ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಎರಡನೇ ಪ್ರಯತ್ನದಲ್ಲಿ ಇನ್ನೇನು ಸರ್ಕಾರ ರಚಿಸಿಬಿಡುತ್ತವೆ ಎನ್ನುವಾಗಲೇ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ. ಶಿವಸೇನೆಯನ್ನು ಎನ್.ಡಿ.ಎ ಕೂಟದಿಂದ ಹೊರಹಾಕಿರುವುದು ಶಿವಸೇನೆಯನ್ನು ಕೆರಳುವಂತೆ ಮಾಡಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಮತ್ತೆ ಮುಂದುವರೆಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ನ್ಯಾಷನಲ್ ಡೆಮಾಕ್ರೆಟಿಕ್ ಮೈತ್ರಿಕೂಟದಿಣದ ಪಕ್ಷವನ್ನು ಹೊರಹಾಕಿರುವ ಬಿಜೆಪಿಯ ಕ್ರಮವನ್ನು ಖಂಡಿಸಿರುವ ಶಿವಸೇನೆ ಮುಖವಾಣಿ ಸಾಮ್ನಾ ಬಿಜೆಪಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಾಳಠಾಕ್ರೆ ಮತ್ತು ಇತರೆ ಕೆಲವರು ಎನ್.ಡಿ.ಎ ಮೈತ್ರಿ ಕೂಟವನ್ನು ರಚಿಸಿದರು. ಆಗ ಹಿಂದುತ್ವದ ಬಗ್ಗೆ ಮಾತುಕತೆ ಮಾಡಿರಲಿಲ್ಲ. ಅಷ್ಟೇ ಅಲ್ಲ ರಾಜಕೀಯದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆ ವಿಷಯಗಳನ್ನು ತರುವ ಕುರಿತೂ ಚರ್ಚೆ ನಡೆಸಿರಲಿಲ್ಲ ಎಂದು ಸಾಮ್ನಾ ಸಂಪಾದಕೀಯದಲ್ಲಿ ಸ್ಪಷ್ಟಪಡಿಸಿದೆ.
ಎನ್.ಸಿ.ಪಿ-ಕಾಂಗ್ರೆಸ್ ಜೊತೆ ಮೈತ್ರಿಯ ಆರೋಪ ಹೊರಿಸಿ ಎನ್.ಡಿ.ಎ ಯಿಂದ ಶಿವಸೇನೆಯನ್ನು ಹೊರ ಹಾಕಿರುವುದು ಖಂಡನೀಯ. ಶಿವಸೇನೆಯನ್ನು ಹೊರಹಾಕಲು ಬಾಳಠಾಕ್ರೆಯವರ ವರ್ಷಾಚರಣೆಯ ಸಂದರ್ಭವನ್ನು ನಿಗದಿಪಡಿಸಿರುವುದು ಮಹಾರಾಷ್ಟ್ರದ ಜನರ ಬೆನ್ನಿಗೆ ಚೂರಿ ಹಾಕಿದಂತಾಗಿದೆ ಎಂದು ಟೀಕಾಪ್ರಹಾರ ನಡೆಸಿದೆ.
ಹಿಂದುತ್ವ ಮತ್ತು ರಾಷ್ಟ್ರೀಯತೆಯ ವಿಷಯಗಳು ಎನ್.ಡಿ.ಎ. ರಚನೆಯ ಸಂದರ್ಭದಲ್ಲಿ ಚರ್ಚೆಗೆ ಬಂದಿರಲಿಲ್ಲ ಎಂಬುದು ಈಗ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ ಮುನ್ನಡೆಸುತ್ತಿರುವವರಿಗೆ ಮಾಹಿತಿ ಇಲ್ಲ. ಆದರೂ ಶಿವನೇನೆಗೆ ಒಂದು ಮಾತನ್ನು ತಿಳಿಸದೆ, ಯಾವುದೇ ಮಾಹಿತಿಯನ್ನೂ ಕೊಡದೆ ಏಕಪಕ್ಷೀಯವಾಗಿ ಹೊರ ಹಾಕಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದೆ.
ಬಿಜೆಪಿ ಮಹಾರಾಷ್ಟ್ರದ ವಿರುದ್ದ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ನಾವು ಸುಮ್ಮನೆ ಕೂರುವುದಿಲ್ಲ ಎಂದು ಸಾಮ್ನಾ ಸಂಪಾದಕೀಯ ತಿಳಿಸಿದೆ. ಬಿಜೆಪಿಯನ್ನು ಮೊಹಮದ್ ಘೋರಿ ವಂಶಕ್ಕೆ ಹೋಲಿಸಿರುವ ಶಿವಸೇನೆ, ನಾವು ತಿರುಗಿಬಿದ್ದರೆ ಬಿಜೆಪಿ ಇನ್ನಿಲ್ಲವಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಹಿಂದೆ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌವ್ಹಾಣ್ ತಪ್ಪು ಮಾಡಿ 17 ಬಾರಿ ಸೋಲನ್ನು ಅನುಭವಿಸಬೇಕಾಯಿತು. 18 ಬಾರಿ ಜೈಲಿಗೆ ಹೋಗಿಬಂದರು ಎಂಬುದನ್ನು ನೆನೆಪಿಸಿರುವ ಶಿವಸೇನೆ ಒಂದು ಶೋಕಾಸ್ ನೋಟಿಸ್ ನೀಡದೆ ತೆಗೆದುಹಾಕಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.