ್ನ ಭಾಷಣದಲ್ಲಿ 11ನೇ ಪಂಚವಾರ್ಷಿಕ ಯೋಜನೆಯ ಪ್ರಸ್ತಾವನೆಯನ್ನು ಉಲ್ಲೇಖಿಸುತ್ತಾ “ವೇಗದ ಮತ್ತು ಸರ್ವರನ್ನು ಒಳಗೊಂಡ ಅಭಿವೃದ್ಧಿಯೆಡೆಗೆ” ಎಂಬ ವಿಷಯದ ಬಗ್ಗೆ ಸವಿಸ್ತಾರವಾಗಿ ಮನಮೋಹನ್ ಸಿಂಗ್ ಮಾತನಾಡಿದ್ದರು.
ಭಾಷಣದ ಕೊನೆಯಲ್ಲಿ “ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ ಎಂದು ನನಗೆ ನಂಬಿಕೆ ಇದೆ. ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆ ಮತ್ತು ಸಾಮಾನ್ಯ ಮೂಲಸೌಕರ್ಯಗಳ ಅಗತ್ಯ ಸಾರ್ವಜನಿಕ ಹೂಡಿಕೆ ಅಗತ್ಯಗಳು, ಎಸ್ಸಿ/ಎಸ್ಟಿ, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಮತ್ತು ಮಕ್ಕಳ ಉನ್ನತಿಗಾಗಿ ಕಾರ್ಯಕ್ರಮಗಳ ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು, ಅಭಿವೃದ್ಧಿಯ ಫಲಗಳಲ್ಲಿ ಸಮಾನ ಪಾಲು ಪಡೆಯುವ ಹಕ್ಕು ಹೊಂದಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಸಂಪನ್ಮೂಲಗಳಲ್ಲಿ ಪಾಲು ಪಡೆಯುವ ಮೊದಲ ಹಕ್ಕು ಅವರಿಗೂ ಇರಬೇಕು” ಎಂದಿದ್ದರು.
ಮನಮೋಹನ್ ಸಿಂಗ್ ಅವರ ಭಾಷಣದ ಆರ್ಖೈವ್ ಇಲ್ಲಿದೆ
‘ದಿ ಲಲ್ಲನ್ಟಾಪ್’ನ ಸೌರಭ್ ದ್ವಿವೇದಿ ಅವರು ಮೋದಿ ಉಲ್ಲೇಖಿಸಿದ ಮನಮೋಹನ್ ಸಿಂಗ್ ಅವರ ಭಾಷಣದ ನಿಜವಾದ ಅಂಶವನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. ಆ ವಿಡಿಯೋ ಲಿಂಕ್ ಕೆಳಗಿದೆ.
“Manmohan Singh said Muslims have the first right on the country's assets,” claimed Modi today in Rajasthan.
This is a falsehood. Here’s the fact-check👇🏽
— Siddharth (@DearthOfSid) April 21, 2024
ಮೇಲೆ ನಾವು ಉಲ್ಲೇಖಿಸಿದ ಮೂಲಗಳ ಪ್ರಕಾರ, ಮನಮೋಹನ್ ಸಿಂಗ್ ಅವರು “ದೇಶದ ಸಂಪತ್ತಿನಲ್ಲಿ ಮೊದಲ ಅಧಿಕಾರ ಮುಸ್ಲಿಮರಿಗಿದೆ ಎಂದು ಹೇಳಿಲ್ಲ. ಬದಲಾಗಿ, ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೂ ಮೊದಲ ಹಕ್ಕು ಇರಬೇಕು” ಎಂದಿದ್ದಾರೆ.
ಇದರರ್ಥ ಇತರ ಧರ್ಮಿಯರಿಗೆ ಇರುವಂತೆ ಮುಸ್ಲಿಮರಿಗೂ ದೇಶದ ಸಂಪತ್ತಿನಲ್ಲಿ ಮೊದಲ ಹಕ್ಕು ಇರಬೇಕು. ಈ ಮೂಲಕ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು. ತಾರತಮ್ಯ ಇರಬಾರದು ಎಂಬುವುದಾಗಿದೆ.
ಇದನ್ನೂ ಓದಿ : FACT CHECK: ಉತ್ತರ ಪ್ರದೇಶದಲ್ಲಿ ಬುರ್ಖಾಧಾರಿ ಮಹಿಳೆಯರಿಂದ ನಕಲಿ ಮತದಾನ ಎಂದು ಹಳೆಯ ವಿಡಿಯೋ ಹಂಚಿಕೆ