ದುರ್ಗಾ ಮೂರ್ತಿ ನಿಮಜ್ಜನದ ಮೆರವಣಿಗೆ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ವಶಪಡಿಸಿಕೊಂಡಿದ್ದ ವಾಹನವನ್ನು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಬಲವಂತವಾಗಿ ತೆಗೆದುಕೊಂಡು ಹೋಗಲು ಜನರ ಗುಂಪಿಗೆ ಪ್ರಚೋದಿಸಿದ ಆರೋಪದ ಮೇಲೆ ಬಿಜೆಪಿ ನಾಯಕ, ಮಹಾರಾಜ್ಗಂಜ್ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಮೇಲೆ ಪ್ರಕರಣ ದಾಖಲಾಗಿದೆ. ಇದಲ್ಲದೆ ಕೃತ್ಯ ನಡೆಸಿದ ಇತರ 16 ಮಂದಿ ವಿರುದ್ಧ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಈ ಕುರಿತು ಸರನ್ ಜಿಲ್ಲೆಯ ಬನಿಯಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿಮಜ್ಜನ ಮೆರವಣಿಗೆ ವೇಳೆ ಎರಡು ಟ್ರ್ಯಾಕ್ಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದು ಟ್ರಾಕ್ಟರ್ನಲ್ಲಿ ಪರವಾನಗಿ ಇಲ್ಲದೆ ಧ್ವನಿವರ್ಧಕಗಳನ್ನು ಬಳಸಲಾಗಿತ್ತು ಮತ್ತು ಇನ್ನೊಂದು ಟ್ರಾಕ್ಟರ್ಗೆ ಅನುಮತಿ ಪಡೆಯದೆ ಮೆರವಣಿಗೆಗೆ ತರಲಾಗಿದೆ.
ಎರಡೂ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು ಬನಿಯಾಪುರ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿದ್ದರು. ಬಳಿಕ ಪೊಲೀಸ್ ಠಾಣೆಗೆ ನುಗ್ಗಿದ ಜನರ ಗುಂಪು ಅಲ್ಲಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಬಲವಂತವಾಗಿ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕೃತ್ಯದಲ್ಲಿ ಭಾಗಿಯಾದವರನ್ನು ಅಧಿಕಾರಿಗಳು ಗುರುತಿಸಿದ್ದಾರೆ ಮತ್ತು ಸಂಸದ ಸಿಗ್ರಿವಾಲ್ ಅವರು ಗುಂಪಿಗೆ ನೇತೃತ್ವ ವಹಿಸಿದ್ದರು ಎಂದು ಕಂಡುಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಸಿಗ್ರಿವಾಲ್ ಪೊಲೀಸ್ ಠಾಣೆಯ ಹೊರಗೆ ತನ್ನ ವಾಹನದೊಳಗೆ ಕುಳಿತುಕೊಂಡು ಕೃತ್ಯ ನಡೆಸಲು ಜನರನ್ನು ಪ್ರಚೋದಿಸಿದ್ದಾರೆ.
ಸರಣ್ ಜಿಲ್ಲೆಯ ಎಸ್ಪಿ ಗೌರವ್ ಮಂಗಳಾ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವು ಸಿಗ್ರಿವಾಲ್ ಸೇರಿದಂತೆ 17 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಇವರಲ್ಲಿ ಕೆಲವರು ಅಪರಿಚಿತರು ಕೂಡ ಇದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸರಣ್ ಜಿಲ್ಲೆಯ ಭಗವಾನ ಬಜಾರ್ ಪೋಲಿಸ್ ಠಾಣಾ ವ್ಯಾಪ್ತಿಯ ನಯಿ ಬಜಾರ್ನಲ್ಲಿ ದುರ್ಗಾದೇವಿಯ ವಿಗ್ರಹದ ವಿಸರ್ಜನೆ ಸಂದರ್ಭ ಘಟನೆ ನಡೆದಿದೆ.