ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಇನ್ನೆರಡು ದಿನಗಳು ಬಾಕಿ ಇದೆ. ಇದೇ ವೇಳೆ ಹೆಚ್ಚಿನ ಎಕ್ಸಿಟ್ ಪೂಲ್ಗಳು ಗೋವಾದಲ್ಲಿ ಅತಂತ್ರ ಸ್ಥಿತಿ ಉಂಟಾಗಲಿದೆ ಎಂದು ಭವಿಷ್ಯ ನುಡಿದಿದೆ. ಈ ಹಿನ್ನಲೆಯಲ್ಲಿ ಅಧಿಕಾರ ಹಿಡಿಯುವ ಸಂಖ್ಯೆಯ ಬೆಂಬಲಕ್ಕಾಗಿ ಬಿಜೆಪಿ ಕಾರ್ಯಪ್ರವೃತ್ತವಾಗಿದೆ.
ಒಂದು ವೇಳೆ ಅಧಿಕಾರಕ್ಕೆ ಬರಲು ಸಂಖ್ಯಾಬಲ ಕಡಿಮೆಯಾದರೆ ಸರ್ಕಾರ ರಚಿಸುವ ಸಂಖ್ಯೆಯ ಬೆಂಬಲ ಪಡೆಯಲು ಕೇಂದ್ರದ ನಾಯಕತ್ವವು ಈಗಾಗಲೇ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಸಾವಂತ್, “ಬಿಜೆಪಿಯು 22 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಆಶಾವಾದದಲ್ಲಿದೆ (ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ). ಆದರೆ ಒಂದು ವೇಳೆ ಸಂಖ್ಯಾಬಲದ ಕೊರತೆಯಾದರೆ, ಪಕ್ಷೇತರರು ಮತ್ತು ಎಂಜಿಪಿಯೊಂದಿಗೆ ಪಕ್ಷವು ಬೆಂಬಲವನ್ನು ಪಡೆಯುವ ಆಯ್ಕೆಯನ್ನು ಸಹ ಮುಂದಿಟ್ಟಿದೆ” ಎಂದು ಹೇಳಿದ್ದಾರೆ.
ಚುನಾವಣೋತ್ತರ ಮೈತ್ರಿಗಾಗಿ ಕೇಂದ್ರ ಬಿಜೆಪಿ ನಾಯಕತ್ವವು ಎಂಜಿಪಿ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸಿಎಂ ಹೇಳಿದ್ದಾರೆ.
2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, 13 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, ದೀಪಕ್ ಧವಲಿಕರ್ ನೇತೃತ್ವದ ಎಂಜಿಪಿ (ಗೋವಾದ ಅತ್ಯಂತ ಹಳೆಯ ಪ್ರಾದೇಶಿಕ ಸಂಘಟನೆ), ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಸ್ವತಂತ್ರ ಪಕ್ಷಗಳೊಂದಿಗೆ ತ್ವರಿತವಾಗಿ ಮೈತ್ರಿ ಮಾಡಿಕೊಂಡು ಮನೋಹರ್ ಪರಿಕ್ಕರ್ ನೇತೃತ್ವದ ಸರ್ಕಾರವನ್ನು ರಚಿಸಿತ್ತು.
2019 ರಲ್ಲಿ, ಪರಿಕ್ಕರ್ ಅವರ ನಿಧನದ ನಂತರ ಸಾವಂತ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದ್ದರು. ಈ ವೇಳೆ ಇಬ್ಬರು ಎಂಜಿಪಿ ಮಂತ್ರಿಗಳನ್ನು ರಾಜ್ಯ ಸಂಪುಟದಿಂದ ಕೈಬಿಡಲಾಗಿತ್ತು.
ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಮೈತ್ರಿ ಮಾಡಿಕೊಂಡು ಎಂಜಿಪಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದೆ.
ಗೋವಾ ಚುನಾವಣಾ ಫಲಿತಾಂಶದ ನಂತರ ಟಿಎಂಸಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಮ್ಮ ಪಕ್ಷವು ತನ್ನ ನಿಲುವನ್ನು ನಿರ್ಧರಿಸುತ್ತದೆ ಆದರೆ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಎಂಜಿಪಿ ಶಾಸಕ ಸುದಿನ್ ಧವಲಿಕರ್ ಶನಿವಾರ ಹೇಳಿದ್ದಾರೆ.
ಸಾವಂತ್ ತಮ್ಮ ಸಂಪುಟದಿಂದ ಎಂಜಿಪಿ ಸಚಿವರನ್ನು ವಜಾಗೊಳಿಸಿದ್ದರು ಎಂದು ಹೇಳಿರುವ ಸುದಿನ್ ಅವರು ಹೇಳಿದ್ದಾರೆ. ಆದರೆ ಮತ್ತೆ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿಲ್ಲ.
ಸುದಿನ್ ಧವಲಿಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾವಂತ್, “ಯಾವುದೇ ಪಕ್ಷ ನಮಗೆ ಬೆಂಬಲ ನೀಡಿದರೂ ನಮ್ಮ ನಾಯಕತ್ವದ ಬಗ್ಗೆ ಅವರು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. 2017 ರ ಗೋವಾ ಚುನಾವಣೆಯಲ್ಲಿ ಮತ್ತು ಈ ವರ್ಷದ ಚುನಾವಣೆಗಳಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು ಎಂಜಿಪಿಯಾಗಿದೆ” ಎಂದು ಹೇಳಿದ್ದಾರೆ.
2019ರಲ್ಲಿ ನಡೆದ ಉಪಚುನಾವಣೆಯಲ್ಲಿ ನಮ್ಮ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದರಿಂದ ಎಂಜಿಪಿಯನ್ನು ಸರ್ಕಾರದಿಂದ ಕೈಬಿಡಲಾಗಿದೆ ಎಂದು ಸಿಎಂ ಹೇಳಿದ್ದಾರೆ. “ಧವಲಿಕರ್ ಸಹೋದರರೊಂದಿಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳು ಮಾತ್ರ ಇದೆ” ಎಂದು ಅವರು ಹೇಳಿದ್ದಾರೆ.
ಈ ನಡುವೆ, ಪಕ್ಷಾಂತರದ ಬಗ್ಗೆ ಎನ್ಡಿಟಿವಿ ಜೊತೆಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು, ಈ ಬಾರಿ ಕಾಂಗ್ರೆಸ್ ಮನೆಗೆ ಕನ್ನ ಹಾಕಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಚುನಾವಣೆ ನಡೆದಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಗ ಬಿಜೆಪಿಗೆ ರಾಜೀನಾಮೆ