ಕಳೆದ ವಾರ ಈಶಾನ್ಯ ದೆಹಲಿ ಹೊತ್ತಿ ಉರಿಯಿತು. 46ಜನ ಪ್ರಾಣ ಕಳೆದುಕೊಂಡರು. 500ಕ್ಕೂ ಹೆಚ್ಚು ಜನ ಗಾಯಗೊಂಡರು. ಪ್ರಕರಣ ದೆಹಲಿ ಹೈಕೋರ್ಟ್ ಮುಂದೆ ಬಂತು. ನ್ಯಾಯಮೂರ್ತಿ ಎಸ್.ಮುರಳೀಧರ್ ಬಿಜೆಪಿ ಮುಖಂಡರ ಕೋಮು ಪ್ರಚೋದಿತ ಹೇಳಿಕೆಗಳೇ ಗಲಭೆಗೆ ಕಾರಣ ಎಂದು ಹೇಳಿ ನಾಲ್ವರು ಬಿಜೆಪಿ ಮುಖಂಡರ ಮೇಲೆ ಎಫ್ಐಆರ್ ದಾಖಲಿಸಲು ಆದೇಶಿಸಿತು.
ಅದರಲ್ಲಿ ಒಬ್ಬಾತ ಬಿಜೆಪಿ ಸಂಸದ ಅನುರಾಗ್ ಠಾಕೂರ್. ಈಗ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ರ್ಯಾಲಿಯೊಂದರಲ್ಲಿ ದೇಶ್ ಕೆ ಗದ್ದಾರೋಂಕೋ, ಗೋಲಿಮಾರೋ ಸಾಲೋಂಕೆ (ದೇಶದೊಳಗಿರುವ ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂದು ನಾಲ್ಕೈದು ಬಾರಿ ಘೋಷಣೆ ಕೂಗಿದ್ದ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಯುವಜನರು ಆ ಘೋಷಣೆಗೆ ಕೋರಸ್ ಕೊಟ್ಟಿದ್ದರು.
ಈತನ ಜೊತೆಗೆ ದೆಹಲಿ ವಿಧಾನಸಭಾ ಚುನಾವಣೆಯನ್ನು ಭಾರತ ಪಾಕಿಸ್ತಾನ ಯುದ್ಧಕ್ಕೆ ಹೋಲಿಸಿದ್ದ ಇನ್ನೊಬ್ಬ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ. ಆತನ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಮುನ್ನಾ ದಿನ ಪೊಲೀಸರೆದುರೆ “ಇನ್ನೆರೆಡು ದಿನದಲ್ಲಿ ಜಾಫ್ರಾಬಾದ್ ಮೆಟ್ರೋ ಬಳಿ ಪ್ರತಿಭಟನೆ ಮಾಡುತ್ತಿರುವ ಸಿಎಎ ವಿರೋಧಿ ಹೋರಾಟಗಾರರನ್ನು ಎತ್ತಂಗಡಿ ಮಾಡದಿದ್ದರೆ ನಾವು ಬೀದಿಗಿಳಿಯಬೇಕಾಗುತ್ತದೆ” ಎಂದು ಬೆದರಿಕೆಯ ಭಾಷಣ ಮಾಡಿದ್ದ.
ಆ ಎರಡು ದಿನದಲ್ಲಿ ಆತ ಹೇಳಿದಂತೆಯೇ ಆಯಿತು. ಗಲಭೆಗಳು ಭುಗಿಲೆದ್ದವು. ಜನರ ಆಸ್ತಿಪಾಸ್ತಿ, ಪ್ರಾಣ ಹಾನಿಯಾಯಿತು. ಪೊಲೀಸರು ಪ್ರಕರಣ ದಾಖಲಿಸದಿದ್ದಾಗ ಹೈಕೋರ್ಟ್ ನ್ಯಾಯಾಧೀಶರು ಈ ದ್ವೇಷ ಭಾಷಣವನ್ನು ಕೋರ್ಟ್ ಹಾಲಿನಲ್ಲಿ ಪ್ರಸಾರ ಮಾಡಿ ಎಫ್ಐಆರ್ ಮಾಡುವಂತೆ ಆದೇಶಿಸಿದ್ದರು.
ಸಂಸದ ಅನುರಾಗ್ ಠಾಕೂರ್ 2020 ರ ಮಾರ್ಚ್ 1 ರಂದು ಆದಾಯ ತೆರಿಗೆ ಇಲಾಖೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತದ್ದರು. ಆಗ ಪತ್ರಕರ್ತರು ನೀವು ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಘೋಷಣೆ ಕೂಗಿದ್ದರ ಬಗ್ಗೆ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು. ಆಗ ಠಾಕೂರ್ “ನೀವು ಸುಳ್ಳು ಹೇಳುತ್ತಿದ್ದೀರಿ. ನಾನೆಂದೂ ಆ ಘೋಷಣೆಯನ್ನು ಕೂಗಿಲ್ಲ. ಮಾಧ್ಯಮಗಳು ಅರ್ಧ ಸತ್ಯ ಮತ್ತು ಅಪಪ್ರಚಾರವನ್ನು ಮಾಡಬಾಡರು. ಅದಕ್ಕಾಗಿ ಅವು ತನ್ನ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಸಿಟ್ಟಿನಿಂದ ಉತ್ತರಿಸಿದ್ದರು. ಆ ವಿಡಿಯೋ ನೋಡಿ
ಆದರೆ ನಿಜವೇನೆಂದರೆ ಜನವರಿ 27 ರಂದು ಅನುರಾಗ್ ಠಾಕೂರ್ ಪ್ರಚೋದನಾಕಾರಿ ಭಾಷಣ ಮಾಡಿ, ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂಬ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಚುನಾವಣಾ ಆಯೋಗವು ಅವರಿಗೆ ನೋಟಿಸ್ ನೀಡಿತ್ತು.
“ಕೋಮು ಸೌಹಾರ್ದತೆಗೆ ಭಂಗ ತರುವ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಗಲಭೆ ಉಂಟುಮಾಡುವ ಹೇಳಿಕೆಗಳನ್ನು ನೀಡುವ ಮೂಲಕ, ನೀವು ಮಾದರಿ ನೀತಿ ಸಂಹಿತೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ, 1951 ರ ಮೇಲಿನ ನಿಬಂಧನೆಗಳನ್ನು ಉಲ್ಲಂಘಿಸಿದ್ದೀರಿ ಎಂದು ಆಯೋಗ ನೋಟಿಸ್ನಲ್ಲಿ ತಿಳಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಠಾಕೂರ್ ಅವರು “ನಾನು ಗೋಲಿ ಮಾರೊ ಸಾಲೋ ಕೋ (ಗುಂಡಿಕ್ಕಿ)” ಎಂದು ಘೋಷಣೆ ಕೂಗಿಲ್ಲ. “ದೇಶ್ ಕೆ ಗದ್ದಾರಾಂಕೋ (ದೇಶದ ದೇಶದ್ರೋಹಿಗಳಿಗೆ)” ಎಂಬ ಘೋಷಣೆಯ ಮೊದಲಾರ್ಧವನ್ನು ಮಾತ್ರ ಕೂಗಿದ್ದೆ. ಜನರು ಕೂಗಿದ ಘೋಷಣೆಗೆ ನಾನು ಹೊಣೆಗಾರನಲ್ಲ ಎಂದಿದ್ದರು.
ಆದರೆ ಯಾರೋ ಆಗಲಿ ಜನವರಿ 27ರ ಆ ಕಾರ್ಯಕ್ರಮದ ಇಂಡಿಯನ್ ಎಕ್ಸ್ಪ್ರೆಸ್ ಆನ್ಲೈನ್ ಪ್ರಕಟಿಸಿದ ವೀಡಿಯೊವನ್ನು ನೋಡಿದರೆ ಆ ಘೋಷಣೆ ಅವರೇ ಸ್ವತಃ ಕೂಗಿದ್ದು, ಜನರೂ ಸಹ ಕೋರಸ್ ಕೊಡಲು ಪ್ರೇರಿಪಿಸಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಬಹುತೇಕ ಘೋಷಣೆಗಳು ಹೀಗೆಯೇ ಇದ್ದು ನಾಯಕ ಅಥವಾ ಮುನ್ನಡೆಸುವವರು ಅರ್ಧ ಘೋಷಣೆ ಕೂಗಿದ್ದರೆ ಇನ್ನರ್ಧವನ್ನು ಉಳಿದ ಜನರು ಕೂಗುವುದು ಸಾಮಾನ್ಯ. ಆದ್ದರಿಂದ ಆ ಘೋಷಣೆಗೆ ತಾನು ಹೊಣೆಗಾರನಲ್ಲ ಎನ್ನುವುದು ಹೇಡಿತನವಷ್ಟೆ..
ಘೋಷಣೆ ಕೂಗಿದ ವಿಡಿಯೋ ನೋಡಿ
ಅಂತೂ ಸ್ಪಷ್ಟವಾಗಿ ತಾನು ಘೋಷಣೆ ಕೂಗಿದ್ದರೂ ಸಹ ಕೇಸಿಗೆ ಹೆದರಿಕೊಂಡು ತಾನು ಕೂಗೇ ಇಲ್ಲ, ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಎಂದು ತಪ್ಪಿಸಿಕೊಳ್ಳಲು ಅನುರಾಗ್ ಠಾಕೂರ್ ಪ್ರಯತ್ನಿಸುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಸಂಸದನ ಸ್ಥಾನದಲ್ಲಿದ್ದುಕೊಂಡು ಹಿಂಸೆಗೆ ಪ್ರಚೋದನೆ ನೀಡುವ ಘೋಷಣೆ ಕೂಗಿದ್ದು ಅಲ್ಲದೇ ಮತ್ತೆ ಜಾರಿಕೊಳ್ಳಲು ಯತ್ನಿಸಿರುವುದು ಉತ್ತಮ ನಡವಳಿಕೆ ಅಲ್ಲ.