ಭಾರತೀಯ ಕುಸ್ತಿ ಫೇಡೆರೇಶನ್ (ಡಬ್ಲ್ಯುಎಫ್ಐ)ಯ ನೂತನ ಆಡಳಿತ ಮಂಡಳಿಯನ್ನು ಕೇಂದ್ರ ಸರ್ಕಾರ ಅಮಾನತು ಮಾಡಿಲ್ಲ, ಬದಲಿಗೆ ಗೊಂದಲ ಸೃಷ್ಟಿಸುವ ಸಲುವಾಗಿ ಅದರ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಆಕ್ರೋಶಗೊಂಡ ಮಹಿಳಾ ಕುಸ್ತಿಪಟುಗಳ ಧ್ವನಿ ಅಡಗಿಸುವ ಸಲುವಾಗಿ ಡಬ್ಲ್ಯುಎಫ್ಐನ ನೂತನ ಆಡಳಿತ ಮಂಡಳಿಯನ್ನು ಅಮಾನತು ಮಾಡಿರುವುದಾಗಿ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಎಕ್ಸ್ನಲ್ಲಿ ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿದ್ದಾರೆ.
ಲೈಂಗಿಕ ಕಿರುಕುಳದ ಆರೋಪಿ, ಡಬ್ಲ್ಯುಎಫ್ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಸುಳ್ಳು ಹೇಳ್ತಿದೆ. ಬ್ರಿಜ್ ಭೂಷಣ್ ವಿರುದ್ದ ಆರೋಪ ಕೇಳಿ ಬಂದಾಗಿನಿಂದ ಅವರನ್ನು ಸರ್ಕಾರ ಅವರ ಪರ ನಿಂತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ದೇಶದ ಖ್ಯಾತ ಮಹಿಳಾ ಕುಸ್ತಿಪಟುಗಳು ಕಿರುಕುಳದ ಆರೋಪ ಮಾಡಿದಾಗ ಕೇಂದ್ರ ಸರ್ಕಾರ ಅವರ ಪರ ನಿಲ್ಲಬೇಕಿತ್ತು. ಆದರೆ, ಸರ್ಕಾರ ಆರೋಪ ಮಾಡಿದವರಿಗೆ ಕಿರುಕುಳ ಕೊಟ್ಟು ಆರೋಪಿತನಿಗೆ ಉನ್ನತ ಸ್ಥಾನ ನೀಡ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದ ಬಗ್ಗೆ ತಲೇನೆ ಕೆಡಿಸಿಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.
ಆರೋಪಿ ಬಿಜೆಪಿ ಬ್ರಿಜ್ ಭೂಷಣ್ ಸಿಂಗ್ ಅವರು, ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಅವರ ಸ್ವಂತ ಜಿಲ್ಲೆಯಲ್ಲಿ, ಅವರ ಸ್ವಂತ ಕಾಲೇಜು ಮೈದಾನದಲ್ಲಿ ನಡೆಸಲು ಮುಂದಾಗಿರುವುದು ‘ಅಹಂಕಾರದ ಪರಮಾವಧಿ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಅನ್ಯಾಯ ಸಹಿಸಲಾಗದೆ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕುಸ್ತಿಯನ್ನೇ ತೊರೆದಿದ್ದಾರೆ. ಇತರ ಕ್ರೀಡಾಪಟುಗಳು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಲು ಪ್ರಾರಂಭಿಸಿದ್ದಾರೆ. ಹಾಗಾಗಿ ಸರ್ಕಾರ ವದಂತಿಗಳನ್ನು ಹರಡುತ್ತಿದೆ. ಮಹಿಳೆಯರ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ, ಸರ್ಕಾರ ತನ್ನ ಶಕ್ತಿಯಿಂದ ಆರೋಪಿಗಳನ್ನು ರಕ್ಷಿಸುತ್ತಿದೆ, ಸಂತ್ರಸ್ತರನ್ನು ಹಿಂಸಿಸುತ್ತಿದೆ. ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ನಾಯಕತ್ವದ ಬಗ್ಗೆ ಮಾತನಾಡುತ್ತೇವೆ. ಆದರೆ, ಅಧಿಕಾರದಲ್ಲಿರುವವರು ಮಹಿಳೆಯರಿಗೆ ಕಿರುಕುಳ ಕೊಟ್ಟು ಅವರನ್ನು ದಮನ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕುಸ್ತಿ ಫೇಡೆರೇಶನ್(ಡಬ್ಲ್ಯುಎಫ್ಐ)ಗೆ ಡಿಸೆಂಬರ್ 21ರಂದು ಚುನಾವಣೆ ನಡೆದಿದ್ದು, ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್ಐ ಆಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ, ನೂತನ ಸಮಿತಿಯನ್ನು ಕೇಂದ್ರ ಕ್ರೀಡಾ ಇಲಾಖೆ ಅಮಾನತು ಮಾಡಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ : ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ 3 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ