ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡುವ ಸಂಬಂಧ ಕೇಂದ್ರ ಸರ್ಕಾರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ. ಈ ಹಿನ್ನೆಲೆ, ಮುಂದಿನ ಎರಡು ದಿನಗಳಲ್ಲಿ ಪ್ರಸ್ತಾವನೆಯನ್ನು ಅಧ್ಯಯನ ಮಾಡುವುದಾಗಿ ರೈತ ಮುಖಂಡರು ಘೋಷಿಸಿದ್ದು, ಅಲ್ಲಿಯವರೆಗೆ ‘ದೆಹಲಿ ಚಲೋ’ ಮೆರವಣಿಗೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಚಂಡೀಗಢದಲ್ಲಿ ರೈತ ಮುಖಂಡರೊಂದಿಗೆ ಭಾನುವಾರ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದ್ದಾರೆ. ಆ ಬಳಿಕ ರೈತ ಮುಖಂಡರು ದೆಹಲಿ ಚಲೋ ತಾತ್ಕಾಲಿಕ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಿಯೂಷ್ ಗೋಯಲ್, “ರೈತರೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಐದು ವರ್ಷಗಳವರೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಖರೀದಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ” ಎಂದಿದ್ದಾರೆ.
“ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ (ಎನ್ಸಿಸಿಎಫ್), ನ್ಯಾಷನಲ್ ಅಗ್ರೀಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (ಎನ್ಎಎಫ್ಇಡಿ) ನಂತಹ ಸಹಕಾರ ಸಂಘಗಳು ತೊಗರಿ ಬೇಳೆ, ಉದ್ದಿನ ಬೇಳೆ, ಮೆಕ್ಕೆಜೋಳವನ್ನು ಬೆಳೆಯುವ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಿವೆ. ಮುಂದಿನ ಐದು ವರ್ಷಗಳವರೆಗೆ ಈ ಸಂಸ್ಥೆಗಳು ರೈತರ ಉತ್ಪನ್ನಗಳನ್ನು ಎಂಎಸ್ಪಿ ದರದಲ್ಲಿ ಖರೀದಿಸಲಿದೆ. ರೈತರ ಉತ್ಪನ್ನಗಳನ್ನು ಖರೀದಿಸುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಅದಕ್ಕಾಗಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುವುದು” ಎಂದು ಸಭೆಯ ನಂತರ ಗೋಯಲ್ ತಿಳಿಸಿದ್ದಾರೆ.
“ಫೆ.19 ಮತ್ತು 20ರಂದು ನಮ್ಮ ವೇದಿಕೆಗಳಲ್ಲಿ ಸರ್ಕಾರದ ಪ್ರಸ್ತಾವನೆಯ ಕುರಿತು ಚರ್ಚಿಸಿ, ಈ ಬಗ್ಗೆ ತಜ್ಞರ ಅಭಿಪ್ರಾಯನ್ನೂ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
“ಸಾಲ ಮನ್ನಾ ಮತ್ತು ಇತರ ನಮ್ಮ ಬೇಡಿಕೆಗಳ ಕುರಿತು ಚರ್ಚೆ ಬಾಕಿ ಉಳಿದಿದ್ದು, ಇನ್ನೆರಡು ದಿನಗಳಲ್ಲಿ ಇವುಗಳು ಬಗೆಹರಿಯಲಿವೆ ಎಂದು ನಾವು ಭಾವಿಸುತ್ತೇವೆ. ಪ್ರಸ್ತುತ ‘ದೆಹಲಿ ಚಲೋ’ ಮೆರವಣಿಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಫೆಬ್ರವರಿ 21 ರಂದು ಬೆಳಿಗ್ಗೆ 11 ಗಂಟೆಗೆ ಪುನರಾರಂಭಿಸುತ್ತವೆ. ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹಾರವಾಗಿಲ್ಲ” ಎಂದು ಪಂಧೇರ್ ತಿಳಿಸಿದ್ದಾರೆ.
ನಾವು ಸರ್ಕಾರದೊಂದಿಗೆ ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಕಾರಣಾಂತರಗಳಿಂದ ಅದು ಆಗುತ್ತಿಲ್ಲ. ಶಾಂತಿಯುತವಾಗಿ ದೆಹಲಿಗೆ ಹೋಗಲು ಅವಕಾಶ ನೀಡುವಂತೆ ನಾವು ಸರ್ಕಾರವನ್ನು ಕೋರುತ್ತೇವೆ” ಎಂದಿದ್ದಾರೆ.
ಕೇಂದ್ರ ಸಚಿವರು ಮತ್ತು ರೈತ ಮುಖಂಡರು ಈ ಹಿಂದೆ ಫೆಬ್ರವರಿ 8, 12 ಮತ್ತು 15 ರಂದು ಸಭೆ ನಡೆಸಿದ್ದಾರೆ. ಇದುವರೆಗೆ ಒಟ್ಟು ನಾಲ್ಕು ಬಾರಿ ಪರಸ್ಪರ ಚರ್ಚೆ ನಡೆದಿದೆ. ಮೂರು ಸಭೆಗಳಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ನಾಲ್ಕನೇ ಸಭೆಯಲ್ಲಿ ಸರ್ಕಾರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ. ಇದಕ್ಕೆ ಒಪ್ಪಿ ರೈತರು ದೆಹಲಿ ಚಲೋ ಕೈ ಬಿಡುತ್ತಾರಾ? ಇಲ್ಲ , ಪ್ರತಿಭಟನೆ ಮುಂದುವರೆಸುತ್ತಾರಾ? ಕಾದು ನೋಡಬೇಕಿದೆ.
ಇದನ್ನೂ ಓದಿ: ಮಣಿಪುರ: ಸರಕಾರಿ ಕಚೇರಿಗಳನ್ನು ಬಲವಂತದಿಂದ ಬಂದ್ ಮಾಡಿಸುತ್ತಿರುವ ಕುಕಿ ಗುಂಪು