ಬಾಬ್ರಿ ಮಸೀದಿ ಧ್ವಂಸದ ನಂತರ ಬಹುನೀರಿಕ್ಷಿತ ತೀರ್ಪು ಸುಪ್ರೀಂ ಕೋರ್ಟ್ನಿಂದ ಹೊರಬಿದ್ದಿದೆ. ಅಲ್ಲಿ ರಾಮಮಂದಿರ ನಿರ್ಮಿಸಬೇಕೆಂದು, ಮುಸ್ಲಿಂಮರಿಗೆ ಮಸೀದಿ ಕಟ್ಟಲು ಬೇರೆಡೆ 5 ಎಕರೆ ಜಾಗ ನಿಡಬೇಕೆಂದು ತೀರ್ಪಿತ್ತಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ತನ್ನ ಸುಮಧುರ ಕಂಠದಿಂದ ರಾತ್ರೋರಾತ್ರಿ ಸ್ಟಾರ್ ಆದ ರಾನು ಮೊಂಡಲ್ ಅಯೋಧ್ಯೆಯ ವಿವಾದಿತ ಜಾಗದಲ್ಲಿ ಚರ್ಚ್ ನಿರ್ಮಿಸಲು ಜಾಗ ಕೊಡಬೇಕು ಎಂದು ಹೇಳಿದ್ದಾರೆ ಎಂಬ ಪೋಸ್ಟ್ಗಳು ಎಲ್ಲೆಡೆ ಹರಿದಾಡುತ್ತಿವೆ.
ಟ್ವಿಟ್ಟರ್ನಲ್ಲಿ 20 ಲಕ್ಷ ಅನುಯಾಯಿಗಳನ್ನು ಹೊಂದಿರುವ ಲೇಖಕಿ ಮಧು ಪೂರ್ಣಿಮ ಕಿಶ್ವರ್ ಎಂಬುವವರು ಪ್ರಶಾಂತ್ ಆರ್ಎಸ್ಎಸ್ ಎಂಬುವವರ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದಾರೆ. ಅದರಲ್ಲಿ “ಅಯೋಧ್ಯೆಯ ವಿವಾದಿತ ಜಾಗದಲ್ಲಿ ಚರ್ಚ್ ನಿರ್ಮಿಸಲು ಜಾಗ ಕೊಡಬೇಕು ಎಂದು ರಾನು ಮೊಂಡಲ್ ಹೇಳಿದ್ದಾರೆ. ಅವಳು ರೈಲು ನಿಲ್ದಾಣದಲ್ಲಿ ಕುಳಿತಿದ್ದರೆ ಚೆನ್ನಾಗಿರುತ್ತಿತ್ತು ಬದಲಿಗೆ ಈಗ ನಮ್ಮ ತಲೆಯ ಮೇಲೆ ಕುಳಿತಿದ್ದಾಳೆ” ಎಂದು ಬರೆದಿದೆ.
ಇದಕ್ಕೆ ಮಧು ಪೂರ್ಣಿಮ ಕಿಶ್ವರ್ ’ನಿಜವಾಗಿಯೂ ನಿರಾಶಾದಾಯಕ. ಈಕೆ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ವಾಸಿಸುತ್ತಿದ್ದಾಗ ಮಿಷನರಿಗಳು ಅವಳನ್ನು ಏಕೆ ಕಂಡುಹಿಡಿಯಲಿಲ್ಲ? ಎಂದು ಸೇರಿಸಿ ಟ್ವೀಟ್ ಮಾಡಿದ್ದಾರೆ. ಇದನ್ನು ಸುಮಾರು ಎರಡೂವರೆ ಸಾವಿರ ಜನರು ಇಷ್ಟಪಟ್ಟಿದ್ದಾರೆ. ಅಲ್ಲದೇ ನೂರಾರು ಜಾಲತಾಣಿಗರು ಇದೇ ವಿಷಯವನ್ನು ಷೇರ್ ಮಾಡಿದ್ದಾರೆ.
Really disappointing. How come missionaries did not discover her while ahe was living on railway platform? https://t.co/YhsfBs1xsE
— MadhuPurnima Kishwar (@madhukishwar) November 12, 2019
ಸತ್ಯ ಏನು?
ಆದರೆ ಇದರ ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಈ ಕುರಿತು ಮೊದಲ ಸುಳ್ಳು ಲೇಖನ ’Fauxy’ ಎಂಬ ವೆಬ್ ಸೈಟ್ನಲ್ಲಿ ಪ್ರಕಟಗೊಂಡಿದೆ. ನಂತರ ಅಲ್ಲಿಂದ ಉಳಿದವರು ತೆಗೆದಕೊಂಡು ಷೇರ್ ಮಾಡಿ ಸುಳ್ಳು ಹರಿಡಿದ್ದಾರೆ. ಈ ವೆಬ್ ಸೈಟ್ನ ಕೊನೆಯಲ್ಲಿ “ದಿ ಫಾಕ್ಸಿ ಒಂದು ವಿಡಂಬನಾತ್ಮಕ ವೆಬ್ ಪೋರ್ಟಲ್. ಈ ವೆಬ್ಸೈಟ್ನ ವಿಷಯವು ಕಾಲ್ಪನಿಕ ಕೃತಿಯಾಗಿದೆ. ದಿ ಫಾಕ್ಸಿಯ ಲೇಖನಗಳನ್ನು ನಿಜವಾದ ಮತ್ತು ನಿಜವೆಂದು ಗೊಂದಲಗೊಳಿಸದಂತೆ ಓದುಗರಿಗೆ ಸೂಚಿಸಲಾಗಿದೆ. ” ಎಂದು ಬರೆದುಕೊಂಡಿದ್ದಾರೆ. ಅಂದರೆ ಸುಳ್ಳು ಸುದ್ದಿ ಹರಡಲೆಂದೇ ಇರುವ ವೆಬ್ ಇದಾಗಿದೆ.
ಅಂದರೆ ರಾನು ಮೊಂಡಲ್ ಚರ್ಚ್ಗೆ ಜಾಗಬೇಕೆಂದು ಎಲ್ಲಿಯೂ ಹೇಳಿಲ್ಲ. ಆಕೆ ಕ್ರಿಶ್ಚಿಯನ್ ಆದ ಕಾರಣಕ್ಕಾಗಿ ಆಕೆಯ ವಿರುದ್ಧ ಅಪಪ್ರಚಾರ ಮಾಡಲು ಕೆಲವರು ಹೀಗೆ ಸುಳ್ಳು ಹಬ್ಬಿಸಿದ್ದಾರೆ.