Homeಮುಖಪುಟಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತ ಯುವಕರ ಮೇಲಿನ ಯುಎಪಿಎ ಆರೋಪ ಕೈಬಿಡಿ: PUCL

ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತ ಯುವಕರ ಮೇಲಿನ ಯುಎಪಿಎ ಆರೋಪ ಕೈಬಿಡಿ: PUCL

- Advertisement -
- Advertisement -

ಸಂಸತ್ತಿನ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಾಲ್ವರು ಆರೋಪಿಗಳ ಮೇಲೆ ಯುಎಪಿಎ ಕಾನೂನಿನಡಿ ಪ್ರಕರಣ ದಾಖಲಿಸಿರುವುದನ್ನು ಪಿಯುಸಿಎಲ್‌( PEOPLE’S UNION FOR CIVIL LIBERTIES) ಖಂಡಿಸಿದ್ದು, ಯುಎಪಿಎ ಪ್ರಕರಣವನ್ನು ಕೈಬಿಡುವಂತೆ ಆಗ್ರಹಿಸಿದೆ.

ಈ ಕುರಿತು ಪಿಯುಸಿಎಲ್‌ ಅಧ್ಯಕ್ಷರಾದ ಕವಿತಾ ಶ್ರೀವತ್ಸವ್‌ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಿ,ಸುರೇಶ್‌ ಅವರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಸಂಸತ್ತಿನಲ್ಲಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಡಬ್ಬಗಳಿಂದ ಹಳದಿ ಬಣ್ಣದ ಗ್ಯಾಸ್ ಸ್ಪ್ರೇ ಮಾಡಿ  ಇಂಕ್ವಿಲಾಬ್ ಜಿಂದಾಬಾದ್ ಮತ್ತು ಭಗತ್ ಸಿಗ್ ಅಮರ್‌ ರಹೇ ಎಂದು ಘೋಷಣೆಗಳನ್ನು ಕೂಗಿದ್ದಕ್ಕಾಗಿ ಲಕ್ನೋದ ಸಾಗರ್ ಶರ್ಮಾ(26) ಮತ್ತು ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರ ಮನೋರಂಜನ್ ಡಿ(35) ಮತ್ತು ಸದನದ ಹೊರಗೆ ಗ್ಯಾಸ್ ಸ್ಪೇ ಮಾಡಿ ಸರ್ವಾಧಿಕಾರ, ನಿರುದ್ಯೋಗ, ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಹಾಗೂ ಜೈ ಭೀಮ್‌ ಘೋಷಣೆಗಳನ್ನು ಕೂಗಿದ ಅಮೋಲ್ ಶಿಂಧೆ (25) ಮತ್ತು ನೀಲಮ್ ದೇವಿ (42) ಮತ್ತು ವಿರುದ್ಧದ ಯುಎಪಿಎ ಪ್ರಕರಣವನ್ನು ಕೈಬಿಡಬೇಕು ಎಂದು ಪಿಯುಸಿಎಲ್‌ ಆಗ್ರಹಿಸಿದೆ.

ವಿಶಾಲ್‌ ಶರ್ಮಾ, ಲಲಿತ್‌ ಝಾ ಸೇರಿ ಬಂಧಿತ 6 ಮಂದಿ ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಜೊತೆ ಸಂಬಂಧ ಹೊಂದಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಮತ್ತು ಶಿವರಾಮ ರಾಜಗುರು ಅವರ ಮೇಲಿನ ಅಭಿಮಾನ ಹೊಂದಿದ್ದರು ಎಂದು ಹೇಳಿದ್ದಾರೆ. ಎಲ್ಲಾ 6 ಆರೋಪಿಗಳ ವಿರುದ್ಧ ಸೆಕ್ಷನ್ 120B , 452 , 153 , 186, 353ರಡಿ ಪ್ರಕರಣ  ದಾಖಲಿಸಲಾಗಿದೆ. ಇದಲ್ಲದೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯ ಸೆಕ್ಷನ್ 16 ಮತ್ತು 18ರಡಿಯಲ್ಲಿ ಭಯೋತ್ಪಾದಕ ಕೃತ್ಯದ ಆರೋಪವನ್ನು ಹೊರಿಸಲಾಗಿದೆ. ಇದು ಸರಿಯಲ್ಲ ಎಂದು ಪಿಯುಸಿಎಲ್‌ ಹೇಳಿದೆ.

ಕಳೆದ 9 ವರ್ಷಗಳಿಂದ ನಿರುದ್ಯೋಗದ ಸಮಸ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರುವುದು ವಾಸ್ತವವಾಗಿ 6 ಯುವಕರ ಕೃತ್ಯಕ್ಕೆ ಪ್ರಚೋದನೆಯಂತೆ ಕಂಡು ಬರುತ್ತಿದೆ. 2023ರಲ್ಲಿ ನಿರುದ್ಯೋಗ ದರವು 7.6% ಆಗಿದೆ. ಇದು ಸಾಂಕ್ರಾಮಿಕದ ಪೂರ್ವ ದರಗಳಿಗಿಂತ ಹೆಚ್ಚಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದರಿಂದ ಭಗತ್ ಸಿಂಗ್ ಅವರಂತೆಯೇ ಅವರು ಕಿವುಡರನ್ನು ಕೇಳುವಂತೆ ಮಾಡಲು ಮತ್ತು ಅಜಾಗರೂಕರಿಗೆ ಎಚ್ಚರಿಕೆಯನ್ನು ನೀಡಲು ಪ್ರಯತ್ನಿಸಿದರು ಎಂದು ಪಿಯುಸಿಎಲ್‌ ಹೇಳಿದೆ.

ಬಂಧಿತ ಯುವಕರ ವಿರುದ್ಧ ಯುಎಪಿಎಯಂತಹ ಕಠೋರ ಕಾನೂನನ್ನು ಬಳಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಲ್ಲದೇ ಮತ್ತೇನೂ ಅಲ್ಲ. ಯುಎಪಿಎ ಸೆಕ್ಷನ್ 15ರ ಅಡಿಯಲ್ಲಿ ಒಂದು ಕೃತ್ಯವನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಬೇಕಾದರೆ ಭಾರತದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುವ ಭಯೋತ್ಪದಾಕ ಕೃತ್ಯವಾಗಿರಬೇಕು. ಬಾಂಬ್‌ಗಳು ಅಥವಾ ಇತರ ಸ್ಫೋಟಕ ವಸ್ತುಗಳ ಬಳಕೆ ಮತ್ತು ಸಾವು, ನೋವುಗಳು ಸಂಭವಿಸರಬೇಕು. ಅಂತಹ ಸಂದರ್ಭಗಳಲ್ಲಿ ಮಾತ್ರ ಕಠೋರ ಕಾನೂನನ್ನು ಬಳಸಬೇಕು ಎಂದಿದೆ ಎಂದು ಪಿಯುಸಿಎಲ್‌ ಹೇಳಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಪಿಯುಸಿಎಲ್‌ ಕರ್ನಾಟಕ ರಾಜ್ಯಾಧ್ಯಕ್ಷರಾದ ಅರವಿಂದ್‌ ನಾರಾಯಣ್, ಯುವಕರ ಮೇಲೆ ಯುಎಪಿಎ ಕೇಸ್ ಹಾಕಲಾಗಿದೆ. ಯುಎಪಿಎ ನಿಯಮಾವಳಿಗಳನ್ನು ಓದಬೇಕು. ಉದ್ದೇಶ ಪೂರ್ವಕವಾಗಿ ಹಾನಿ ಮಾಡಿದರೆ ಮಾತ್ರ ಈ ಪ್ರಕರಣ ದಾಖಲಿಸಬೇಕು ಎಂದಿದೆ. ಇಲ್ಲಿ ಉದ್ದೇಶಪೂರ್ವಕ ಕೃತ್ಯವೆಂದು ಕಂಡು ಬಂದಿಲ್ಲ. ನಿರುದ್ಯೋಗ, ಸರ್ವಾಧಿಕಾರ, ಮಣಿಪುರ ವಿಚಾರದಲ್ಲಿ ಎಚ್ಚರಿಕೆ ನೀಡಲು ಈ ಕೃತ್ಯ ಮಾಡಿದ್ದಾರೆ. ಇನ್ನು ಕ್ರಿಯೆಯನ್ನು ನೋಡಿದಾಗ ಬಾಂಬ್‌ ಸ್ಪೋಟದಂತಹ ಕೃತ್ಯ ನಡೆದಿಲ್ಲ. ಖಾಲಿ ಹೊಗೆ ಮಾತ್ರ ಸ್ಪ್ರೇ ಮಾಡಿದ್ದಾರೆ. ಇದನ್ನು ನೋಡಿದಾಗ ಯುಎಪಿಎ ದಾಖಲಿಸಿರುವುದು ಕಾನೂನಿನ ದುರುಪಯೋಗ ಎಂದು ಹೇಳಿದ್ದಾರೆ.

ನಿರುದ್ಯೋಗ ಯುವಜನರಲ್ಲಿ ದೊಡ್ಡ ಸಮಸ್ಯೆಯಾಗಿದೆ. ಈ ಅಭಿಪ್ರಾಯವನ್ನು ಯುಎಪಿಎ ಬಳಸಿ ತಡೆಯಲು ಸಾಧ್ಯವಿಲ್ಲ. ಭಗತ್‌ ಸಿಂಗ್ ಅವರ ಮಾತನ್ನು ನಾವು ನೆನಪಿಸಬಹುದು. ಅವರು ಯುಎಪಿಎ ಕಾಯ್ದೆಯಂತಿದ್ದ ಪಬ್ಲಿಕ್‌ ಸೇಪ್ಟಿ ಮೂಲಕ ಸಮಸ್ಯೆಯ ಬಗ್ಗೆ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಯುಎಪಿಎ ದುರ್ಬಳಕೆ ಇದೊಂದೇ ಘಟನೆಯಲ್ಲ. ಇಂಡಿಯಾ- ಆಸ್ಟ್ರೇಲಿಯಾ ಫೈನಲ್‌ ಪಂದ್ಯದ ವೇಳೆ ಯುಎಪಿಎ ಕೇಸ್ ದಾಖಲಿಸಿದ್ದಾರೆ. ಭಾರತದ ಸೋಲನ್ನು ಸಂಭ್ರಮಿಸಿದರು ಎಂದು ವಿದ್ಯಾರ್ಥಿಗಳ ಮೇಲೆ ಈ ಕೇಸ್ ದಾಖಲು ಮಾಡಿದ್ದಾರೆ. ಇದು ಎಷ್ಟು ಸಮಂಜಸ? ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುಎಪಿಎ ಕೇಸ್ ದಾಖಲು ಮಾಡಲಾಗುತ್ತಿದೆ. ಸರಕಾರ ಯುಎಪಿಎಯನ್ನು ಅಸ್ತ್ರವಾಗಿ ಬಳಸುತ್ತಿದೆ. ಆದ್ದರಿಂದ ಯುಎಪಿಎ ರದ್ದು ಮಾಡಬೇಕು. ಇಂತಹ ಕೇಸ್ ಎಲ್ಲರ ಮೇಲೂ ಫೈಲ್‌ ಮಾಡಬಾರದು. ಸಂಸತ್ತಿನ ಭದ್ರತಲೋಪದ ಪ್ರಕರಣದಲ್ಲಿನ ಆರೋಪಿಗಳ ಮೇಲಿನ ಯುಎಪಿಎ ಪ್ರಕರಣವನ್ನು ಕೈಬಿಡಬೇಕು ಮತ್ತು ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಸಂಸತ್ತಿನ ಭದ್ರತಾ ಲೋಪ: ಅವಲೋಕನ ಮಾಡಬೇಕಾದ ಅಂಶಗಳಿವು..

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...