ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಕ್ಕೆ ಗ್ರೇಟಾ ಥನ್ಬರ್ಗ್ ವಿರುದ್ಧ “ಕ್ರಿಮಿನಲ್ ಪಿತೂರಿ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸಿದ್ದಾರೆ” ಎಂದು ಪ್ರಕರಣವನ್ನು ದಾಖಲಿಸಿ ಎಫ್ಐಆರ್ ಹಾಕಲಾಗಿತ್ತು. ಈ ಕುರಿತು ಕನ್ಹಯ್ಯಾ ಕುಮಾರ್ ಟ್ವೀಟ್ ಮಾಡಿದ್ದು, ಅವರಿಗೆ ಸ್ವಾಗತ ಕೋರಿದ್ದಾರೆ.
ಕನ್ಹಯ್ಯಾ ಟ್ವೀಟ್ ಮಾಡಿ, “ಡಿಯರ್ ಗ್ರೇಟಾ ಥನ್ಬರ್ಗ್, ನಮ್ಮ ಕ್ಲಬ್ಗೆ ನಿಮಗೆ ಸ್ವಾಗತ. ಜಯ್ ಶಾ ಅವರ ತಂದೆಯ ಆದೇಶದ ಮೇರೆಗೆ ನಿಮ್ಮ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನೀವು ಇತಿಹಾಸದ ನೈಜ ಹಾದಿಯಲ್ಲಿದ್ದೀರಿ ಮತ್ತು ಉತ್ತಮ ಕಾರ್ಯಕ್ಕಾಗಿ ಹೋರಾಟ ಮಾಡುತ್ತಿದ್ದೀರಿ ಅನ್ನುವುದಕ್ಕಿರುವ ಸಾಕ್ಷಿ ಇದು. ನನ್ನ ಹಲವಾರು ಸ್ನೇಹಿತರು ಈ ಹೋರಾಟಗಳ ಭಾಗವಾಗಿದ್ದಕ್ಕೆ ಈಗಲೂ ಜೈಲಿನಲ್ಲಿದ್ದಾರೆ. ನಿಮ್ಮ ಹೋರಾಟ ಮುಂದುವರಿಸಿ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆರೇ ಪದಗಳ ಟ್ವೀಟ್: ಒನ್ ಶಾಟ್ ಲಸಿಕೆ ಮಂಪರಿನಿಂದ ಹೊರಬಂದ ’Low-ಕಲ್’ ಸೆಲೆಬ್ರಿಟಿಗಳು!
Dear @GretaThunberg welcome to the club! An FIR against you by Delhi Police, at the direction of Jay Shah’s father, is proof that you are fighting the good fight & are on the right side of history! Many of my friends are already in prison as part of it! Keep fighting! ✊?
— Kanhaiya Kumar (@kanhaiyakumar) February 4, 2021
ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಗ್ರೇಟಾ ಥನ್ಬರ್ಗ್ ಒಂದು ದಿನದ ಹಿಂದೆಯಷ್ಟೆ ಟ್ವೀಟ್ ಮಾಡಿದ್ದರು.
ಇವರಿಗಿಂತಲು ಮೊದಲು ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ರೈತರನ್ನು ಬೆಂಬಲಿಸಿದ್ದರು. ಇದಾದ ನಂತರ ಗ್ರೇಟಾ ಥನ್ಬರ್ಗ್ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಹಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ವಿಶ್ವದ ಗಮನ ಸೆಳೆದಿದ್ದು, ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ ಸಿಗುವಂತಾಗಿದೆ.
ಇದನ್ನೂ ಓದಿ: ರೈತರ ಮಹಾಪಂಚಾಯತ್ಗೆ ಅನುಮತಿ ನಿರಾಕರಿಸಿದ ಯುಪಿ ಸರ್ಕಾರ
ಗ್ರೇಟಾ ಥನ್ಬರ್ಗ್ ತನ್ನ ಟ್ವೀಟ್ನಲ್ಲಿ, “ಭಾರತೀಯ ರೈತರ ಹೋರಾಟದ ಜೊತೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ” ಎಂದು ಎಂದು ಸಿಎನ್ಎನ್ ವರದಿಯನ್ನು ಹಂಚಿಕೊಂಡಿದ್ದರು. ಈ ಕಾರಣಕ್ಕಾಗಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.
ತಮ್ಮ ಮೇಲೆ ಎಫ್ಐಆರ್ ಹಾಕಿದ ನಂತರ ಗ್ರೇಟಾ ಥನ್ಬರ್ಗ್ ಮತ್ತೇ ರೈತರ ಹೋರಾಟವನ್ನು ಬೆಂಬಲಿಸಿದ್ದಾರೆ. ಈಗಷ್ಟೇ ಹಾಕಿದ ಟ್ವೀಟ್ನಲ್ಲಿ, “ನಾನಿನ್ನೂ ರೈತರನ್ನು ಹಾಗೂ ಅವರ ಶಾಂತಿಯುತ ಹೋರಾಟವನ್ನು ಬೆಂಬಲಿಸುತ್ತೇನೆ. ಯಾವುದೇ ರೀತಿಯ ದ್ವೇಷ, ಬೆದರಿಕೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಗಳು ನನ್ನ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ನಿನ್ನೆಯಿಂದ ರೈತ ಹೋರಾಟಕ್ಕೆ ಅಂತಾರಾಷ್ಟ್ರೀಯ ಬೆಂಬಲ ಹೆಚ್ಚುತ್ತಿದ್ದು, ಇದರಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಕೇಂದ್ರ ಸರ್ಕಾರ, ರೈತ ಹೋರಾಟವು ದೇಶದ ಆಂತರಿಕ ಸಮಸ್ಯೆಯಾಗಿದ್ದು ವಿದೇಶಿಗರು ಇದರ ಬಗ್ಗೆ ಮಾತನಾಡಬಾರದು ಎಂದು ಹೇಳಿತ್ತು. ಜೊತೆಗೆ #FarmersProtest ಹ್ಯಾಶ್ಟ್ಯಾಗ್ಗೆ ವಿರುದ್ದವಾಗಿ ’ಇಂಡಿಯಾ ಟುಗೆದರ್’ ಮತ್ತು ’ಇಂಡಿಯಾ ಅಗೇನ್ಸ್ಟ್ ಪ್ರೊಪಗಾಂಡ’ ಎಂಬ ಹ್ಯಾಶ್ ಟ್ಯಾಗನ್ನು ನೀಡಿತ್ತು.
ಇದನ್ನೂ ಓದಿ: ಅಮೆರಿಕದ ದ್ವಂದ್ವ ನೀತಿ: ಡೆಮಾಕ್ರಸಿಗಾಗಿ ರೈತರಿಗೆ ಬೆಂಬಲ, ಬಂಡವಾಳಶಾಹಿಗಳಿಗಾಗಿ ಕೃಷಿ ಕಾಯ್ದೆಗಳ ಸ್ತುತಿ!