ಕಳೆದೊಂದು ತಿಂಗಳಿನಿಂದ ಸದಾ ಸುದ್ದಿಯಲ್ಲಿರುವ ಜೆಡಿಎಸ್ ರಾಜ್ಯಧ್ಯಕ್ಷರಾದ ಎಚ್ ವಿಶ್ವನಾಥ್ ರವರು ಜೂನ್ 4ರ ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು ಜೆಡಿಎಸ್ ರಾಜ್ಯಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮೊದಲು ಕಾಂಗ್ರೆಸ್ ನಲ್ಲಿದ್ದಾಗ ಸಿದ್ದರಾಮಯ್ಯನವರ ಪರವಾಗಿ ನಿಂತು ಬ್ಯಾಟ್ ಬೀಸುತ್ತಾ ದೇವೇಗೌಡರಿಗೆ ಎಗ್ಗ ಮಗ್ಗ ಜಾಡಿಸುತ್ತಿದ್ದ ಎಚ್.ವಿಶ್ವನಾಥ್ ರವರನ್ನು ದೇವೇಗೌಡರು 2014ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಕೆಲಸ ಮಾಡಿದರು. ನಂತರ ಇದೇ ವಿಶ್ವನಾಥ್ ಅದೇ ಜೆಡಿಎಸ್ ಸೇರಿ ಹುಣಸೂರಿನಿಂದ ಶಾಸಕರಾಗಿದ್ದು ಆಯ್ತು.
ಜೆಡಿಎಸ್ – ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಶ್ವನಾಥ್ ರವರಿಗೆ ಕೊನೆಗೆ ಸಿಕ್ಕಿದ್ದು ಜೆಡಿಎಸ್ ರಾಜ್ಯಧ್ಯಕ್ಷ ಸ್ಥಾನ. ತನ್ನ ಪಾಲಿಗೆ ಇಂದಲ್ಲ ನಾಳೆ ಒಳ್ಳೆಯ ದಿನ ಬರುತ್ತವೆ ಎಂದು ವಿಶ್ವನಾಥ್ ಕಾದಿದ್ದೇ ಕಾದಿದ್ದು. ಆದರೆ ಅಂತಹ ಲಕ್ಷಣಗಳೇನು ಕಾಣಿಸಲಿಲ್ಲ.
ಮಂಡ್ಯ ಲೋಕಸಭೆಯ ವಿಚಾರವಾಗಿ ಸುಮಲತಾ ಅಂಬರೀಶ್ ರವರು ಪಕ್ಷೇತರರಾಗಿ ಕಣಕ್ಕಿಳಿದಾಗ ಎಚ್ ಡಿ ರೇವಣ್ಣ ನಾಲಿಗೆ ಹರಿಯಬಿಟ್ಟರು. ಗಂಡ ಸತ್ತು ತಿಂಗಳಾಗಿಲ್ಲ ಈಗಲೇ ಚುನಾವಣೆ ಬೇಕಿತ್ತಾ ಎಂದು ಹೇಳಿ ವಿವಾದ ಉಂಟು ಮಾಡಿದರು. ಎಲ್ಲಾ ಕಡೆಗಳಿಂದಲೂ ಪ್ರಬಲ ವಿರೋಧ ಬಂತು. ಆದರೆ ರೇವಣ್ಣ ತನ್ನ ಹೇಳಿಕೆ ಹಿಂದೆ ಪಡೆಯಲಿಲ್ಲ. ಕೊನೆಗೆ ಜೆಡಿಎಸ್ ರಾಜ್ಯಧ್ಯಕ್ಷರಾಗಿದ್ದ ತಪ್ಪಿಗೆ ವಿಶ್ವನಾಥ್ ರವರು ಸಾರಿ ಕೇಳಬೇಕಾಗಿಬಂತು.
ಹೀಗಿರುವಾಗಲೇ ವಿಶ್ವನಾಥರು ಸಿದ್ದರಾಮಯ್ಯನವರ ವಿರುದ್ಧ ಕತ್ತಿ ಮಸೆಯಲು ಆರಂಭಿಸಿದರು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಸಾಧಿಸಿದ್ದು ಏನು ಇಲ್ಲ ಎಂದು ಬಹಿರಂಗ ಹೇಳಿಕೆ ಕೊಟ್ಟರು. ಇದಕ್ಕೆ ಸಿದ್ದರಾಮನ್ಯನವರು ತಿರುಗೇಟು ನೀಡಿದಾಗ ಕುಲದೇವರು ಸಿದ್ದರಾಮಯ್ಯನವರಿಗೆ ಬುದ್ದಿ ಕರುಣಿಸಲಿ ಎಂದು ಕಟಕಿಯಾಡಿದರು.
ಲೋಕಸಭಾ ಎಲೆಕ್ಷನ್ ಮುಗಿಯುವವರೆಗೂ ಹೇಗೂ ಅದುಮಿಟ್ಟುಕೊಂಡಿದ್ದ ಅವರ ಅಸಮಾಧಾನ ಈಗ ಹೊರಬಂದಿದೆ. ದೇವೇಗೌಡರ ಬಗ್ಗೆ ಬಹಳ ದ್ವೇಷವಿದಿದ್ದರೂ ಅಂತಹ ಪ್ರೀತಿಯೇನು ಇರಲಿಲ್ಲ. ವಿಶ್ವನಾಥ್ ರವರು ಬರೆದ ‘ಹಳ್ಳಿ ಹಕ್ಕಿ’ ಪುಸ್ತಕದಲ್ಲಿ ದೇವೇಗೌಡರನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡಿದ್ದ ವಿಶ್ವನಾಥ್ ರವರು ನಾಳೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ನಡೆಸುತ್ತಿದ್ದಾರೆ. ಎಂತಹ ಬಾಂಬ್ ಸಿಡಿಯಲಿದೆ? ರಾಜ್ಯ ರಾಜಕಾರಣ ಯಾವ ದಿಕ್ಕು ತೆಗೆದುಕೊಳ್ಳಲಿದೆ? ಎಲ್ಲಕ್ಕೂ ಕಾದು ನೋಡಬೇಕಿದೆ.