ಸೆಪ್ಟೆಂಬರ್ 18 ರ ಶನಿವಾರದಂದು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಬುಧವಾರ ಸಂಜೆ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಅಮರಿಂದರ್ ಸಿಂಗ್ ಅವರು ಬಿಜೆಪಿಯ ಅಮಿತ್ ಶಾ ಅವರ ನಿವಾಸದಲ್ಲಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಅವರು ಪಂಜಾಬ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಕೆಲವು ದಿನಗಳ ನಂತರ ಅವರು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ಊಹಾಪೋಹಗಳು ಎದ್ದಿದ್ದವು. ಆದರೆ, ಅವರು ಬಿಜೆಪಿಗೆ ಸೇರುತ್ತಿರುವ ಬಗ್ಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರು.
ಆದರೆ ಅಮರಿಂದರ್ ಸಿಂಗ್ ಅವರ ತಂಡವು ಇದನ್ನು “ಸೌಜನ್ಯದ ಭೇಟಿ” ಎಂದು ಕರೆದಿದ್ದು, ಅವರ ಮುಂದಿನ ನಡೆಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಯಾವುದೆ ಉತ್ತರವನ್ನು ನೀಡಿಲ್ಲ.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ನವಜೋತ್ ಸಿಧು ರಾಜೀನಾಮೆ
“ಅವರು ವೈಯಕ್ತಿಕ ಭೇಟಿಯಲ್ಲಿದ್ದಾರೆ, ಈ ಸಮಯದಲ್ಲಿ ಅವರು ಕೆಲವು ಸ್ನೇಹಿತರನ್ನು ಭೇಟಿಯಾಗುತ್ತಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ಪಂಜಾಬ್ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡುತ್ತಿದ್ದಾರೆ… ಅನಗತ್ಯ ಊಹಾಪೋಹಗಳ ಅಗತ್ಯವಿಲ್ಲ” ಎಂದು ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್ ನಿನ್ನೆ ಹೇಳಿದ್ದರು.
ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಂದು, ಬೇರೆ ಪಕ್ಷಗಳಿಗೆ ಸೇರುವ ಬಗ್ಗೆಗಿನ ಆಯ್ಕೆಯನ್ನು ಕಾಯ್ದಿರಿಸುವುದಾಗಿ ಅಮರಿಂದರ್ ಹೇಳಿದ್ದರು.
ಪಂಜಾಬ್ನ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ನಲ್ಲಿ ಈ ತಿಂಗಳ ಆರಂಭದಿಂದ ಆಂತರಿಕ ಸಂಘರ್ಷ ಅತಿರೇಕ್ಕೆ ತಲುಪಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ನವಜೋತ್ ಸಿಂಗ್ ಸಿಧು ಅವರನ್ನು ರಾಜ್ಯದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಇದರ ನಂತರ ಅಮರಿಂದರ್ ಅವರ ರಾಜೀನಾಮೆಯನ್ನು ಕೇಳಲಾಗಿತ್ತು. ಜೊತೆಗೆ ರಾಜ್ಯಕ್ಕೆ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿತ್ತು.
ಇಷ್ಟೆಲ್ಲಾ ಬೆಳವಣಿಗೆ ನಡೆದ ನಂತರವು ಪಕ್ಷದೊಳಗಿನ ಆಂತರಿಕ ಸಂಘರ್ಷ ಕಡಿಮೆಯಾಗಿಲ್ಲ. ಅಚ್ಚರಿಯೆಂಬಂತೆ, ನಿನ್ನೆಯಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಧು ಅವರು ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ!