ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಒಂದೇ ವಾರದಲ್ಲಿ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದು, ಸಕ್ರಿಯ ರಾಜಕೀಯದಿಂದ ವಿರಾಮ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಂಬಟಿ ರಾಯುಡು, ನಾನು ವೈಎಸ್ಆರ್ಸಿಪಿ ಪಕ್ಷವನ್ನು ತ್ಯಜಿಸಲು ಮತ್ತು ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದು ಎಲ್ಲರಿಗೂ ತಿಳಿಸುತ್ತಿದ್ದೇನೆ. ಮುಂದಿನ ನಡೆಯನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಅಂಬಟಿ ರಾಯುಡು ಅವರು ಡಿಸೆಂಬರ್.28ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ಉಪ ಮುಖ್ಯಮಂತ್ರಿ ಕೆ ನಾರಾಯಣ ಸ್ವಾಮಿ ಮತ್ತು ರಾಜಂಪೇಟ ಲೋಕಸಭಾ ಸದಸ್ಯ ಪಿ ಮಿಥುನ್ ರೆಡ್ಡಿ ಅವರ ಸಮ್ಮುಖದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ್ದ ಅಂಬಟಿ ರಾಯುಡು, ಶಿಕ್ಷಣ ಕ್ಷೇತ್ರದಲ್ಲಿ ಸಿಎಂ ಜಗನ್ ತಂದ ಬದಲಾವಣೆ ಮತ್ತು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ಬಡ ಮಕ್ಕಳನ್ನು ಬೆಳೆಸುತ್ತಿರುವುದರಿಂದ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಂದ ಪ್ರಭಾವಿತರಾಗಿ ವೈಎಸ್ಆರ್ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದ್ದರು.
ಈ ಹಿಂದಿನಿಂದಲೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಜೊತೆ ಆತ್ಮೀಯತೆ ಹೊಂದಿದ್ದ ಅಂಬಟಿ ರಾಯುಡು ನಿರೀಕ್ಷೆಯಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮುಂಬರುವ ಆಂಧ್ರ ಪ್ರದೇಶ ಚುನಾವಣೆಯಲ್ಲಿ ವಿಧಾನಸಭಾ ಅಥವಾ ಲೋಕಸಭಾ ಅಭ್ಯರ್ಥಿಯಾಗಿ ರಾಯುಡು ಚುನಾವಣಾ ಕಣಕ್ಕೆ ಇಳಿಯವು ಸಾಧ್ಯತೆ ಇತ್ತು ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿದೆ.
ಅಂಬಟಿ ರಾಯುಡು ಅವರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಲ್ಲಿ ಹಲವು ರಾಜ್ಯಗಳನ್ನು ಪ್ರತಿನಿಧಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ರಾಯುಡು ಅವರು 2023ರಲ್ಲಿ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು. ಆ ಬಳಿಕ ಮಾಜಿ ಕ್ರಿಕೆಟಿಗರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸೇವೆಯಲ್ಲಿ ತೊಡಗಿದ್ದರು. 37 ವರ್ಷದ ಅಂಬಾಟಿ ರಾಯುಡು ಅವರು ರಾಜಕಾರಣ ಸೇರುವುದಾಗಿ ಕಳೆದ ಜೂನ್ ತಿಂಗಳಲ್ಲಿ ಘೋಷಣೆ ಮಾಡಿದ್ದರು.
This is to inform everyone that I have decided to quit the YSRCP Party and stay out of politics for a little while. Further action will be conveyed in due course of time.
Thank You.
— ATR (@RayuduAmbati) January 6, 2024
ಇದನ್ನು ಓದಿ: ಹಲಾಲ್ ಉತ್ಪನ್ನಗಳ ನಿಷೇಧ: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟ್ ನೊಟೀಸ್