ಮೂರು ತಿಂಗಳ ಹಿಂದೆ ಗುಜರಾತ್ನ ಮೋರ್ಬಿಯಲ್ಲಿ ಸೇತುವೆ ಕುಸಿದು 135 ಜನರ ಸಾವಿಗೀಡಾಗಿದ್ದರು. ಕೊನೆಗೂ ಮೂರು ತಿಂಗಳ ನಂತರ, ಒರೆವಾ ಗ್ರೂಪ್ನ ಪ್ರವರ್ತಕ ಮತ್ತು ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಅವರನ್ನು ಚಾರ್ಜ್ಶೀಟ್ನಲ್ಲಿ ಪ್ರಮುಖ ಆರೋಪಿ ಎಂದು ಸೇರಿಸಲಾಗಿದೆ.
ಘಟನೆಯ ನಂತರ ಜಯಸುಖ್ ಪಟೇಲ್ ನಾಪತ್ತೆಯಾಗಿದ್ದು, ಕಳೆದ ವಾರ ಆತನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಬಂಧನದ ಭೀತಿಯಿಂದ ಜನವರಿ 16ರಂದು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
1,262 ಪುಟಗಳಲ್ಲಿ ಅವರನ್ನು ಪ್ರಮುಖ ಆರೋಪಿ ಎಂದು ಚಾರ್ಜ್ ಶೀಟ್ ಹೇಳಲಾಗಿದೆ.
ಇದನ್ನೂ ಓದಿ: ಸೇತುವೆ ಕುಸಿತ | ಗುಜರಾತ್ ಸರ್ಕಾರ ಇನ್ನೂ ಸಾರ್ವಜನಿಕರ ಕ್ಷಮೆ ಯಾಚಿಸಿಲ್ಲ: ಪಿ.ಚಿದಂಬರಂ
ಅಜಂತಾ ಬ್ರಾಂಡ್ ಅಡಿಯಲ್ಲಿ ಗೋಡೆ ಗಡಿಯಾರಗಳನ್ನು ತಯಾರಿಸಲು ಒರೆವಾ ಗ್ರೂಪ್ ಹೆಸರುವಾಸಿಯಾದ ಕಂಪನಿಯಾಗಿದೆ. ಈ ಕಂಪನಿಗೆ ಮಚ್ಚು ನದಿಯ 100 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆಯ ನವೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿತ್ತು. ಇದು ಗಡಿಯಾರ ತಯಾರಿಸುವ ಸಂಸ್ಥೆಯಾದ ಅಜಂತಾದ ಅಂಗ ಸಂಸ್ಥೆಯಾಗಿದೆ.
ಕಳೆದ ವರ್ಷದ ಮಾರ್ಚ್ನಲ್ಲಿ ಮೊರ್ಬಿ ನಗರ ಪಾಲಿಕೆಯೊಂದಿಗೆ 15 ವರ್ಷಗಳ ನಿರ್ವಹಣೆ ಮತ್ತು ಕಾರ್ಯಾಚರಣೆಯ ಒಪ್ಪಂದವನ್ನು ಮಾಡಿಕೊಂಡಿರುವ ಒರೆವಾ ಗ್ರೂಪ್ ಅಧ್ಯಕ್ಷ ಜಯಸುಖ್ ಪಟೇಲ್, ಅಕ್ಟೋಬರ್ 24 ರ ಗುಜರಾತಿ ಹೊಸ ವರ್ಷದಂದು ಮತ್ತೆ ಓಡಾಟಕ್ಕೆ ಸೇತುವೆ ಸಿದ್ಧವಾಗಿದೆ ಮತ್ತು ಸುರಕ್ಷಿತವಾಗಿದೆ ಎಂದು ಘೋಷಿಸಿದ್ದರು. ಅದು ಪುನಃ ತೆರೆದ ನಾಲ್ಕೇ ದಿನಗಳಲ್ಲಿ ಅಂದರೆ ಅಕ್ಟೋಬರ್ 30 ರಂದು ಸೇತುವೆ ಕುಸಿಯಿತು.
ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡವು (SIT) ಸೇತುವೆಯ ದುರಸ್ತಿ, ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಓರೆವಾ ಗ್ರೂಪ್ನ ಹಲವಾರು ಲೋಪಗಳನ್ನು ಉಲ್ಲೇಖಿಸಿದೆ. ನಿರ್ದಿಷ್ಟ ಸಮಯದಲ್ಲಿ ಸೇತುವೆಯನ್ನು ಪ್ರವೇಶಿಸಲು ವ್ಯಕ್ತಿಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ ಮತ್ತು ಯಾವುದೇ ನಿರ್ಬಂಧವಿಲ್ಲದೇ ಟಿಕೆಟ್ಗಳ ಮಾರಾಟ, ಸೇತುವೆಯ ಮೇಲೆ ಅನಿಯಂತ್ರಿತ ಚಲನೆಯಿಂದಾಗಿ ಈ ದುರಂತ ಸಂಭವಿಸಲು ಕಾರಣವಾಗಿದೆ ಎಂದು ಎಸ್ಐಟಿ ಉಲ್ಲೇಖಿಸಿದೆ.
ಈ ಪ್ರಕರಣದಲ್ಲಿ ಉಪಗುತ್ತಿಗೆದಾರರು, ಟಿಕೆಟ್ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ದಿನಗೂಲಿ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಗುಜರಾತಿನ ಮೊರ್ಬಿ ತೂಗು ಸೇತುವೆಯ “ಪೂರ್ಣ ಮತ್ತು ಅಂತಿಮ” ನವೀಕರಣಕ್ಕಾಗಿ ಮಂಜೂರುರಾಗಿದ್ದ 2 ಕೋಟಿಯಲ್ಲಿ ಒರೆವಾ ಗ್ರೂಪ್ ಕಂಪನಿಯು ಕೇವಲ 12 ಲಕ್ಷ ರೂ. ಮಾತ್ರ ಖರ್ಚು ಮಾಡಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ತೂಗು ಸೇತುವೆ ಕುಸಿದು ಅಪಾರ ಸಾವು- ನೋವುಗಳು ಸಂಭವಿಸಿದವು. ಈ ಘಟನೆಯಲ್ಲಿ ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಿದ ಮುಸ್ಲಿಂ ಈಜುಗಾರರು ಗಮನ ಸೆಳೆದಿದ್ದರು. ಸುಮಾರು 80ಕ್ಕೂ ಹೆಚ್ಚು ಜನರನ್ನು ಉಳಿಸಿದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜನರನ್ನು ಕಾಪಾಡಿದ ಹುಸೇನ್ ಮೆಹಬೂಬ್ ಪಠಾಣ್, ತೌಫೀಕ್, ಸದ್ದಾಂ ಮತ್ತು ನಯೀಮ್ ಅವರಿಗೆ ಪ್ರಶಂಸೆಗಳು ವ್ಯಕ್ತವಾಗುದ್ದವು.
ಮುರಿದುಬಿದ್ದ ಸೇತುವೆಯಲ್ಲಿ ಸಾವು ಬದುಕಿನ ಜೊತೆ ಹೋರಾಡುತ್ತಿದ್ದ ಜನರನ್ನು ರಕ್ಷಿಸಲು ಹುಸೇನ್ಗೆ ಸಂಜೆ 6 ಗಂಟೆ ಸುಮಾರಿಗೆ ಕರೆ ಬಂದಿತ್ತು. ಪರಿಣಿತ ಈಜುಗಾರನಾಗಿದ್ದ ಹುಸೇನ್ ಸ್ಥಳಕ್ಕೆ ಧಾವಿಸಿ ತನ್ನ ಸುರಕ್ಷತೆಯ ಬಗ್ಗೆ ಚಿಂತಿಸದೆ ಸುಮಾರು 50 ಜನರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಲು ಸಹಾಯ ಮಾಡಿದ್ದನು.
ಮತ್ತೋರ್ವ ಮುಸ್ಲಿಂ ಯುವಕ ಸದ್ದಾಂ, “ನನಗೆ ಈಜು ಗೊತ್ತಿಲ್ಲ, ಆದ್ದರಿಂದ ನಾನು ಯಾರನ್ನೂ ಮುಳುಗದಂತೆ ರಕ್ಷಿಸಲಿಲ್ಲ, ಆದರೆ ನಾನು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಇತರರಿಗೆ ಸಹಾಯ ಮಾಡಿದೆ” ಎಂದು ಹೇಳಿದ್ದಾರೆ.
“ನಾವು 15 ಮೀನುಗಾರರ ಪರಿಣಿತ ತಂಡವನ್ನು ಹೊಂದಿದ್ದೇವೆ. ಎಲ್ಲಾ ಉತ್ತಮ ಈಜುಗಾರರಾಗಿದ್ದಾರೆ. ಮೋರ್ಬಿಯಲ್ಲಿರುವ ಮಿಯಾನಾ ಸಮುದಾಯದವರು ನಾವು. ಅಂತಹ ಯಾವುದೇ ದುರಂತ ಸಂಭವಿಸಿದಾಗ ನಾವು ಜೀವಗಳನ್ನು ಉಳಿಸಲು ಧಾವಿಸುತ್ತೇವೆ. ಸೇತುವೆ ಕುಸಿದ ನಂತರ ನಮ್ಮ ಸಮುದಾಯವು, ಮಚ್ಚು ನದಿಯಲ್ಲಿ ಮುಳುಗುತ್ತಿದ್ದ ಸುಮಾರು 80 ಜನರನ್ನು ರಕ್ಷಿಸಿದೆ” ಎಂದು ಸಮುದಾಯದ ವಯಸ್ಸಾದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ತನ್ನ ಸ್ನೇಹಿತರ ಜೊತೆ ಸೇರಿ ಹಲವಾರು ಜೀವಗಳನ್ನು ಉಳಿಸಿದ ನಯೀಮ್ ಶೇಖ್, “ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವ ಪ್ರಯತ್ನದಲ್ಲಿ ನನ್ನ ಸ್ನೇಹಿತರೊಬ್ಬರು ಸಾವನ್ನಪ್ಪಿದ್ದಾರೆ” ಎಂದಿದ್ದಾರೆ. ನಾನು ಮತ್ತು ನನ್ನ ಸ್ನೇಹಿತರು ಸೇರಿ 50 ರಿಂದ 60 ಜನರನ್ನು ಉಳಿಸಿದ್ದೇವೆ ಎಂದು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಮುಸ್ಲಿಂ ಯುವಕರ ಸಾಹಸಗಾಥೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. “ಇದು ದ್ವೇಷದ ವ್ಯಾಪಾರಿಗಳಿಗೆ ಸೂಕ್ತವಾದ ಪ್ರತ್ಯುತ್ತರ! ಮಾನವೀಯತೆಯು ಎಲ್ಲಾ ಧರ್ಮಗಳನ್ನು ಮೀರಿದೆ” ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ.
ಧರ್ಮ-ಧರ್ಮಗಳ ನಡುವೆ ಹತ್ಯಾಕಾಂಡವೇ ನಡೆದ ರಾಜ್ಯದಲ್ಲಿ, ಈ ದುರಂತ ಸಂಭವಿಸಿದಾಗ ಯಾವ ಧರ್ಮವನ್ನು ನೋಡದೆ ಪ್ರಾಣ ರಕ್ಷಣೆಯೊಂದೆ ನಮ್ಮ ಧ್ಯೇಯ ಎಂದು ಆ ಮುಸ್ಲಿಂ ಯುವಕರು ಮುಂದಾಗಿದ್ದರು. ಹಾಗಾಗಿ ಸುಮಾರು 50ಕ್ಕೂ ಹೆಚ್ಚು ಜನರ ಜೀವ ಉಳಿಯಿತು.