ರಾಮನಗರ ಜಿಲ್ಲೆಯ ಹಾರೋಹಳ್ಳಿ ನೂತನ ತಾಲೂಕು ಉದ್ಘಾಟನೆ ಸಮಾರಂಭದ ವೇದಿಕೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಸಚಿವ ಅಶ್ವಥ್ ನಾರಾಯಣ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ ಘಟನೆ ಜರುಗಿದೆ. ಅಲ್ಲದೆ ಹಾರೋಹಳ್ಳಿ ಅಭಿವೃದ್ದಿಗೆ ಎಷ್ಟು ಹಣ ನೀಡಿದ್ದೀರಿ ದಾಖಲೆ ತೋರಿಸಿ ಎಂಬ ಕಾರ್ಯಕರ್ತರ ಪ್ರಶ್ನೆಗೆ ಸಚಿವರು ಉತ್ತರಿಸದೇ ಹೊರನಡೆದ ಪ್ರಸಂಗ ನಡೆದಿದೆ.
“ಬಿಜೆಪಿ ಸರ್ಕಾರವು ರಾಮನಗರ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿರುವುದರಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೇವಲ ತಾಲೂಕು ರಚನೆಗೆ ತಾತ್ವಿಕ ಅನುಮೋದನೆ ಸಿಕಿತ್ತು. ಆದರೆ ಇದಕ್ಕೆ ಅಂತಿಮ ಅನುಮೊದನೆ ಹೊರಡಿಸಿದ್ದು ಬಿಜೆಪಿ ನೇತೃತ್ವದ ಸರ್ಕಾರ. ರಾಮನಗರ ಜಿಲ್ಲೆಗೆ ಸಂಬಂಧಿಸಿದ ಹಲವು ಹುದ್ದೆಗಳ ನೇಮಕಾತಿ ಕೂಡ ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಹಾಗೂ ಮೆಡಿಕಲ್ ಕಾಲೇಜು ಕಾಮಗಾರಿಗಳನ್ನು ಕೂಡ ಶೀಘ್ರವೇ ಆರಂಭಿಸಿ, ಮುಖ್ಯಮಂತ್ರಿಗಳ ಮೂಲಕ ಶಂಕುಸ್ಥಾಪನೆ ಮಾಡಲಾಗುತ್ತದೆ” ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅನಿತಾ ಕುಮಾರಸ್ವಾಮಿಯವರು “ಹಾರೋಹಳ್ಳಿಯ ತಾಲೂಕು ರಚನೆಗೆ ಶ್ರಮಿಸಿದ್ದು ನಾನು. ಕುಮಾರಸ್ವಾಮಿ ಈ ಭಾಗದ ಶಾಸಕರಾದ ಮೇಲೆ ಈ ಕ್ಷೇತ್ರವು ಅಭಿವೃದ್ಧಿ ಆಗಿರುವುದನ್ನು ಎಲ್ಲರೂ ನೋಡಿದ್ದಾರೆ. ರಾಮನಗರಕ್ಕೆ 450 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕೊಟ್ಟಿರುವುದಾಗಿ ಉಸ್ತುವಾರಿ ಸಚಿವರು ಹೇಳುತ್ತಾರೆ. ಆದರೆ, ಇದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಆಗಿತ್ತು. ನೀರಿನ ಯೋಜನೆ ಬರುವಂತೆ ಮಾಡಿದ್ದೆ ಕುಮಾರಸ್ವಾಮಿ. ನನಗೆ ಸಚಿವರಂತೆ ಸುಳ್ಳು ಹೇಳಲು ಬರುವುದಿಲ್ಲ” ಎಂದು ಹಲವು ದಾಖಲೆಗಳನ್ನು ಪ್ರದರ್ಶಿಸಿದ್ದಾರೆ.
“ಈ ಕಾರ್ಯಕ್ರಮಕ್ಕೆ ನನ್ನನ್ನು ಕಾಟಾಚಾರಕ್ಕೆ ಕರೆದು ನಾನು ಬರುವ ಮೊದಲೇ ಟೇಪ್ ಕತ್ತರಿಸಿ ಎಲ್ಲಾ ಮುಗಿದುಹೋಗಿದೆ. ಇದು ನನಗೆ ಮುಂಚೆನೇ ಗೊತ್ತಿತ್ತು. ಆದರೂ ನಮ್ಮ ಜನತೆಗಾಗಿ ನಾನು ಬಂದಿದ್ದೇನೆ. ಈ ತಾಲೂಕು ಆಗಬೇಕಾದರೆ ನನ್ನ ಶ್ರಮಿ ಇದೆ. ಕುಮಾರಸ್ವಾಮಿಯವರ ಕಾಲದಲ್ಲಿ ಅಧಿಸೂಚನೆಯಾಗಿದೆ. ಆನಂತರ ನಾನು ಫಾಲೋ ಅಪ್ ಮಾಡಿ ಸದನದಲ್ಲಿ ಅಶೋಕ್ರವರಿಗೆ ಪ್ರಶ್ನೆ ಕೇಳಿದ್ದೆ. ಆನಂತರ ಕಂದಾಯ ಇಲಾಖೆ, ಎಷ್ಟು ಹುದ್ದೆ ಬೇಕು ಎಂದು ಜಿಲ್ಲಾಧಿಕಾರಿಗಳಿಂದ ಪತ್ರ ಸೇರಿ ಎಲ್ಲಾ ಫಾಲೋಅಪ್ ಮಾಡಿದ್ದೇನೆ. ಆ ದಾಖಲೆಗಳನ್ನು ತಂದಿದ್ದೇನೆ ನೋಡಿ” ಎಂದಿದ್ದಾರೆ.
ಸಚಿವ ಅಶ್ವಥ್ ನಾರಾಯಣ್ ಅವರ ಭಾಷಣಕ್ಕೆ ಹಾರೋಹಳ್ಳಿಯಲ್ಲಿ ಅಡ್ಡಿ. ಹಾರೋಹಳ್ಳಿ ಅಭಿವೃದ್ಧಿಗೆ ಎಷ್ಟು ಹಣ ಮೀಸಲಿಟ್ಟಿರುವುದಾಗಿ ಕೇಳಿದಾಗ, ಸಚಿವರ ಬಳಿ ಉತ್ತರವಿಲ್ಲ.#IYCKarnataka #INCKarnataka pic.twitter.com/KqnhpwdIt2
— IYC Karnataka (@IYCKarnataka) February 21, 2023
ಇನ್ನು ಸಚಿವ ಅಶ್ವಥನಾರಾಯಣರವರು ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ದಲಿತ ಸಂಘಟನೆಯ ಕಾರ್ಯಕರ್ತರೊಬ್ಬರು, ಹಾರೋಹಳ್ಳಿ ತಾಲ್ಲೂಕಿಗೆ ಎಷ್ಟು ಅನುದಾನ ಮೀಸಲಿಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಮತ್ತೊಬ್ಬರು ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರು ಒಳಮೀಸಲಾತಿ ಹೋರಾಟಕ್ಕೆ ಸಿಎಂ ಅನ್ನು ಕರೆದುಕೊಂಡು ಹೋಗಿ ಸಮಸ್ಯೆ ಆಲಿಸಿ ಎಂದು ಸಲಹೆ ನೀಡಿದರು. ಆದರೆ ಸಚಿವರು ಯಾವುದಕ್ಕೂ ಉತ್ತರಿಸಿದೆ ಸಭೆಯಿಂದ ಹೊರನಡೆದರು.
ಇದನ್ನೂ ಓದಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಎಚ್.ಡಿ ಕುಮಾರಸ್ವಾಮಿ V/S ಸಿ.ಪಿ ಯೋಗಿಶ್ವರ್ ನಡುವೆ ಗೆಲುವು ಯಾರಿಗೆ?