ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕೊಂತಯ್ಯನಹುಂಡಿ ಗ್ರಾಮದಲ್ಲಿ ಜಮೀನು ವಿವಾದದ ಕುರಿತು ಊರಿನ ಮುಖಂಡರ ವಿರುದ್ಧ ದೂರು ನೀಡಿದ ಮೂರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಜರುಗಿದೆ.
ಗ್ರಾಮದ ಗುರುಮಲ್ಲಪ್ಪ, ಪರಶಿವಪ್ಪ ಮತ್ತು ಮಹದೇವಪ್ಪ ಎಂಬ ಲಿಂಗಾಯತ ಸಮುದಾಯದ ಸಹೋದರರು ತಮ್ಮ ಜಮೀನನ್ನು ಗ್ರಾಮದ ಮುಖಂಡರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅದೇ ಲಿಂಗಾಯಿತ ಸಮುದಾಯದ ಗ್ರಾಮದ ಮುಖಂಡರು ದೂರು ವಾಪಸ್ ಪಡೆಯುವಂತೆ ತಾಕೀತು ಮಾಡಿದ್ದರು. ಆದರೆ ದೂರು ಹಿಂಪಡೆಯದ ಆ ಮೂವರ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗಿದೆ.
ಊರಿನಲ್ಲಿ ನಮಗೆ ಕುಡಿಯುವ ನೀರು, ಹಾಲು ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸುತ್ತಿಲ್ಲ. ನಮ್ಮನ್ನು ಯಾರಾದರೂ ಮಾತನಾಡಿಸಿದರೆ ಅವರಿಗೆ 3000 ರೂ ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ. ಇದರಿಂದ ನಾವು ಮಾನಸಿಕವಾಗಿ ನೊಂದುಹೋಗಿದ್ದೇವೆ. ಕುಟುಂಬದ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಗುರುಮಲ್ಲಪ್ಪ ಅಳಲು ತೋಡಿಕೊಂಡಿದ್ದಾರೆ.
ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದಷ್ಟು ಭಾಗಕ್ಕೆ ಗ್ರಾಮದ ಮುಖಂಡರು ಅಕ್ರಮ ಪ್ರವೇಶ ಮಾಡಿದ್ದರು. ಅದನ್ನು ವಿರೋಧಿಸಿ ಮೂರು ವರ್ಷದ ಹಿಂದೆಯೇ ದೊಡ್ಡಕವಲಂದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆ ಸೇಡು ಈಗ ತಾರಕಕ್ಕೆ ತಲುಪಿದ್ದು ನಮ್ಮ ಮೇಲೆ ಅನ್ಯಾಯ ಮಾಡಲಾಗುತ್ತಿದೆ. ನಮ್ಮ ಮಕ್ಕಳು ಶಾಲೆಗೆ ಹೋದರೆ ಯಾರೂ ಮಾತನಾಡಿಸುತ್ತಿಲ್ಲ. ನಮ್ಮ ಕುಟುಂಬ ಸದಸ್ಯರು ಭಯದಲ್ಲಿ ದಿನದೂಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಮಗಾಗುತ್ತಿರುವ ಅನ್ಯಾಯವನ್ನು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಲವರ ಗಮನಕ್ಕೆ ತಂದಿದ್ದೇವೆ. ಆದರೂ ಯಾರೂ ನೆರವಿಗೆ ಬರುತ್ತಿಲ್ಲ. ನಾವು ಗ್ರಾಮದ ಒಳಗೆ ಹೋಗಲು ಹೆದರುತ್ತಿದ್ದೇವೆ. ಹೀಗೆ ಆದರೆ ಊರು ಬಿಡುವ ಯೋಚನೆಯಾಗುತ್ತಿದೆ ಎಂದು ಗುರುಮಲ್ಲಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಾತೀಯತೆಯಂತೆ ಊಳಿಗಮಾನ್ಯ ದಬ್ಬಾಳಿಕೆಯು ಭಾರತದ ಸಾಮಾಜಿಕ ಪಿಡುಗಾಗಿದೆ. ಹಾಗಾಗಿ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠ ಪದ್ದತಿಗಳು ದೇಶದಲ್ಲಿ ಇನ್ನೂ ಜಾರಿಯಲ್ಲಿರುವುದು ದುರಂತ.
ಇದನ್ನೂ ಓದಿ: ಮೂಲ ಭಗವದ್ಗೀತೆ ಕುರಿತು ಮಾಹಿತಿಯಿಲ್ಲ ಎಂದ ಕೇಂದ್ರ ಸರ್ಕಾರ: RTI ಅರ್ಜಿಯಿಂದ ಬಹಿರಂಗ