Homeಅಂತರಾಷ್ಟ್ರೀಯಬಡವರ ಪರ ಕಾವ್ಯ ಬರೆದ ಕಾರಣಕ್ಕೆ 18 ಬಾರಿ ಜೈಲಿಗೆ ಹೋದ ’ಹಬೀಬ್ ಜಾಲಿಬ್’ ಎಂಬ...

ಬಡವರ ಪರ ಕಾವ್ಯ ಬರೆದ ಕಾರಣಕ್ಕೆ 18 ಬಾರಿ ಜೈಲಿಗೆ ಹೋದ ’ಹಬೀಬ್ ಜಾಲಿಬ್’ ಎಂಬ ಚುಂಬಕ…

ತಮ್ಮ ವಯಸ್ಕ ಜೀವನದ 45 ವರ್ಷಗಳಲ್ಲಿ 18 ಸಲ ಜೈಲಿಗೆ ಹೋದವರು ಪಾಕಿಸ್ತಾನದ ಲಾಹೋರಿನ ವಿಪ್ಲವ ಕವಿ, ಹಾಡುಗಾರ ಹಬೀಬ್ ಜಾಲಿಬ್. ಹತ್ತು ವರ್ಷಕ್ಕೂ ಹೆಚ್ಚು ಅವರು ಜೈಲಿನ ಕೋಣೆಗಳಲ್ಲಿ ಕಳೆದರು.

- Advertisement -
- Advertisement -

ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದೊಳಗ ನಡೀತಾ ಇರೋ ವಿದ್ಯಾರ್ಥಿ ಚಳುವಳಿಯೊಳಗ ಶಶಿಭೂಷಣ್ ಸಮದ್ ಅನ್ನೋ ಅಂಧ ಹಾಡುಗಾರ ಹಾಡಿದ ‘ಮೈ ನಹೀ ಮಾನತಾ ಮೈ ನಹೀ ಜಾನತಾ’ ಅನ್ನೋ ಹಾಡು ಭಾಳ ಫೇಮಸ್ ಆಗೇದ. ಅದು ಆ ವಿಶ್ವವಿದ್ಯಾಲಯದ ನಾಡಗೀತೆ ಆದಹಂಗ ಆಗಿ ಹೋಗೇದ. ಅದು ಯಾರು ಬರೆದ ಹಾಡು ಅಂತ ನೋಡಿದಾಗ ಅದು ತನ್ನನ್ನು ಬರೆದ ಕವಿಯನ್ನು ಐದು ಸಲೆ ಜೈಲಿಗೆ ಕಳಿಸಿದ ಹಾಡು ಅಂತ ಗೊತ್ತಾಗಿ ಭಾರಿ ವಿಚಿತ್ರ ಅನ್ನಿಸಿತು.

ಅಲ್ಲವೇ ಶುಕಭಾಷಿಣಿ?

ಹಂಗಾರ ಕಾವ್ಯ ಕವಿಯನ್ನು ಎಷ್ಟು ಸಾರಿ ಜೈಲಿಗೆ ಕಳಿಸಬಹುದು? ಒಂದೆರಡು ಸಲೆ, ಅಥವಾ ಐದಾರು ಸಲೆ. ಆದರ ‘ಇವನು ಇಂಥಾ ಕಾವ್ಯ ಬರೆದ’ ಅನ್ನುವ ಒಂದೇ ಕಾರಣಕ್ಕ ಕವಿಯೊಬ್ಬ 18 ಬಾರಿ ಜೈಲಿಗೆ ಹೋದ ಉದಾಹರಣೆಯೊಂದು ಜಾಗತಿಕ ಸಾಹಿತ್ಯ ಇತಿಹಾಸದಲ್ಲಿ ದಾಖಲಾಗೇದ.

ತಮ್ಮ ವಯಸ್ಕ ಜೀವನದ 45 ವರ್ಷಗಳಲ್ಲಿ 18 ಸಲ ಜೈಲಿಗೆ ಹೋದವರು ಪಾಕಿಸ್ತಾನದ ಲಾಹೋರಿನ ವಿಪ್ಲವ ಕವಿ, ಹಾಡುಗಾರ ಹಬೀಬ್ ಜಾಲಿಬ್. ಹತ್ತು ವರ್ಷಕ್ಕೂ ಹೆಚ್ಚು ಅವರು ಜೈಲಿನ ಕೋಣೆಗಳಲ್ಲಿ ಕಳೆದರು.
ಅದರಾಗ ‘ಮೈ ನಹೀ ಮಾನತಾ’ ಅಂತ ಸುರು ಆಗುವ `ದಸ್ತೂರ್’ (‘ವ್ಯವಸ್ಥೆ’, ‘ಸಂವಿಧಾನ’), ಅನ್ನೋ ಒಂದು ಹಾಡಿಗಾಗಿ ಅದನ್ನು ಬರೆದ ಜಾಲಿಬ್ ಐದು ಸಲ ಜೈಲಿಗೆ ಹೋದರು. ಒಂದು ಊರಿನ ಕೋರ್ಟನ್ಯಾಗ ವಿಚಾರಣೆ ಮುಗದ ಕೂಡಲೇ ಇನ್ನೊಂದು ಊರಿನ್ಯಾಗ ಸುರು ಆಗತಿತ್ತು. “ಆಗ ನನ್ನ ಹೆಂಡತಿ ನನಗೂ ನನ್ನ ವಕೀಲರಿಗೂ ರೊಟ್ಟಿ ಮಾಡಿಕೊಂಡು ಜಿಪ್ಸಿ ಹೆಣ್ಣು ಮಗಳಂತೆ ನನ್ನ ಹಿಂದೆ ಓಡೋಡಿ ಬರುತ್ತಿದ್ದಳು” ಅಂತ ಅವರು ವರ್ಣನಾ ಮಾಡಿಕೋತಿದ್ದರು. ಅರವತ್ತರ ದಶಕದಾಗ ಬರದ ಈ ಹಾಡು ಈಗ ರಾಕ್ ಸಂಗೀತದ ಹಾಡಾಗಿ ಜನಪ್ರಿಯ ಆಗೇದ.

(ಯೂಟ್ಯೂಬದಾಗ ನೋಡರಿ).

ದೆಹಲಿಯಿಂದ ಕೇವಲ ಒಂದು ರಾತ್ರಿ ಬಸ್ಸಿನ ಪ್ರಯಾಣದ ದೂರದ ಪಾಕಿಸ್ತಾನದ ಈ ಊರಿನ ಗರೀಬ ಬಸ್ತಿಯ ಚಾಳಿನಲ್ಲಿ ಎರಡು ಕೋಣೆಯ ಬಾಡಿಗೆ ಮನೆಯಲ್ಲಿ ಜೀವನ ಸವೆಸಿದ ಅವರು ಬಡವರ ಬದುಕಿನ ಬೆಳಕಾಗಿ ಮೇಣದ ಬತ್ತಿ ಹಂಗ ಉರದುರದು ಕರಗಿ ಹೋದವರು.

ಸಾಯೊ ತನಕಾ ತಮ್ಮ ಕ್ರಾಂತಿ ಗೀತೆಗಳಿಗಾಗಿ, ಪಾಕಿಸ್ತಾನದ ಮಿಲಿಟರಿ ಆಡಳಿತಗಾರರ, ಸರ್ವಾಧಿಕಾರಿಗಳ ವಿರೋಧಿಸಿ ಕವನಾ ಬರದದ್ದಕ್ಕಾಗಿ ಹೊಡತಾ ತಿಂದರು, ಜೈಲಿಗೆ ಹೋದರು, ಸರಕಾರಿ ಸೌಲತ್ತುಗಳಿಗೆ ಕೈಯೊಡ್ಡದೇ ತೀವ್ರ ಅನಾರೋಗ್ಯ, ಬಡತನ, ಅಸಹಾಯಕತೆಯಿಂದ ನೊಂದರು.

ಲಾಹೋರಿನ ಸ್ಥಳೀಯ ಉರ್ದು ಪತ್ರಿಕೆಗಳಲ್ಲಿ ಕರಡು ತಿದ್ದೋ ಕೆಲಸ ಮಾಡುತ್ತಿದ್ದ ಹಬೀಬ್ ಜಾಲಿಬ್ ಅತ್ಯಂತ ಬಡ ಕುಟುಂಬದಿಂದ ಬಂದವರು. ಪಂಜಾಬಿನ ಹೋಷಿಯಾರಪುರದಲ್ಲಿ ಹುಟ್ಟಿದ ಅವರ ಕುಟುಂಬ ಅವರ ಹರೆಯದಾಗ ಪಾಕಿಸ್ತಾನಕ್ಕ ವಲಸೆ ಹೋತು. ಅವರು ಹೆಚ್ಚಿಗೆ ಓದಿದವರಲ್ಲ. ಸಣ್ಣ ವಯಸ್ಸಿನಲ್ಲಿ ಸಣ್ಣ ಸಣ್ಣ ಕೆಲಸ ಮಾಡಿ ಹೊಟ್ಟಿ ತುಂಬಿಕೊಂಡರು. ಅವರು ತೀರಿಕೊಂಡಾಗ ಅವರಿಗೆ 63 ವರ್ಷ. ಹಬೀಬ್ ಅಹಮದ್ ಅನ್ನೋ ಹೆಸರಿನ ಅವರು ಹಬೀಬ್ ಜಾಲಿಬ್ (ಅಯಸ್ಕಾಂತ) ಎಂಬ ಕಾವ್ಯ ನಾಮ ಇಟ್ಟುಕೊಂಡರು.

ಔಷಧಿಗೆ ಹಣ ಇಲ್ಲದ್ದಕ್ಕ ತಮ್ಮ 13 ವರ್ಷದ ಮಗನನ್ನು ಕಳೆದುಕೊಂಡರು. ಅದಕ್ಕೆ ಕಣ್ಣೀರು ಹಾಕಿದ ಹೆಂಡತಿಗೆ ‘ಬರೇ ನಮ್ಮ ಮಗ ಹೋದ ಅಂತ ಅಳಬೇಡ. ಇನ್ನು ಮುಂದೆ ಯಾವ ಬಡವನ ಮಗನೂ ಹೋಗದಿರಲಿ” ಅಂತ ಹಾರೈಸು ಅಂತ ಸ್ಥೈರ್ಯ ತುಂಬಿದರು.

‘ಷಾಯರೇ ಆವಾಮ್’ ಅಥವಾ ‘ಶ್ರೀಸಾಮಾನ್ಯನ ಕವಿ’ ಅನ್ನಿಸಿಕೊಂಡ ಅವರ ಬಗ್ಗೆ ಇರೋ ಕತೆಗಳು ದಂತಕತೆಗಳಿಗಿಂತಲೂ ರೋಚಕ. ಬಿಬಿಸಿಗೆ ನೀಡಿದ ಸಂದರ್ಶನದಾಗ ಅವರು “ನನ್ನನ್ನು ಜೈಲಿಗೆ ಕಳಿಸಲು ಹಾಸ್ಯಸ್ಪದವೆಂದೆನಿಸದ ಯಾವ ಕಾರಣವೂ ನಮ್ಮ ಪೊಲೀಸರಿಗೆ ಸಿಗಲೇ ಇಲ್ಲ” ಅಂದರು. ಪೊಲೀಸರನ್ನು ನಾನು ತುಂಬಾ ಓಡಾಡಿಸಿದ್ದೇನೆ. ಒಮ್ಮೆ ಕಾಫಿ ಹೌಸಿನಿಂದ, ಒಮ್ಮೆ ನಮ್ಮ ಮನೆಯ ಮಂಚದಿಂದ, ಒಮ್ಮೆ ಆಸ್ಪತ್ರೆಯಿಂದ, ಒಮ್ಮೆಯಂತೂ ನಮ್ಮ ಮನೆಯ ಪಾಯಖಾನೆಯಿಂದ ನನ್ನನ್ನು ಕರೆದುಕೊಂಡು ಹೋಗಿದ್ದಾರೆ ಅಂತ ಹೇಳಿ ನಕ್ಕರು. ಒಮ್ಮೆ ಜೈಲಿನಿಂದ ಬಿಡಲು ಯಾರೂ ಜಾಮಿನು ಸಿಗದೇ, ಇವರ ಹತ್ತಿರ ಯಾವ ಆಸ್ತಿಯೂ ಇರದಿದ್ದರಿಂದ ಇವರ 12 ವರ್ಷದ ಮಗನನ್ನು ರಿಮ್ಯಾಂಡ್ ಹೋಮಿನಲ್ಲಿ ಒತ್ತೆ ಇಟ್ಟುಕೊಂಡರು.

ಅವರು ತೀರಿ ಹೋದಾಗ ಅವರ ಪತ್ನಿ ಹಾಗೂ ಮಗಳು ತಾಹಿರಾ ಅವರ ಅಂತ್ಯ ಸಂಸ್ಕಾರಕ್ಕೆ ಸರಕಾರ ನೀಡಿದ ದುಡ್ಡನ್ನು ತಿರಸ್ಕಾರ ಮಾಡಿದರು.

ಆದರ ಅವರು ಸತ್ತ ಮೇಲೆ ಸಹಿತ ಅಲ್ಲಿನ ಸರಕಾರ ಅವರ ಮೇಲೆ ದ್ವೇಷ ಸಾಧಿಸಿತು. ಅವರ ಕುಟುಂಬಕ್ಕೆ ಬರುತ್ತಿದ್ದ ಪಿಂಚಣಿಯನ್ನು ನಿಲ್ಲಿಸಿತು. ಸ್ವಲ್ಪ ದಿನಾ ಆದ ಮ್ಯಾಲ ಅವರ ಪತ್ನಿ ತೀರಿಹೋದರು. ಈಗ ಅವರ ಮಗಳು ತಾಹಿರಾ ಲಾಹೋರಿನ ಹತ್ತಿರ ಮುಸ್ತಫಾ ಎಂಬ ಊರಿನಲ್ಲಿ ಟ್ಯಾಕ್ಷಿ ಓಡಿಸತಾಳ ಅಂತ ‘ಫ್ರೈಡೇ ಟೈಂಸ್’ ಪತ್ರಿಕೆಯೊಳಗ ವರದಿ ಆಗೇದ.

ಜಾಲಿಬ್ ಅವರ ಬಗ್ಗೆ ಇರೋ ಕತೆಗಳು ದಂತಕತೆಗಳಿಗಿಂತ ರೋಚಕ. ಅವರ ಉಸಿರು ನಿಂತಾಗ
“ಉರ್ದು ಸಾಹಿತ್ಯದಲ್ಲಿ ಉಳಿದಿದ್ದೇನು?
ಗಾಲಿಬ್ – ಜಾಲಿಬ್‍ರನ್ನು ಬಿಟ್ಟು?”

ಅನ್ನೋ ಉದ್ಗಾರವನ್ನ ಮುಜಾಹಿದ ಅಲಿ ಎಂಬ ವಿಮರ್ಶಕರು ತಗದರಂತ. ಗಾಲಿಬ್ ಅನ್ನುವುದು ಶಾಸ್ತ್ರೀಯ ಸಾಹಿತ್ಯದ ‘ಮಾರ್ಗ’ ಆದರೆ, ಜಾಲಿಬ್ ಅನ್ನೋದು ಜನಪದರ, ಬಡವರ, ಹಿಂದುಳಿದವರ ಪಾಲಿನ ‘ದೇಸಿ’ ಶಿಸ್ತು ಅನ್ನೋದು ಅದರ ಅರ್ಥ ಇದ್ದಿರಬಹುದು.

ಪಾಕಿಸ್ತಾನ ಅನ್ನೋ ಶಬ್ದ ಕೇಳಿದ ತಕ್ಷಣ ಅಲ್ಲಿ ಇರೋವರೆಲ್ಲಾ ಖೂಳರು, ಖಳನಾಯಕರು, ಭಾರತ ದ್ವೇಷಿಗಳು, ಧರ್ಮಾಂಧರು, ನಮ್ಮ ವಿರುದ್ಧ ಸದಾ ಕತ್ತಿ ಮಸಿಯೋ ಭಯೋತ್ಪಾದಕರು ಅಂತ ಅಂದುಕೊಳ್ಳುವ ನಮಗ ಅಲ್ಲಿಯೂ ವ್ಯವಸ್ಥೆಯ ವಿರುದ್ಧ ಹೋರಾಡೋ ಜನಾ ಇದ್ದಾರ. ಅವರೂ ನಮ್ಮಂಗನ, ಅಲ್ಲಿಯೂ ಆಳುವವರು ಬ್ಯಾರೆ, ಆಳಿಸಿಕೊಳ್ಳುವವರು ಬ್ಯಾರೆ ಅಂತ ಗೊತ್ತಾಗಬೇಕು. ಪಾಕಿಸ್ತಾನ ಬ್ಯಾರೆ ಪಾಕಿಸ್ತಾನದ ಸರಕಾರ ಬ್ಯಾರೆ, ಅಲ್ಲಿನ ಜನಾ ಬ್ಯಾರೆ ಅನ್ನೋದು ತಿಳೀಬೇಕು. ಈ ನಿಟ್ಟಿನ್ಯಾಗ ನಮ್ಮಂಥಾ ಅಂಧರನ್ನು ಕೈಹಿಡಿದು ಕರಕೊಂಡು ಹೋಗಿ ಪುಟ್ಟಾಪೂರಾ ಬ್ಯಾರೆ ಜಗತ್ತನ್ನ ಪರಿಚಯ ಮಾಡಿಸಿದ ಶಶಿಭೂಷಣ ಸಮದ್ ಅವರಿಗೆ ಒಂದು ಧನ್ಯವಾದ ಹೇಳೋಣ?

ಕವಿಯನ್ನು ಐದು ಸಾರಿ ಜೈಲಿಗೆ ಕಳಿಸಿದ ಕವಿತೆ

‘ವ್ಯವಸ್ಥಾ’

ಎಲ್ಲೆ ಅರಮನಿಯೊಳಗಷ್ಟ ದೀಪ ಉರಿತಾವೋ
ಎಲ್ಲೆ ಕೆಲವರ ಖುಷಿ ಅಷ್ಟ ಲೆಕ್ಕಕ್ಕ ಬರತದೋ
ಎಲ್ಲೆ ದೊಡ್ಡವರು ತಮ್ಮದಷ್ಟ ತಾವು ನೋಡಿಕೋತಾರೋ,

ಈ ವ್ಯವಸ್ಥಾ ಅದ ಅಲ್ಲಾ,
ಅದು ಬೆಳಕು ಹರಿಯದ ಬೆಳಗು
ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ

ಈ ಗಲ್ಲು – ಗಿಲ್ಲಿಗೆಲ್ಲ ನಾ ಹೆದರಂಗಿಲ್ಲಾ
ಸೂಫಿ ಮನ್ಸೂರ ಇದ್ದಂಗ ನಾ
ನಾನ ದೇವರಂತ ತಿಳದವ ನಾ
ಅದಕ್ಕ ಬೇಕಾರ ನನ್ನ ಜೀವಾ ಕೊಟ್ಟೇನಿ
ಆ ಮಾರಿ ಇಲ್ಲದ ಮಾರಿಗೆ
ಹೋಗಿ ಈ ಮಾತು ಹೇಳರಿ

ಜೈಲಖಾನಿ ತೋರಿಸಿ ನನ್ನ ಯಾಕ ಹೆದರಿಸತೀರಿ?
ನಾ ಏನ ಹೆದರಂಗಿಲ್ಲಾ
ಇಂಥಾ ಪಾಪದ ಮಾತು
ಈ ಅಜ್ಞಾನದ ಕತ್ತಲಿ
ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ

ನೀವು ಬೇಕಾದ್ದು ಅಂತೀರಿಪಾ,
ಗಿಡದ ತುಂಬೆಲ್ಲಾ ಹೂವು ತುಂಬ್ಯಾವು
ಅಂತೀರಿ
ಇಲ್ಲೆ ಯಾರೂ ಹಸದಿಲ್ಲ, ನೀರಡಿಸಿಲ್ಲ
ಅಂತ ಬೇಕಾರ ಅಂದೀರಿ
ಎದೀ ಮ್ಯಾಲಿನ ಗಾಯ ತಮ್ಮಷ್ಟಕ್ಕ ತಾವ
ಹೊಲಕೊಂಡಾವು ಅಂತನೂ ಅಂತೀರಿ

ಇಷ್ಟೆಲ್ಲಾ ಖುಲ್ಲಂಖುಲ್ಲಾ ಸುಳ್ಳು
ನಮ್ಮೆಲ್ಲರ ಅಕಲಿನ ಖತ್ಲು
ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ

ನೀವೆಂಥಾ ಕಳ್ಳರು ಅಂದರ
ಸಾವಿರ ವರ್ಷದ ಸಮಾಧಾನ
ಕದ್ದೀರಿ
ಇನ್ನ ಭಾಳ ದಿವಸ ನಡಿಯಂಗಿಲ್ಲ
ನಿಮ್ಮ ಈ ಕಣ್ಕಟ್ಟು
‘ನಿಮ್ಮ ಸಂಕಟಕ್ಕ ನಾನೊಬ್ಬನ ಮದ್ದು’
ಅಂತೆಲ್ಲಾ ಯಾಕ ಅಂತೀರಿ?
ನಿಮ್ಮ ಕಡೆ ಯಾವ ಮದ್ದೂ ಅಲ್ಲ,
ನಮ್ಮ ಗಾಯಾ ಏನ ನೀವು ಮಾಯಿಸಂಗಿಲ್ಲ
ಬ್ಯಾರೆ ಯಾರರ ನಿಮ್ಮನ್ನ ನಂಬ್ಯಾರು

ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ
 – ಹಬೀಬ್ ಜಾಲಿಬ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...