ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಕಳೆದ ಮೂರು ತಿಂಗಳಿನಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದನ್ನು ಮೋದಿ ಸರ್ಕಾರ ಇರುವವರೆಗೂ ಮುಂದುವರಿಸಲು ಸಿದ್ಧ ಎಂದು ನರೇಂದ್ರ ಟಿಕಾಯತ್ ಹೇಳಿದ್ದಾರೆ.
“ರೈತರು ಮೋದಿ ಸರ್ಕಾರದ ಉಳಿದ ಮೂರೂವರೆ ವರ್ಷ ಅವಧಿಯುದ್ದಕ್ಕೂ ತಮ್ಮ ಹೋರಾಟ ಮುಂದುವರಿಸಲು ಸಿದ್ಧವಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಪ್ರಯತ್ನಿಸಿದರೂ ಈ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ರೈತ ಮುಖಂಡ ನರೇಂದ್ರ ಟಿಕಾಯತ್ ಹೇಳಿದ್ದಾರೆ.
ತಮ್ಮ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್ನಲ್ಲಿ ಯಾವುದೇ ಅಧಿಕೃತ ಹುದ್ದೆ ಹೊಂದದೇ ಹಾಗೂ ಕುಟುಂಬದ ಕೃಷಿ ಕಾರ್ಯಗಳಲ್ಲಿ ಹೆಚ್ಚಾಗಿ ನರೇಂದ್ರ ಟಿಕಾಯತ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಇಬ್ಬರು ಹಿರಿಯ ಸೋದರರಾದ ಹಾಗೂ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ನರೇಶ್ ಮತ್ತು ರಾಕೇಶ್ ಟಿಕಾಯತ್ ಅವರಂತೆಯೇ ರೈತರ ಸಮಸ್ಯೆ ಕುರಿತಂತೆ ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಎಂಎಸ್ಪಿ ಕಾಗದದಲ್ಲಿತ್ತು, ಕಾಗದದಲ್ಲಿ ಇದೆ ಮತ್ತು ಮುಂದೆಯೂ ಕಾಗದದಲ್ಲಿಯೇ ಇರಲಿದೆ ಹೊರತು ರೈತರಿಗೆ ಸಿಗುತ್ತಿಲ್ಲ:…
ಮುಜಫ್ಫರನಗರದ ಸಿಸೌಲಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ 45 ವರ್ಷದ ನರೇಂದ್ರ, “ತಮ್ಮ ಕುಟುಂಬದ ಯಾವುದೇ ಒಬ್ಬ ಸದಸ್ಯ ಕೂಡ ಯವುದೇ ತಪ್ಪು ಮಾಡಿದ್ದಾರೆಂದು ಸಾಬೀತಾದಲ್ಲಿ ಇಡೀ ಟಿಕಾಯತ್ ಕುಟುಂಬ ಪ್ರತಿಭಟನಾ ಸ್ಥಳವನ್ನು ತ್ಯಜಿಸುತ್ತದೆ” ಎಂದು ಹೇಳಿದ ಅವರು ತಮ್ಮ ಕುಟುಂಬ ಪ್ರತಿಭಟನೆಯಿಂದ ಹಣ ಮತ್ತು ಆಸ್ತಿ ಸಂಪಾದಿಸಿದೆ ಎಂಬ ಕೆಲ ಆರೋಪಗಳನ್ನು ನಿರಾಕರಿಸಿದ್ದಾರೆ.
“ನಾನು ಮನೆಯಲ್ಲಿದ್ದರೂ ಸಹ ನನ್ನ ಕಣ್ಣೆಲ್ಲಾ ಪ್ರತಿಭಟನಾ ಸ್ಥಳದಲ್ಲಿದೆ. ಆಗಾಗ ಅಲ್ಲಿಗೆ ಭೇಟಿ ನೀಡುತ್ತಿರುತ್ತೇನೆ” ಎಂದು ಹೇಳಿದರು.
ತಮ್ಮ ಎಲ್ಲಾ ಬೇಡಿಕೆಗಳು ಸಂಪೂರ್ಣವಾಗಿ ಈಡೇರಿದ ನಂತರ ರೈತರು ಪ್ರತಿಭಟನಾ ಸ್ಥಳದಿಂದ ತೆರಳುತ್ತಾರೆ. ಯಾವುದೇ ಭರವಸೆ ಅಥವಾ ಭಾಗಶಃ ಬೇಡಿಕೆ ಪೂರೈಕೆಗೆ ಅವರು ಬಗ್ಗುವುದಿಲ್ಲ ಎಂದು ರೈತರ ನಿಲುವನ್ನು ಪುನರುಚ್ಚರಿಸಿದರು.
“ಕೃಷಿ ಉತ್ಪನ್ನಗಳನ್ನು ಎಂಎಸ್ಪಿಗೆ ಖರೀದಿಸಲಾಗುವುದೆಂದು ಹೇಳುತ್ತಿರುವ ಸರ್ಕಾರ ಲಿಖಿತ ಭರವಸೆಯನ್ನು ಏಕೆ ನೀಡುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು.
ರಾಕೇಶ್ ಟಿಕಾಯತ್, ನರೇಶ್ ಟಿಕಾಯತ್ ಅವರು ರೈತ ಹೋರಾಟದ ಮುಂಚೂಣಿ ನಾಯಕರ ಸಾಲಿನಲ್ಲಿದ್ದಾರೆ. ಈಗ ಇವರ ಮತ್ತೋರ್ವ ಸಹೋದರರಾದ ನರೇಂದ್ರ ಟಿಕಾಯತ್ ಕೂಡ ರೈತ ಹೋರಾಟವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಇಂದು ಬಂಗಾಳಕ್ಕೆ ಸರ್ಕಾರ ಹೋಗಿದೆ, ಮಾರ್ಚ್ 13ಕ್ಕೆ ನಾವು ಹೋಗುತ್ತೇವೆ: ರಾಕೇಶ್ ಟಿಕಾಯತ್