ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಬದಲು ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಸೂಚನೆ ನೀಡಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗ್ತಿದೆ.
ಬಲಪಂಥೀಯ ಯೂಟ್ಯೂಬ್ ಚಾನೆಲ್ ‘ಟಿವಿ ವಿಕ್ರಮ’ “ಡಿಕೆಶಿ ಹೊಸ ಮುಖ್ಯಮಂತ್ರಿ, ಸಿದ್ದರಾಮಯ್ಯಂಗೆ ಅಧ್ಯಕ್ಷ ಪಟ್ಟ, ದಿಲ್ಲಿ ದೊರೆಯ ಹೊಸಾ ಆಟ” ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ರಾಹುಲ್ ಗಾಂಧಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಕರೆದಿರುವುದು ದೊಡ್ಡ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ವಿಡಿಯೋಗಳು ಹರಿದಾಡುತ್ತಿವೆ ಎಂದು ಹೇಳಿದ್ದಾರೆ.
ಫ್ಯಾಕ್ಟ್ಚೆಕ್ : ವೈರಲ್ ವಿಡಿಯೋದಲ್ಲಿರುವಂತೆ ರಾಹುಲ್ ಗಾಂಧಿ ನಿಜವಾಗಿಯೂ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಅಂದ್ರಾ? ಅವರು ಹೇಳಿದ್ದು ನಿಜವಾಗಿದ್ದರೆ, ಉದ್ದೇಶಪೂರ್ವಕವಾಗಿ ಹೇಳಿದ್ರಾ? ಇಲ್ಲಾ..ಬಾಯಿ ತಪ್ಪಿ ಹೇಳಿದ್ರಾ? ಈ ಎಲ್ಲಾ ವಿಷಯಗಳ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.
ಇದಕ್ಕಾಗಿ, ನಾವು ರಾಹುಲ್ ಗಾಂಧಿಯವರ ಭಾಷಣದ ಮೂಲ ವಿಡಿಯೋವನ್ನು ಹುಡುಕಿದ್ದೇವೆ. ಈ ವೇಳೆ ನ್ಯೂಸ್ 18 ಕನ್ನಡ ಏಪ್ರಿಲ್ 17, 2024ರಂದು “LIVE: Rahul Gandhi In Kolar | Congress Rally”ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ದೊರೆತಿದೆ.
ಒಟ್ಟು 1 ಗಂಟೆ 36 ನಿಮಿಷ 40 ಸೆಕೆಂಡ್ ಅವಧಿಯ ನೇರ ಪ್ರಸಾರದ ವಿಡಿಯೋದಲ್ಲಿ, 22 ನಿಮಿಷ 6 ಸೆಕೆಂಡ್ನಿಂದ ರಾಹುಲ್ ಗಾಂಧಿಯವರ ಭಾಷಣವಿದೆ.
ವಿಡಿಯೋದಲ್ಲಿ 22 ನಿಮಿಷ 14 ಸೆಕೆಂಡ್ನಿಂದ ರಾಹುಲ್ ಗಾಂಧಿ ಈ ರೀತಿ ಹೇಳಿದ್ದಾರೆ…”ಖರ್ಗೆ ಅವರೇ.. ಕಾಂಗ್ರೆಸ್ ಅಧ್ಯಕ್ಷರು, ಸಿದ್ದರಾಮಯ್ಯ ಅವರೇ…ನಮ್ಮ ಮುಖ್ಯಮಂತ್ರಿಗಳು, ಡಿ.ಕೆ ಶಿವಕುಮಾರ್ ಅವರೇ…ಕೆ. ಹೆಚ್ ಮುನಿಯಪ್ಪ ಅವರೇ..ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ..ನನ್ನ ಪ್ರೀತಿಯ ಪಕ್ಷದ ಕಾರ್ಯಕರ್ತರೇ..ಮಾಧ್ಯಮ ಮಿತ್ರರು, ಸಹೋದರ-ಸಹೋದರಿಯರು ಎಲ್ಲರಿಗೂ ನಾನು ಸ್ವಾಗತ ಕೋರುತ್ತೇನೆ”
ಅಂದರೆ, ಇಲ್ಲಿ ರಾಹುಲ್ ಗಾಂಧಿಯವರು ಮೊದಲು ವ್ಯಕ್ತಿಗಳ ಹೆಸರು ಹೇಳಿ ಬಳಿಕ ಅವರ ಹುದ್ದೆ ಉಲ್ಲೇಖಿಸಿದ್ದಾರೆ.
ಟಿವಿ ವಿಕ್ರಮ ಹಾಗೂ ಕೆಲ ಎಕ್ಸ್ ಬಳಕೆದಾರರು, “ಖರ್ಗೆ ಅವರೇ…ಕಾಂಗ್ರೆಸ್ ಅಧ್ಯಕ್ಷರು” ಎಂದು ಹೇಳಿರುವುದಲ್ಲಿ “ಖರ್ಗೆ ಅವರೇ”..ಎಂಬುವುದನ್ನು ಕಟ್ ಮಾಡಿ..”ಕಾಂಗ್ರೆಸ್ ಅಧ್ಯಕ್ಷರು, ಸಿದ್ದರಾಮಯ್ಯ ಅವರೇ, ನಮ್ಮ ಮುಖ್ಯಮಂತ್ರಿಗಳು ಡಿ.ಕೆ ಶಿವಕುಮಾರ್ ಅವರೇ..”ಎಂಬುವುದನ್ನು ಮಾತ್ರ ಪ್ರಸಾರ ಮಾಡಿದ್ದಾರೆ.
ಈ ವಿಡಿಯೋವನ್ನು ನೋಡುವಾಗ ರಾಹುಲ್ ಗಾಂಧಿಯವರು “ಕಾಂಗ್ರೆಸ್ ಅಧ್ಯಕ್ಷರು ಸಿದ್ದರಾಮಯ್ಯ ಅವರೇ, ನಮ್ಮ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ..” ಎಂದು ಹೇಳಿದಂತೆ ಭಾಸವಾಗುತ್ತದೆ.
ಕೋಲಾರದ ಕಾರ್ಯಕ್ರಮದ ನೇರ ಪ್ರಸಾರದ ವಿಡಿಯೋವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲೂ ಲಭ್ಯವಿದೆ. ಈ ವಿಡಿಯೋದಲ್ಲೂ ರಾಹುಲ್ ಗಾಂಧಿಯವರು ಖರ್ಗೆಯವರೇ ಕಾಂಗ್ರೆಸ್ ಅಧ್ಯಕ್ಷರು, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು” ಎಂದಿರುವುದು ಸ್ಪಷ್ಟವಾಗಿ ಇದೆ.
ಹಾಗಾಗಿ, ಟಿವಿ ವಿಕ್ರಮ ಕಾಂಗ್ರೆಸ್ ಕಾರ್ಯಕ್ರಮದ ವಿಡಿಯೋವನ್ನು ಎಡಿಟ್ ಮಾಡಿ ಪ್ರಸಾರ ಮಾಡುವ ಹಸಿ ಸುಳ್ಳು ಹೇಳಿರುವುದು ಇಲ್ಲಿ ಖಚಿತವಾಗಿದೆ.
ಇದನ್ನೂ ಓದಿ : Fact Check: ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಆಪ್ ನಾಯಕಿ ಅತಿಶಿ ಕ್ಷಮೆ ಕೇಳಿದ್ದಾರೆ ಎನ್ನುವುದು ಸುಳ್ಳು