ಕಳೆದ ವರ್ಷ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬಕ್ಕೆ ಸೇರಿದ ಕನಿಷ್ಠ ಐವರು ಸದಸ್ಯರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ತೀವ್ರ ಗಾಯಗೊಂಡಿರುವ ಬಾಲ್ಮುಕುಂದ್ ಸಿಂಗ್ ಮತ್ತು ದಿಲ್ಖುಷ್ ಸಿಂಗ್ ಅವರನ್ನು ಪಾಟ್ನಾಕ್ಕೆ ಕರೆದೊಯ್ಯಲಾಗಿದ್ದು, ಬಾಲ್ಮಿಕಿ ಸಿಂಗ್ ಹಾಗೂ ತೋನು ಸಿಂಗ್ ಅವರನ್ನು ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರದ ಲಖಿಸರಾಯ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 333ರಲ್ಲಿ ಮಂಗಳವಾರ ಬೆಳಿಗ್ಗೆ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದಾಗ ವಾಹನವು ಟ್ರಕ್ಗೆ ಡಿಕ್ಕಿಯಾಗಿದ್ದು ಐವರು ಮೃತಪಟ್ಟಿದ್ದಾರೆ.
ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಒಪಿ ಸಿಂಗ್ ಅವರ ಸಹೋದರಿ ಗೀತಾ ದೇವಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಪಾಟ್ನಾದಿಂದ ವಾಪಾಸ್ಸಾಗುತ್ತಿದ್ದರು. ಓಪಿ ಸಿಂಗ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವನಾಗಿದ್ದಾರೆ. ಸುಶಾಂತ್ ಸಿಂಗ್ ಅವರು 2020ರ ಜೂನ್ 14ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಇದನ್ನೂ ಓದಿರಿ: ನ.19 ರಿಂದ ’ಸಲಗ’ದಲ್ಲಿ ಸಿದ್ಧಿ ಬುಡಕಟ್ಟಿನ ಟಿಣಿಂಗ ಮಿಣಿಂಗ ಟಿಶ್ಯಾ ಹಾಡು ಸೇರ್ಪಡೆ
ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾದ ಪ್ರೌಢಶಾಲೆ ಬಳಿ ಅಪಘಾತ ಸಂಭವಿಸಿದೆ. ಲಖಿಸರಾಯ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಕುಮಾರ್, “ಟ್ರಕ್ ಮತ್ತು ಸುಮೋ [ಎಸ್ಯುವಿ] ನಡುವೆ ಭಾರಿ ಡಿಕ್ಕಿ ಸಂಭವಿಸಿದ್ದು, ಹತ್ತು ಜನರು ಪಾಟ್ನಾದಿಂದ ಹಿಂತಿರುಗುತ್ತಿದ್ದರು. ಸುಮೋ ಚಾಲಕ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಾಳುಗಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ತಿಳಿಸಿದ್ದಾರೆ.
ಗಾಯಗೊಂಡಿರುವ ಬಾಲ್ಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಇಬ್ಬರನ್ನು ಉತ್ತಮ ಚಿಕಿತ್ಸೆಗಾಗಿ ಪಾಟ್ನಾಗೆ ಕಳುಹಿಸಲಾಗಿದ್ದು, ಉಳಿದ ಇಬ್ಬರಾದ ಬಾಲ್ಮಿಕಿ ಸಿಂಗ್ ಮತ್ತು ತೋನು ಸಿಂಗ್ ಅವರನ್ನು ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರನ್ನು ಲಾಲ್ಜಿತ್ ಸಿಂಗ್ (ಒಪಿ ಸಿಂಗ್ ಅವರ ಸೋದರ ಸಂಬಂಧಿ), ಅವರ ಇಬ್ಬರು ಮಕ್ಕಳಾದ ಅಮಿತ್ ಶೇಖರ್ ಅಲಿಯಾಸ್ ನೇಮಾನಿ ಸಿಂಗ್ ಮತ್ತು ರಾಮಚಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಉಳಿದವರನ್ನು ಬೇಬಿದೇವಿ, ಅನಿತಾದೇವಿ ಮತ್ತು ಚಾಲಕ ಪ್ರೀತಂ ಕುಮಾರ್ ಎಂದು ಗುರುತಿಸಲಾಗಿದೆ. ಸಾವಿಗೀಡಾಗಿರುವ ಕುಮಾರ್, ಇದೇ ಕುಟುಂಬದವರೇ ಎಂಬುದು ಖಚಿತವಾಗಿಲ್ಲ.
ಜಮುಯಿ ಜಿಲ್ಲೆಯ ಭಂಡಾರ್ ಗ್ರಾಮದಲ್ಲಿನ ತಮ್ಮ ಮನೆಗೆ ಕುಟುಂಬವು ಹಿಂದಿರುಗುತ್ತಿದ್ದಾಗ ಅವರ ವಾಹನವು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿರಿ: ಜೈ ಭೀಮ್ ಸಿನಿಮಾ: ನಟ ಸೂರ್ಯ, ನಿರ್ದೇಶಕ ಟಿ.ಜೆ.ಜ್ಞಾನವೇಲ್ಗೆ ಲೀಗಲ್ ನೋಟೀಸ್
ಆತ್ಮಹತ್ಯೆಗೆ ಶರಣಾಗಿದ್ದ ಸುಶಾಂತ್; ನೋವಿನಲ್ಲಿರುವ ಕುಟುಂಬಕ್ಕೆ ಮತ್ತೆ ಆಘಾತ
2020ರಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವು ಅನುಮಾನಗಳಿಗೆ ಎಡೆ ಮಾಡಿತ್ತು. ಆದರೆ ನಂತರದಲ್ಲಿ ನಡೆದ ತನಿಖೆಗಳು, ಊಹಾಪೋಹಗಳಿಗೆ ತೆರೆ ಎಳೆದಿದ್ದವು.
ಏಮ್ಸ್ ವೈದ್ಯಕೀಯ ಮಂಡಳಿಯು ಸಿಬಿಐಗೆ ನೀಡಿದ ವರದಿಯಲ್ಲಿ ಇದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಹೇಳಿತ್ತು. “ಈ ವಿಷಯ ನಮಗೆ ಯಾವಾಗಲೋ ತಿಳಿದಿತ್ತು. ಅದರೆ ಈಗ ಅದನ್ನು ಪುನರ್ಸಾಬೀತುಪಡಿಸಲಾಗಿದೆ ಅಷ್ಟೆ” ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ಬೀರ್ ಸಿಂಗ್ ಹೇಳಿದ್ದರು.
“34 ವರ್ಷದ ಬಾಲಿವುಡ್ ತಾರೆ ಸುಶಾಂತ್ ಸಿಂಗ್ ಅನ್ನು ಹತ್ಯೆ ಮಾಡಲಾಗಿದೆ ಎನ್ನುವ ಕುಟುಂಬದ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ” ಎಂದು ಏಮ್ಸ್ ತಿಳಿಸಿತ್ತು. ಇದು ಸುಶಾಂತ್ ಕುಟುಂಬ ಮತ್ತು ಅವರ ವಕೀಲರಿಂದ ಬರುತ್ತಿರುವ ಆರೋಪಗಳಷ್ಟೆ ಎಂದು ತಳ್ಳಿಹಾಕಿತ್ತು.
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತನ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶವಪರೀಕ್ಷೆಯ ಆಧಾರದ ಮೇಲೆ ಮುಂಬೈ ಪೊಲೀಸರು ಅದನ್ನು ಆತ್ಮಹತ್ಯೆ ಎಂದು ಕರೆದಿದ್ದರು. ಆದರೆ ಸುಶಾಂತ್ ಕುಟುಂಬ ಸೇರಿದಂತೆ ಹಲವರು ಇದನ್ನು ಕೊಲೆ ಎಂದು ಕರೆದು ನ್ಯಾಯಕ್ಕಾಗಿ ಪ್ರಚಾರಾಂದೋಲನ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ವಕೀಲ ವಿಕಾಸ್ ಸಿಂಗ್ ಅವರು ಮುಂಬೈ ಪೊಲೀಸರನ್ನು ಗುರಿಯಾಗಿಸಿಕೊಂಡು, “ಇವರು ಪ್ರಮುಖ ಸಾಕ್ಷ್ಯಗಳನ್ನು ನಿರ್ಲಕ್ಷಿಸುವುದರ ಮೂಲಕ ಮೋಸ ಮಾಡಿದ್ದಾರೆ” ಎಂದು ಆರೋಪಿಸಿದ್ದರು.
ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿ ತಯಾರಿಸಿರುವ ‘ನ್ಯಾಯ್: ದಿ ಜಸ್ಟೀಸ್’ ಚಿತ್ರವೂ ನಿರ್ಮಾಣವಾಗಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡದಂತೆ ತಡೆಯಾಜ್ಞೆ ತರುವ ಪ್ರಯತ್ನವೂ ನಡೆದಿತ್ತು. ಮೊದಲೇ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ.
ಇದನ್ನೂ ಓದಿರಿ: ಬಾಗಲೂರು ಗ್ರಾಪಂ: ದಲಿತ ಅಧ್ಯಕ್ಷೆ ಕುಳಿತ ಕುರ್ಚಿ ಗೋಮೂತ್ರದಿಂದ ಶುದ್ಧೀಕರಣ: ಬಿಜೆಪಿ ದೂರು