ಮಧ್ಯಪ್ರದೇಶದ ಮಾಜಿ ಕಂದಾಯ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಸಜ್ಜನ್ ಸಿಂಗ್ ವರ್ಮಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಆಕ್ರೋಶ ಭುಗಿಲೆದ್ದಿದೆ. “ಹೆಣ್ಣುಮಕ್ಕಳು 15 ವರ್ಷದಲ್ಲಿ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಹೊಂದಿರುವಾಗ, ಅವರ ಮದುವೆಯ ವಯಸ್ಸನ್ನು 18-21 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಯಾಕೆ ಯೋಚಿಸಬೇಕು” ಎಂದು ಶಾಸಕ ಹೇಳಿದ್ದಾರೆ.
ಹೆಣ್ಣುಮಕ್ಕಳ ಕನಿಷ್ಠ ಮದುವೆಯ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸಬೇಕೆಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚಿಗೆ ಕರೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಿಷ್ಠಾವಂತ ಬೆಂಬಲಿಗರಲ್ಲಿ ಒಬ್ಬರಾದ ಸಜ್ಜನ್ ಸಿಂಗ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಯಾವುದೇ ಹೆಣ್ಣು 15 ನೇ ವಯಸ್ಸಿನಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿರುತ್ತಾಳೆ. ಇದು ನನ್ನ ಶೋಧನೆಯಲ್ಲ, ವೈದ್ಯರ ವರದಿಯ ಪ್ರಕಾರ 15 ವರ್ಷ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಸಂತಾನೋತ್ಪತ್ತಿ/ಮಕ್ಕಳನ್ನು ಹೊಂದುವುದು ಸೂಕ್ತವಾಗಿದೆ. ಆದರೂ ಹೆಣ್ಣುಮಕ್ಕಳಿಗೆ ಕನಿಷ್ಠ 18 ವರ್ಷ ವಯಸ್ಸಾದಾಗ ಮಾತ್ರ ಮದುವೆಯಾಗುವಷ್ಟು ಪ್ರಬುದ್ಧರೆಂದು ಪರಿಗಣಿಸಲಾಗುತ್ತದೆ” ಎಂದು ಸಜ್ಜನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರೈತರಿಗೆ ಮಣಿಯುತ್ತಿರುವ ಕೇಂದ್ರ: ಕೃಷಿ ಕಾಯ್ದೆಗಳ ಪರ ಕಾರ್ಯಕ್ರಮ ಮಾಡದಂತೆ ಆದೇಶ ಹೊರಡಿಸಿದ ಅಮಿತ್…
ಶಿವರಾಜ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾ, “ಹೆಣ್ಣುಮಕ್ಕಳ ಮದುವೆಯ ಕನಿಷ್ಟ ವಯಸ್ಸನ್ನು ಹೆಚ್ಚಿಸಲು ಅವರು ವಿಜ್ಞಾನಿಯೋ ಅಥವಾ ಶ್ರೇಷ್ಟ ವೈದ್ಯರೋ?” ಎಂದು ಪ್ರಶ್ನಿಸಿದ್ದಾರೆ.
ಸಜ್ಜನ್ ಸಿಂಗ್ ಅವರ ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ರಾಜ್ಯ ಬಿಜೆಪಿ ವಕ್ತಾರರಾದ ನೇಹಾ ಬಗ್ಗಾ ಪ್ರತಿಕ್ರಿಯಿಸಿ, “ಹೆಣ್ಣುಮಕ್ಕಳ ಮಗ್ಗೆ ಇಂತಹ ಭಾಷೆಯನ್ನು ಬಳಸುವುದರ ಮೂಲಕ ಸಜ್ಜನ್ ಸಿಂಗ್ ವರ್ಮಾ, ಸಜ್ಜನ್ ಎಂಬ ತಮ್ಮ ಹೆಸರಿಗೆ ವಿರುದ್ಧವಾಗಿದ್ದಾರೆ. ಈ ಹೇಳಿಕೆಯಿಂದ ಮಧ್ಯಪ್ರದೇಶದ ಹೆಣ್ಣುಮಕ್ಕಳನ್ನು ಮಾತ್ರವಲ್ಲದೇ, ಇಡೀ ದೇಶದ ಹೆಣ್ಣುಮಕ್ಕಳನ್ನು ಅವಮಾನಿಸಿದ್ದಾರೆ. ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪಕ್ಷದ ಯುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರೂ ಮಹಿಳೆಯರು ಎಂಬುದನ್ನು ವರ್ಮಾ ಮರೆತಿದ್ದಾರೆ. ಎಲ್ಲಾ ಹೆಣ್ಣುಮಕ್ಕಳ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಮಾಡಿ, ವರ್ಮಾ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಸೋನಿಯಾ ಗಾಂಧಿಯವರಲ್ಲಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸಂಸದನನ್ನು ಟ್ರೋಲ್ ಮಾಡಿದ ಹನುಮ ವಿಹಾರಿ ಮತ್ತು ಅಶ್ವಿನ್!
ಇತ್ತೀಚೆಗೆ ಶಿವರಾಜ್ ಸಿಂಗ್ ಚೌಹಾಣ್, ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ 15 ದಿನಗಳ ‘ಸಮ್ಮಾನ್’ ಕಾರ್ಯಕ್ರಮವನ್ನು ಉದ್ಘಾಟಿಸುವ ಸಂದರ್ಭದಲ್ಲಿ, ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚಿಸುವ ಕುರಿತು ಪ್ರಸ್ತಾಪಿಸಿದ್ದರು.
ಸಜ್ಜನ್ ಸಿಂಗ್ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ದೂರ ಉಳಿದಿದ್ದು, “ವೈಯಕ್ತಿಕ ಅಭಿಪ್ರಾಯಗಳು ಪಕ್ಷದ ಅಧಿಕೃತ ನಿಲುವಲ್ಲ” ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಹೇಳಿದ್ದಾರೆ.
ಇದನ್ನೂ ಓದಿ: ರೈತರಿಗೆ ತಮಗೇನು ಬೇಕೆಂದು ಗೊತ್ತಿಲ್ಲ; ಅವರನ್ನು ಯಾರೋ ಪ್ರಚೋದಿಸುತ್ತಿದ್ದಾರೆ: ಹೇಮಾ ಮಾಲಿನಿ