ದೊರೆಸ್ವಾಮಿ ಒಬ್ಬ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಎಲ್ಲಿದ್ದಾನೆ ಆ ಮುತ್ಯಾ? ಪಾಕಿಸ್ತಾನದ ಏಜೆಂಟ್ ಎಂದು ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ. ಆ ಮೂಲಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್ ದೊರೆಸ್ವಾಮಿಯವರಿಗೆ ತೀವ್ರ ಅವಮಾನ ಮಾಡಿದ್ದಾರೆ.
ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎಂದು ಸಿದ್ದರಾಮಯ್ಯನವರು ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಭಾಗವಹಿಸಿದ್ದರೆ, ಸೋನಿಯಾ ಭಾಗವಹಿಸಿದ್ದರೇ? ಎಲ್ಲರೂ ಹೋರಾಟ ಮಾಡಿದ್ದಾರೆ ವಾಜಪೇಯಿ ಹೋರಾಟ ಮಾಡಿದ್ದಾರೆ. ಕೆಲವು ನಕಲಿ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅಲ್ಲಿ ಬೆಂಗಳೂರಿನಲ್ಲಿದ್ದಾರಲ್ಲ ದೊರೆಸ್ವಾಮಿಯೋ ಯಾರು ಅವನು? ಎಲ್ಲಿದ್ದಾನೆ ಆ ಮುತ್ಯಾ? ಪಾಕಿಸ್ತಾನದ ಏಜೆಂಟ್ರಂತೆ ಮಾತಾಡುತ್ತಾನೆ ಎಂದು ಏಕವಚನದಲ್ಲಿ ಮಾತನಾಡುವ ಮೂಲಕ ಹಿರಿಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ.
ಅದಕ್ಕೂ ಮುನ್ನ ಅವರು ಮೋದಿಯವರು ಪಾಕಿಸ್ತಾನಕ್ಕೆ ಹೋಗಿದ್ದರಲ್ಲವೇ ಎಂಬ ಪ್ರಶ್ನೆಗೆ ಅದು ನಮ್ಮ ನೆರೆಯ ದೇಶ. ಅದರೊಡನೆ ವ್ಯಾಪಾರ ವಹಿವಾಟು ಮಾಡುತ್ತೇವೆ. ಹಾಗಾಗಿ ದಿನನಿತ್ಯ ಅದರೊಡನೆ ಜಗಳ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮೋದಿಯವರು ಷರೀಪ್ರವರ ಮನೆಗೆ ಹೋಗಿಬಂದಿದ್ದರು. ಅಟಲ್ ಬಿಹಾರಿ ವಾಜಪೇಯಿ ಸಹ ಬಸ್ ಬಿಟ್ಟಿದ್ದರು. ಅದು ಒಳ್ಳೆಯದು. ನಾವು ಪಾಕಿಸ್ತಾನವನ್ನು ವೈರಿ ಎಂದು ತಿಳಿದುಕೊಂಡಿಲ್ಲ. ಅದು ನಮ್ಮನ್ನು ವೈರಿ ಎಂದು ತಿಳಿದುಕೊಂಡಿದೆ. ನಮ್ಮ ಬಚ್ಚಾ ಅದು. ನಮ್ಮಿಂದ ಹುಟ್ಟಿದ ದೇಶ ಅದು. ನಮ್ಮ ಅಕ್ರಮ ಸಂತಾನ ಅದು. ನೆಹರೂರವರನ್ನು ಪ್ರಧಾನಿ ಮಾಡಲಿಕ್ಕಾಗಿ ಅದನ್ನು ಹುಟ್ಟಿಸಿದರು ಎಂದು ಮನಬಂದಂತೆ ಮಾತಾಡಿದ್ದಾರೆ.
ಎಲ್ಲಿದ್ದಾನೆ ಅಮೀರ್ ಖಾನ್? ಅದೇನೊ ಅಸಹಿಷ್ಣುತೆ ಎಂದೆಲ್ಲಾ ಅರಚಾಡುತ್ತಿದ್ದವ ಈಗ ಎಲ್ಲಿದ್ದಾನೆ? ಎಂದ ಅವರು ದೇಶದ್ರೋಹದ ಘೋಷಣೆ ಕುರಿತು ಮಾತನಾಡಿ, ಇನ್ಮ್ಯಾಲೆ ಈ ರೀತಿ ಘೋಷಣೆ ಕೂಗಿದರೆ ಗುಂಡೇಟು ಹೊಡೆಯುತ್ತೇವೆ. ಜೈಲಿಗೆ ಕಳಿಸುವುದಿಲ್ಲ. ಡೈರೆಕ್ಟ್ ಮೇಲಕ್ಕೆ ಕಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.