ಶಾಲೆಗಳಲ್ಲಿ ಭಗವದ್ಗೀತೆ ಪಠ್ಯ ಬೋಧಿಸುವ ಕುರಿತು ಮತ್ತೊಮ್ಮೆ ಚರ್ಚೆ ನಡೆಯುತ್ತಿದೆ. ಈ ಕುರಿತು ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ರವರು ಈ ಕುರಿತು ಹೇಳಿಕೆ ನೀಡಿದ್ದಾರೆ. ಇನ್ನು ಕಾನೂನು ಸಚಿವರಾದ ಜೆ.ಸಿ ಮಾಧುಸ್ವಾಮಿಯವರು ಈ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ. ಈ ಸಂದರ್ಭದಲ್ಲಿ ಮೂಲ ಭಗವದ್ಗೀತೆ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಹೇಳಿರುವುದಾಗಿ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಬೆಳಗಾವಿ ಮೂಲದ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಸುರೇಂದ್ರ ಉಗಾರೆಯವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸಂಸ್ಕೃತಿ ಸಚಿವಾಲಯವು ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದು, ಇದು ತಮಗೆ ತೃಪ್ತಿದಾಯಕವಾಗಿಲ್ಲದಿದ್ದರೆ ಸಚಿವಾಲಯದ ಉಪ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಬಹುದು ಎಂದಿದೆ.
ಭಗವದ್ಗೀತೆಯ ಮೂಲ ಪ್ರತಿಯನ್ನು ಎಲ್ಲಿ ಸಂರಕ್ಷಿಸಿ ಇಡಲಾಗಿದೆ. ಅದರ ಅಧಿಕೃತ ಪುಸ್ತಕಗಳು ಯಾವುವು ಮತ್ತು ಪ್ರಕಾಶಕರ ಪಟ್ಟಿ ಮತ್ತಿತರರ ವಿವರಗಳನ್ನು ಕೋರಿ 2021ರ ಡಿಸೆಂಬರ್ನಲ್ಲಿಯೇ ಆರ್ಟಿಐ ಅರ್ಜಿ ಸಲ್ಲಿಸಲಾಗಿತ್ತು. ಸಾರ್ವಜನಿಕ ಉದ್ದೇಶಕ್ಕಾಗಿ ಈ ಮಾಹಿತಿ ಕೇಳುತ್ತಿದ್ದೇವೆ ಎಂದು ಅವರು ಮನವಿ ಮಾಡಿದ್ದರು. ಇದಕ್ಕೆ 2022ರ ಫೆಬ್ರವರಿಯಲ್ಲಿ ಉತ್ತರ ನೀಡಿರುವ ಸಚಿವಾಲಯದ ಅಧೀನ ಕಾರ್ಯದರ್ಶಿಗಳು ಇಂತಹ ಯಾವುದೇ ಮಾಹಿತಿ ನಮ್ಮಲ್ಲಿ ಇಲ್ಲ ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸುರೇಂದ್ರ ಉಗಾರೆಯವರು “ಗುಜರಾತ್ ಮತ್ತು ಕರ್ನಾಟಕ ಸರ್ಕಾರ ಮಕ್ಕಳಿಗೆ ಭಗವದ್ಗೀತೆ ಕಲಿಸುತ್ತೇವೆ ಎನ್ನುತ್ತಿವೆ. ಇದಕ್ಕೆ ನನ್ನ ತಕರಾರಿಲ್ಲ. ಆದರೆ ಮಕ್ಕಳಿಗೆ ಕಲಿಸಲು ಮುಂದಾಗಿರುವ ಭಗವದ್ಗೀತೆ ಯಾವುದು? ಸಂಸ್ಕೃತ ಭಾಷೆಯಲ್ಲಿದ್ದ ಅದನ್ನು ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಗೆ ಅನುವಾದಿಸಿದವರು ಯಾರು? ಅದನ್ನು ಪ್ರಕಸಿದವರು ಯಾರು? ಇಂತಹ ಸಂಗತಿಗಳ ಕುರಿತು ಪಾರದರ್ಶಕತೆ ಇಲ್ಲದಿದ್ದರೆ ಮಕ್ಕಳಿಗೆ ತಪ್ಪು ಸಂದೇಶ ಹೋಗಬಹುದಲ್ಲವೇ” ಎಂದಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್ | ನೆದರ್ಲ್ಯಾಂಡ್ಸ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಡ್ಡಾಯ ಎಂಬುದು ಸುಳ್ಳು ಸುದ್ದಿ