ಬಸವರಾಜ ಬೊಮ್ಮಯಿ ನೇತೃತ್ವದ ಕಳೆದ ಅವಧಿಯ ಬಿಜೆಪಿ ಸರಕಾರ ಪ್ರಧಾನಿ ನರೇಂದ್ರ ಮೋದಿಯ ಕರ್ನಾಟಕ ಪ್ರವಾಸಕ್ಕೆ ಸಾರ್ವಜನಿಕ ತೆರಿಗೆ ವೆಚ್ಚದ ಬರೊಬ್ಬರಿ 18,248 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂಬಂತಹ ಶಾಕಿಂಗ್ ಅಂಕಿ-ಅಂಶಗಳನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲಾತಾಣ ಖಾತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ ವರ್ಷ ಬಿಜೆಪಿ ಕರ್ನಾಟಕದ ಆಳ್ವಿಕೆಯಲ್ಲಿ ಪ್ರಧಾನಿ ಮೋದಿಯವರ ಕರ್ನಾಟಕ ಪ್ರವಾಸಕ್ಕೆ ಸರ್ಕಾರ 18,248 ಲಕ್ಷಗಳನ್ನು ಖರ್ಚು ಮಾಡಿದೆ. ಕರ್ನಾಟಕದಲ್ಲಿ ವಿಶ್ವಗುರುವಿನ ಇಮೇಜ್ನ್ನು ವೈಭವೀಕರಿಸಲು ಸುಮಾರು 182 ಕೋಟಿ ಖರ್ಚು ಮಾಡಿದ್ದು, ಯಾವುದೇ ಲಾಭಾಂಶವನ್ನು ನೀಡಲಿಲ್ಲ, ಇದು ಕೇವಲ ಸರಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವಾಗಿದೆ ಎಂದು ಹೇಳಿದ್ದಾರೆ. ಈ ಖರ್ಚಿನ ವೆಚ್ಚದಲ್ಲಿ ಜಾಹೀರಾತಿನ ವೆಚ್ಚವನ್ನು ಒಳಗೊಂಡಿಲ್ಲ ಎಂದು ಕೂಡ ಟ್ವೀಟ್ನಲ್ಲಿ ಅವರು ಉಲ್ಲೇಖಿಸಿದ್ದಾರೆ.
Last year the @BJP4Karnataka Government spent a whopping 18,248 lakhs on PM Modi’s visit to Karnataka.
Spending close to 182 cr to glorify Vishwaguru’s image in Karnataka did not pay dividends, only losses to the exchequer.
These do not include advertisements. pic.twitter.com/xFOjHUPBHL
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 20, 2024
2023ರ ಜನವರಿ 19 ರಂದು, ಉತ್ತರ ಕರ್ನಾಟಕದ ಐದು ಜಿಲ್ಲೆಗಳಾದ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ವಿಜಯಪುರದಲ್ಲಿ ಅಲೆಮಾರಿ ಲಂಬಾಣಿ (ಬಂಜಾರ) ಬುಡಕಟ್ಟು ಜನಾಂಗದ 52,000 ಕ್ಕೂ ಹೆಚ್ಚು ಸದಸ್ಯರಿಗೆ ಭೂಮಿ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಕರ್ನಾಟಕದ ಕಲಬುರ್ಗಿಗೆ ಪ್ರಧಾನಿ ಮೋದಿಯ ಕೆಲವೇ ಗಂಟೆಗಳ ಭೇಟಿಗೆ 11.18 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಪ್ರೋಬ್.ಇನ್ ವರದಿ ಮಾಡಿತ್ತು.
2023ರ ಏಪ್ರೀಲ್ನಲ್ಲಿ ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬಗ್ಗೆ ಪ್ರಸ್ತಾಪಿಸಿದ್ದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಮೋದಿ ಕಾರ್ಯಕ್ರಮಕ್ಕೆ ಒಟ್ಟಾರೆಯಾಗಿ 30 ಕೋಟಿ ರೂಪಾಯಿ ಸಾರ್ವಜನಿಕ ತೆರಿಗೆ ಹಣವನ್ನು ಖರ್ಚು ಮಾಡಲಾಗಿದೆ ಎಂದು ಆರೋಪಿಸಿದ್ದರು. ಕೆಂಪೇಗೌಡರ ಪ್ರತಿಮೆಗೆ 58 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಮೋದಿಯ ಉದ್ಘಾಟನಾ ಕಾರ್ಯಕ್ರಮಕ್ಕೆ 30 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದ್ದರು. 2022ರ ಜೂನ್ನಲ್ಲಿ ಪ್ರಧಾನಿ ಮೋದಿಯವರ ಕೆಲವೇ ಗಂಟೆಗಳ ಬೆಂಗಳೂರು ಭೇಟಿ ಹಿನ್ನೆಲೆ ರಸ್ತೆಗಳಿಗೆ 23 ಕೋಟಿ ರೂ.ವೆಚ್ಚವನ್ನು ಮಾಡಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು.
ಇದನ್ನು ಓದಿ: 5 ವರ್ಷದ ಎಂಎಸ್ಪಿ ಗುತ್ತಿಗೆ; ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ರೈತ ಮುಖಂಡರು: ನಾಳೆಯಿಂದ ದೆಹಲಿ ಚಲೋ ಆರಂಭ