ತಮಿಳುನಾಡಿನಲ್ಲಿ ಪತ್ರಕರ್ತರೊಬ್ಬರ ಮೇಲೆ ಬುಧವಾರ ರಾತ್ರಿ ಅಪರಿಚಿತರ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದ್ದು, ಪ್ರಸ್ತುತ ಅವರು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದ ತಿರುಪ್ಪೂರ್ ಜಿಲ್ಲೆಯ ಖಾಸಗಿ ವಾಹಿನಿಯ ಪತ್ರಕರ್ತ ನೇಸಾ ಪ್ರಭು ಅವರು ಅಕ್ರಮ ಮದ್ಯ ಮಾರಾಟ ಮತ್ತು ಅವ್ಯವಹಾರಗಳ ಬಗ್ಗೆ ವರದಿ ಮಾಡುತ್ತಿದ್ದರು ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.
ಹಲ್ಲೆಗೂ ಮುನ್ನ ಅವರು ಪೊಲೀಸ್ ಕಂಟ್ರೋಲ್ ರೂಂಗೆ ಪದೇ ಪದೇ ಕರೆಗಳನ್ನು ಮಾಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಬೈಕ್ಗಳಲ್ಲಿ ಬಂದಿರುವ ವ್ಯಕ್ತಿಗಳ ಗುಂಪೊಂದು ನನ್ನನ್ನು ಹಿಂಬಾಲಿಸುತ್ತಿದೆ ಎಂದು ಹೇಳಿದ ಅವರು, ಪೊಲೀಸರಲ್ಲಿ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಹತ್ತಿರದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಂತೆ ಹೇಳಿ ಸುಮ್ಮನಾಗಿದ್ದಾರೆ.
ದಾಳಿಯನ್ನು ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ದಾಳಿಯ ಮೊದಲು ಪತ್ರಕರ್ತರು ಪದೇ ಪದೇ ಮನವಿ ಮಾಡಿದರೂ ನಿಷ್ಕ್ರಿಯತೆಗಾಗಿ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಅಮಾನತಿನಲ್ಲಿ ಇರಿಸಲು ಅವರು ಆದೇಶಿಸಿದರು.
ಪ್ರಭು ಅವರ ಚಿಕಿತ್ಸೆಗಾಗಿ ₹3 ಲಕ್ಷ ನೆರವು ಘೋಷಿಸಿದ ಸಿಎಂ, “ನನಗೆ ನೋವಾಗಿದೆ, ಈ ದಾಳಿಗೆ ಕಾರಣರಾದ ಯಾರೇ ಆದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಮಾರಣಾಂತಿಕ ದಾಳಿ ನಡೆಸಿರುವ ಗ್ಯಾಂಗ್ ಈ ಹಿಂದೆ ಅಂಗಡಿಯೊಂದರಲ್ಲಿ ತನ್ನ ಬಗ್ಗೆ ವಿಚಾರಿಸಿದೆ ಮತ್ತು ನನ್ನ ತಾಯಿ ಒಬ್ಬರೇ ಇದ್ದಾಗ ಕಾರಿನಲ್ಲಿ ಮನೆಗೆ ಭೇಟಿ ನೀಡಿದ್ದರು ಎಂದು ಪ್ರಭು ಆರೋಪಿಸಿದ್ದಾರೆ.
ಪ್ರಭು ಅವರು ತಮ್ಮ ರಕ್ಷಣೆಗಾಗಿ ತಂಡವನ್ನು ಕಳುಹಿಸುವಂತೆ ಪೊಲೀಸರಿಗೆ ಮನವಿ ಮಾಡುವುದನ್ನು ಕಾಲ್ ರೆಕಾರ್ಡಿಂಗ್ ನಲ್ಲಿ ದಾಖಲಾಗಿದೆ. ಒಂದು ಗುಂಪು ತನ್ನನ್ನು ಹಿಂಬಾಲಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಔಪಚಾರಿಕವಾಗಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಖುದ್ದು ಭೇಟಿ ನೀಡುವಂತೆ ತಿಳಿಸಿದ್ದಾರೆ.
ರಾಜ್ಯದ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸಾಮಿ ಅವರು ದಾಳಿಯನ್ನು “ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ” ಎಂದು ಆರೋಪಿಸಿದ್ದಾರೆ. “ದಾಳಿ ನಡೆಯುವ ನಾಲ್ಕು ಗಂಟೆಗಳ ಮೊದಲು ವರದಿಗಾರರು ಆತಂಕಕಾರಿ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.
ಚೆನ್ನೈನಲ್ಲಿ ಪತ್ರಕರ್ತರು ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸಿದ್ದಾರೆ. ಗಾಯಾಳು ಪತ್ರಕರ್ತರಿಗೆ ನ್ಯಾಯದ ಜೊತೆಗೆ, ಅವರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ; ಇಂಡಿಯಾ ಮೈತ್ರಿಕೂಟ ತೊರೆಯಲು ಅಧೀರ್ ರಂಜನ್ ಚೌಧರಿ ಕಾರಣ: ಟಿಎಂಸಿ ಸಂಸದ ಓಬ್ರಿಯಾನ್