ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ `ನಾಥೂರಾಮ್ ಗೂಡ್ಸೆ ನಿಜವಾದ ದೇಶಭಕ್ತ’ ಎಂದು ಹೇಳುವ ಮೂಲಕ ಬಿಜೆಪಿಯ ಭೂಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೆ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಸನ್ ಅವರು ಹೇಳಿದ್ದ “ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಹಿಂದೂ ಆಗಿದ್ದ, ಆತ ಗೋಡ್ಸೆ” ಹೇಳಿಕೆಗೆ ಪ್ರತಿಯಾಗಿ `ಸಾಧ್ವಿ’ ಇಂಥಾ ಯಡವಟ್ಟು ಹೇಳಿಕೆ ನೀಡಿದ್ದಾರೆ.
2008ರ ಮಲೆಗಾಂವ್ ಬಾಂಬ್ ಸ್ಫೋಟದ ಪ್ರಧಾನ ಆರೋಪಿಯಾಗಿರುವ ಪ್ರಗ್ಯಾಸಿಂಗ್ ಹಿಂದೂ ಭಯೋತ್ಪಾದಕಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರು. ಆ ಸ್ಪೋಟದಿಂದ ಆರು ಜನ ಪ್ರಾಣ ಕಳೆದುಕೊಂಡಿದ್ದರೆ, ನೂರಕ್ಕು ಹೆಚ್ಚು ಜನ ಗಾಯಗೊಂಡಿದ್ದರು. ಸದ್ಯ ನ್ಯಾಯಾಲಯದಡಿ ವಿಚಾರಣೆ ನಡೆಯುತ್ತಿರುವ ಆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದು ಮಧ್ಯಪ್ರದೇಶದ ಭೂಪಾಲ್ ಕ್ಷೇತ್ರದಲ್ಲಿ ಕಾಂಗ್ರೆಸಿನ ದಿಗ್ವಿಜಯ್ ಸಿಂಗ್ ಎದುರು ಸ್ಪರ್ಧಿಸಿದ್ದಾರೆ.
ಕಮಲ್ ಹಸನ್ ಹೇಳಿಕೆಯನ್ನು ಉಲ್ಲೇಖಿಸಿ, ಸ್ವತಃ ತಾವೇ ಹಿಂದೂ ಭಯೋತ್ಪಾದನೆಯ ಆರೋಪಕ್ಕೆ ತುತ್ತಾಗಿರುವುದನ್ನು ಲಿಂಕ್ ಮಾಡಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ “ನಾಥೂರಾಂ ಗೂಡ್ಸೆ ದೇಶಭಕ್ತರಾಗಿದ್ದರು, ದೇಶಭಕ್ತರಾಗಿದ್ದಾರೆ ಮತ್ತು ದೇಶಭಕ್ತರಾಗಿಯೇ ಇರುತ್ತಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುವವರು ಮೊದಲು ತಮ್ಮನ್ನು ತಾವು ನೋಡಿಕೊಳ್ಳಲಿ. ಇಂಥಾ ಜನರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು” ಎಂದು ಉತ್ತರ ನೀಡಿದ್ದಾರೆ. 1948ರಲ್ಲಿ ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆ ಹಿಂದೂ ಮಹಾಸಭಾದ ಸದಸ್ಯರಾಗಿದ್ದರು.
49 ವಯೋಮಾನದ ಪ್ರಗ್ಯಾಸಿಂಗ್ ಚುನಾವಣೆಗೆ ಇಳಿಯುವ ನಿರ್ಧಾರ ಪ್ರಕಟಿಸಿದಾಗಿನಿಂದ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ವಿವಾದಕ್ಕೆ ಈಡಾಗುತ್ತಿದ್ದಾರೆ. 26/11 ಮುಂಬೈ ಉಗ್ರರ ದಾಳಿಯ ಸಂದರ್ಭದಲ್ಲಿ ಕಾದಾಡುತ್ತಾ ಉಗ್ರರ ಗುಂಡೇಟಿಗೆ ಬಲಿಯಾದ ನಿಷ್ಠಾವಂತ ಅಧಿಕಾರಿ ‘ಹೇಮಂತ್ ಕರ್ಕರೆಯವರಿಗೆ ನಾನು ಶಾಪ ಕೊಟ್ಟಿದ್ದರಿಂದಲೇ ಆ ಗತಿ ಉಂಟಾಯ್ತು’ (ಮಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಪ್ರಗ್ಯಾಸಿಂಗ್, ಕರ್ನಲ್ ಪುರೋಹಿತ್ ಮೊದಲಾದ ಆರೋಪಿಗಳ ಕೈವಾಡವನ್ನು ಪತ್ತೆ ಹಚ್ಚಿ ಬಂಧಿಸಿದ್ದ ತಂಡದಲ್ಲಿ ಈ ಅಧಿಕಾರಿ ಪ್ರಮುಖರಾಗಿದ್ದರು) ಎಂದಿದ್ದ ಪ್ರಗ್ಯಾ ಠಾಕೂರ್ ಆನಂತರ ಬಾಬ್ರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂಬ ಹೇಳಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಈಗಾಗಲೇ ಇಂಥಾ ಹಲವು ವಿವಾದಗಳಿಂದ ಹೈರಾಣಾಗಿರುವ ಬಿಜೆಪಿ ಪ್ರಗ್ಯಾರ ಈ ಹೊಸ ಹೇಳಿಕೆಯಿಂದ ಮತ್ತಷ್ಟು ಮುಜುಗರಕ್ಕೆ ತುತ್ತಾಗಿದ್ದು, ಪಕ್ಷದ ವಕ್ತಾರ ಜಿವಿಎಲ್ ನರಸಿಂಹರಾವ್, “ನಾಥೂರಾಂ ಗೋಡ್ಸೆ ಕುರಿತು ಪ್ರಗ್ಯಾ ಸಿಂಗರ ಹೇಳಿಕೆಯನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ. ಅದಕ್ಕಾಗಿ ಪಕ್ಷ ಅವರಿಂದ ಸ್ಪಷ್ಟೀಕರಣವನ್ನೂ ಕೇಳಲಿದೆ. ಅವರು ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು” ಎಂದು ಹೇಳಿದ್ದಾರೆ.