ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ಮುಸ್ಲಿಮರ ವಿರುದ್ಧ ಬಹಿರಂಗ ಹಿಂಸಾಚಾರಕ್ಕೆ ಕರೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ಇನ್ನೂ ಇಬ್ಬರನ್ನು ಹೆಸರಿಸಲಾಗಿದೆ ಎಂದು ಹರಿದ್ವಾರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಿಟಿ ಶೇಖರ್ ಸುಯಲ್ ಶನಿವಾರ ಹೇಳಿದ್ದಾರೆ.
ಹರಿದ್ವಾರದಲ್ಲಿ ಡಿಸೆಂಬರ್ 17 ಮತ್ತು 19 ರ ನಡುವೆ ಮೂರು ದಿನಗಳ ಕಾಲ ನಡೆದ ’ಧರ್ಮ ಸಂಸದ್’ ಧಾರ್ಮಿಕ ಸಭೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶಕ್ಕೆ ಒಳಗಾಗಿದ್ದು, ಮುಸ್ಲಿಮರ ವಿರುದ್ಧ ಬಹಿರಂಗ ಹಿಂಸಾಚಾರಕ್ಕೆ ಕರೆ ನೀಡಿರುವುದನ್ನು ಜನರು ಖಂಡಿಸಿದ್ದಾರೆ. ದೇಶದ ನಾಯಕರು ಈ ಬಗ್ಗೆ ಮೌನ ವಹಿಸಿರುವುದನ್ನು ನೆಟ್ಟಿಗರು ಸೇರಿದಂತೆ ಅಂತರ ರಾಷ್ಟ್ರೀಯ ಮಾಧ್ಯಮಗಳು ಪ್ರಶ್ನಿಸಿ, ಆತಂಕ ವ್ಯಕ್ತಪಡಿಸಿವೆ.
ಸಭೆಯಲ್ಲಿ ದ್ವೇಷ ಭಾಷಣ ಮಾಡಿದ್ದ ಆರೋಪದಲ್ಲಿ ಧರ್ಮ ದಾಸ್ ಮತ್ತು ಅನ್ನಪೂರ್ಣ ಎಂಬ ಇಬ್ಬರು ಮಹಿಳೆಯನ್ನು ಪೊಲೀಸರು ಎಫ್ಐಆರ್ನಲ್ಲಿ ಹೆಸರಿಸಿದ್ದಾರೆ. ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ವಾಸಿಂ ರಿಜ್ವಿ ಅಕಾ ಜಿತೇಂದ್ರ ತ್ಯಾಗಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಖಾಲಿಸ್ತಾನಿ & LTTE ಭಯೋತ್ಪಾದಕರಾಗಿ’: ಹಿಂದೂ ಯುವಕರಿಗೆ ಬಹಿರಂಗ ಕರೆ ನೀಡಿದ ಯತಿ ನರಸಿಂಗಾನಂದ!
ಇದೇ ವೇಳೆ ಮಾತನಾಡಿರುವ ಧರ್ಮ ಸಂಸದ್ನ ಸದಸ್ಯ ಆನಂದ್ ಸ್ವರೂಪ್, “ನಾವು ಚೆನ್ನಾಗಿ ಯೋಚಿಸಿ ನೀಡಿರುವ ಹೇಳಿಕೆಗಳಿಗೆ ಬದ್ಧರಾಗಿದ್ದೇವೆ. ಒಬ್ಬ ವ್ಯಕ್ತಿ ನಮ್ಮ ಸಹೋದರಿಯ ಮೇಲೆ ಅತ್ಯಾಚಾರವೆಸಗಿದರೆ ನಾವು ಅವನನ್ನು ಕೊಲ್ಲುವುದಿಲ್ಲವೇ..? ಭಾಷಣಾಕಾರರು ಅಂತಹ ವ್ಯಕ್ತಿಗಳನ್ನು ಕೊಲ್ಲುವ ಬಗ್ಗೆ ಮಾತನಾಡಿದರು. ನಮ್ಮ ಸ್ನೇಹಿರತರಾಗಿರುವ ಸಾಮಾನ್ಯ ಮುಸ್ಲಿಮರ ಬಗೆಯಲ್ಲ. ಭಾರತ ಹಿಂದೂ ರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ.
“ನಮ್ಮಲ್ಲಿ 100 ಜನರು 20 ಲಕ್ಷ ಜನರನ್ನು (ಮುಸ್ಲಿಮರು) ಕೊಲ್ಲಲು ಸಿದ್ಧರಿದ್ದರೆ, ನಾವು ಗೆದ್ದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ” ಎಂದು ಹಿಂದೂ ಮಹಾಸಭಾದ ನಾಯಕಿ ಪೂಜಾ ಶಕುನ್ ಪಾಂಡೆ ಹೇಳಿದ್ದರು. ದೇಶದ ಮುಸ್ಲಿಮರನ್ನು ಉಲ್ಲೇಖಿಸಿ “ಕೊಲ್ಲಲು ಮತ್ತು ಜೈಲಿಗೆ ಹೋಗಲು ಸಿದ್ಧರಾಗಿರಿ” ಎಂದು ಬಲಪಂಥೀಯ ಹಿಂದೂ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಧರ್ಮ ಸಂಸದ್ನ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ವಿವಾದಿತ ಉಗ್ರಗಾಮಿ ಹಿಂದುತ್ವ ನಾಯಕ ನರಸಿಂಗಾನಂದ ಗಿರಿ ಉದ್ರೇಕಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಡಿಸೆಂಬರ್ 19 ರಂದು ನಡೆದ ಕಾರ್ಯಕ್ರಮದಲ್ಲಿ, “ನಮಗೆ ಸಹಾಯ ಬೇಕಾದಾಗ, ಹಿಂದೂ ಸಮುದಾಯವು ನಮಗೆ ಸಹಾಯ ಮಾಡಲಿಲ್ಲ. ಆದರೆ ಯಾವುದೇ ಯುವ ಕಾರ್ಯಕರ್ತ ‘ಹಿಂದೂ ಪ್ರಭಾಕರನ್’ ಆಗಲು ಸಿದ್ಧರಾಗಿದ್ದರೆ, ಬೇರೆಯವರಿಗಿಂತ ಮೊದಲು ನಾನು ಅವನಿಗೆ 1 ಕೋಟಿ ನೀಡುತ್ತೇನೆ…ಯಾರಾದರೂ ‘ಹಿಂದೂಗಳ ಪ್ರಭಾಕರನ್’ ಆಗುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ನಾನು 1 ಕೋಟಿ ನೀಡುತ್ತೇನೆ ಮತ್ತು ಅವರು ಒಂದು ವರ್ಷ ಹಾಗೆ ಮುಂದುವರಿಯುವುದಾದರೆ ಕನಿಷ್ಠ 100 ಕೋಟಿ ರೂ. ಅವರಿಗೆ ಸಂಗ್ರಹಿಸುತ್ತೇನೆ” ಎಂದು ಹೇಳಿದ್ದರು.