ಶಿವಮೊಗ್ಗದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಊಟದ ವೇಳೆ ಶಿಕ್ಷಕ ತನ್ನ ಮಗಳಿಗೆ ಮೊಟ್ಟೆ ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ವಿದ್ಯಾರ್ಥಿನಿಯೋರ್ವರ ಪೋಷಕರು ಆರೋಪಿಸಿದ್ದರು. ಆದರೆ ವಾಸ್ತವವಾಗಿ ಯಾವುದೇ ಶಿಕ್ಷಕರು ಬಾಲಕಿಗೆ ಮೊಟ್ಟೆ ತಿನ್ನುವಂತೆ ಬಲವಂತ ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ತನ್ನ ಮಗಳಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಕಾರಣ ಅವಳು ಅಸ್ವಸ್ಥಳಾಗಿದ್ದಾಳೆ. ಶಾಲಾ ಆಡಳಿತವು ತನ್ನ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಶ್ರೀಕಾಂತ್ ಎಂಬವರು ಆರೋಪಿಸಿದ್ದರು.
ಈ ಬಗ್ಗೆ ಹೊಸನಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) H.R ಕೃಷ್ಣಮೂರ್ತಿಯವರು ಸ್ಪಷ್ಟನೆ ನೀಡಿದ್ದು, ಇದೇ ನ.17ರಂದು ಶಿಕ್ಷಕ ಪುಟ್ಟನಾಯ್ಕರವರು ಪೌಷ್ಟಿಕ ಆಹಾರ ಸೇವನೆ ಬಗ್ಗೆ ಮಕ್ಕಳಿಗೆ ಪಾಠ ಹೇಳಿದ್ದಾರೆ. ಇದರಿಂದ ಪ್ರೇರಣೆಗೊಂಡ 2ನೇ ತರಗತಿಯ ಬಾಲಕಿ ಸ್ವಯಂ ಪ್ರೇರಿತವಾಗಿ ನವೆಂಬರ್ 21 ರಂದು ಮೊಟ್ಟೆ ಸೇವಿಸಿದೆ. ಶಿಕ್ಷಕರಾಗಲಿ, ಅಡುಗೆ ಸಿಬ್ಬಂದಿಗಳಾಗಲಿ ಮೊಟ್ಟೆ ತಿನ್ನುವಂತೆ ಯಾವ ಮಗುವಿಗೂ ಒತ್ತಾಯಿಸಿಲ್ಲ. ಆದರೂ ಪಾಲಕರ ಭಾವನೆಗೆ ನೋವಾಗಿದೆ ಎಂದು ಶಿಕ್ಷಕ ಪುಟ್ಟನಾಯ್ಕ ಕ್ಷಮೆ ಕೇಳಿದ್ದಾರೆ. ಪ್ರಕರಣ ಸುಖ್ಯಾಂತಗೊಂಡಿದೆ ಎಂದು ಹೊಸನಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) H.R ಕೃಷ್ಣಮೂರ್ತಿಯವರು ಸ್ಪಷ್ಟನೆ ನೀಡಿದ್ದಾರೆ.
ಮೊಟ್ಟೆ ತಿನ್ನಲು ಬಾಲಕಿಗೆ ಬಲವಂತ ಮಾಡಲಾಗಿದೆ ಎಂದು ಬಾಲಕಿಯ ಪೋಷಕರು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮತ್ತು ಸ್ಥಳೀಯ ಶಾಸಕರಿಗೆ ದೂರನ್ನು ನೀಡಿದ್ದರು. ಈ ಕುರಿತ ವಿಚಾರಣೆಯ ಭಾಗವಾಗಿ ಶಿಕ್ಷಣಾಧಿಕಾರಿ ನ.23ರಂದು ಶಾಲೆಗೆ ಭೇಟಿ ನೀಡಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಮಗು ಸ್ವತಃ ಮೊಟ್ಟೆಗಳನ್ನು ಕೇಳಿದೆ ಮತ್ತು ಶಿಕ್ಷಕರು ಬಲವಂತ ಮಾಡಿಲ್ಲ ಎನ್ನುವುದು ಬಯಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಶಿಕ್ಷಕರು ಮೊಟ್ಟೆ ಯಾರಿಗೆಲ್ಲ ಬೇಕು ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ಬಾಲಕಿ ಕೈ ಎತ್ತಿದ್ದಾಳೆ ಹೊರತು ಯಾವುದೇ ವಿದ್ಯಾರ್ಥಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿಲ್ಲ. ಪೋಷಕರ ಆರೋಪ ಸತ್ಯಕ್ಕೆ ದೂರವಾದುದು ಎಂದು ತಿಳಿದು ಬಂದಿದೆ.
ಇದನ್ನು ಓದಿ: ಯುದ್ಧ ಭೀಕರತೆ: ಗಾಝಾದಲ್ಲಿ ಪತ್ರಕರ್ತರ ಹತ್ಯಾಕಾಂಡ