ರೈತರ ವಿಷಯವಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಹಿಂದೆ ಭೇಟಿ ಮಾಡಿದ್ದೆ. ಆಗ ಅವರು ಅಹಂಕಾರದಿಂದ ನಡೆದುಕೊಂಡಿದ್ದರು. ಪ್ರಧಾನಿ ಮೋದಿಯನ್ನು ಗೃಹ ಸಚಿವ ಅಮಿತ್ ಶಾ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು ಎಂದು ಮೇಘಾಲಯ ರಾಜ್ಯಪಾಲರಾದ ಸತ್ಯಪಾಲ್ ಮಲ್ಲಿಕ್ ಭಾನುವಾರ ತಿಳಿಸಿದ್ದಾರೆ.
ಹರಿಯಾಣದ ದಾದ್ರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮೋದಿ ಭೇಟಿ ವೇಳೆ 500ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗಿದೆ ಎಂಬ ವಿಷಯ ಪ್ರಸ್ತಾಪಿಸಿದೆ. ಆಗ ಕುಪಿತರಾದ ಅವರು ರೈತರು ನನಗಾಗಿ ಸತ್ತರೆ ಎಂದು ಪ್ರಶ್ನಿಸಿದ್ದರು. ಹೌದು ನೀವು ರಾಜನಾದ ನಂತರ ಅವತು ಮೃತಪಟ್ಟಿದ್ದಾರೆ ಎಂದು ಉತ್ತರಿಸಿದ್ದೆ” ಎಂದು ಹೇಳಿದ್ದಾರೆ.
ಅವರೊಂದಿಗೆ ಮಾತುಕತೆ ಆರಂಭಿಸಿದ 5 ನಿಮಿಷದ ಒಳಗಾಗಿ ಅವರು ಬಹಳ ಅಹಂಕಾರದಿಂದ ನಡೆದುಕೊಂಡರು. ನಾನು ಜಗಳವಾಡುತ್ತಾ ಮಾತುಕತೆ ಮುಗಿಸಿದೆ. ನಂತರ ಅಮಿತ್ ಶಾರವರನ್ನು ಭೇಟಿಯಾಗಲು ತಿಳಿಸಿದರು. ಒಂದು ನಾಯಿ ಸತ್ತರು ಕೂಡ ಪ್ರಧಾನಿ ಸಂತಾಪ ಸೂಚಿಸುತ್ತಾರೆ ಆದರೆ ರೈತರ ಬಗ್ಗೆ ಕಾಳಜಿ ತೋರಲಿಲ್ಲ ಎಂದು ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.
ನಂತರ ನಾನು ಅಮಿತ್ ಶಾರವರನ್ನು ಭೇಟಿಯಾಗಿ ಈ ವಿಷಯ ತಿಳಿಸಿದೆ. ಆಗ ಅವರು “ಸತ್ಯ, ಅವರು ಸ್ಥಿಮಿತತೆ ಕಳೆದುಕೊಂಡಿದ್ದಾರೆ. ನೀವು ಚಿಂತಸಬೇಡಿ ಮತ್ತು ನಮ್ಮೊಂದಿಗೆ ಸಂಪರ್ಕದಿಂದಿರಿ ಎಂದು ಹೇಳಿದರು. ಗೃಹ ಮಂತ್ರಿ ಅಮಿತ್ ಶಾರವರು ಪಿಎಂ ಮೋದಿಯನ್ನು ಈ ರೀತಿ ಉಲ್ಲೇಖಿಸಿದ್ದರು” ಎಂದು ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.
ಅವರ ಈ ಹೇಳಿಕೆ ವೈರಲ್ ಆಗತೊಡಗಿದೆ. ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸತ್ಯಪಾಲ್ ಮಲಿಕ್ ಅವರು ಮಾತನಾಡಿರುವ ವೀಡಿಯೊವನ್ನು ಹಂಚಿಕೊಂಡಿದ್ದು, “ಸ್ವಪ್ರತಿಷ್ಠೆ… ಕ್ರೌರ್ಯ… ಅಸೂಕ್ಷ್ಮತೆ. ಪ್ರಧಾನಿ ಮೋದಿಯವರ ವ್ಯಕ್ತಿತ್ವದಲ್ಲಿ ಅಡಕವಾಗಿರುವ ಈ ಗುಣಗಳನ್ನು ಬಿಜೆಪಿ ರಾಜ್ಯಪಾಲರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇದು ಪ್ರಜಾಪ್ರಭುತ್ವಕ್ಕೆ ಕಳವಳಕಾರಿ ವಿಷಯ” ಎಂದು ಟೀಕಿಸಿದೆ.
ಮಲ್ಲಿಕಾರ್ಜುನ ಖರ್ಗೆಯವರು ಟ್ವೀಟ್ ಮಾಡಿ “ಮೇಘಾಲಯದ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ರೈತರ ವಿಷಯದಲ್ಲಿ ಪ್ರಧಾನಿ ‘ಅಹಂಕಾರಿ’ ಎಂದು ಹೇಳುತ್ತಿದ್ದಾರೆ ಮತ್ತು ಗೃಹ ಸಚಿವ ಅಮಿತ್ ಶಾ ಪ್ರಧಾನಿಯನ್ನು ‘ಹುಚ್ಚ’ ಎಂದು ಕರೆದಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿರುವವರು ಪರಸ್ಪರ ತಿರಸ್ಕಾರದಿಂದ ಮಾತನಾಡುತ್ತಿದ್ದಾರೆ! ಮೋದಿಜಿ ಇದು ನಿಜವೇ?” ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವು ರೈತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಮತ್ತು ಎಂಎಸ್ಪಿ ಜಾರಿಗೆ ಕಾನೂನು ರಚಿಸಬೇಕು. ಏಕೆಂದರೆ ರೈತ ಹೋರಾಟ ನಿಂತಿಲ್ಲ, ಅದು ತಾತ್ಕಾಲಿಕವಾಗಿ ಅಮಾನತ್ತಾಗಿದೆ ಅಷ್ಟೇ ಎಂದು ಸತ್ಯಪಾಲ್ ಮಲ್ಲಿಕ್ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ಮತ್ತು ಗೋವಾದ ನಂತರ ಮೇಘಾಲಯದ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲ್ಲಿಕ್ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ನಾನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲನಾಗಿದ್ದ ವೇಳೆ ಎರಡು ಕಡತಗಳು ನನ್ನ ಮುಂದೆ ಬಂದಿದ್ದವು. ಒಂದು ಮುಖೇಶ್ ಅಂಬಾನಿಗೆ ಸೇರಿದ್ದರೆ ಮತ್ತೊಂದು ಆರ್ಎಸ್ಎಸ್ ನಾಯಕನಿಗೆ ಸೇರಿತ್ತು. ಅದಕ್ಕೆ ಸಹಿ ಹಾಕಿದರೆ 300 ಕೋಟಿ ಲಂಚ ಕೊಡುವುದಾಗಿ ಆಮಿಷವೊಡ್ಡಿದ್ದರು. ಆದರೆ ನಾನು ಆ ಕೆಲಸ ಮಾಡಲಿಲ್ಲ ಬದಲಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯ ತಿಳಿಸಿದ್ದೆ ಎಂದು ಮಲ್ಲಿಕ್ ಹೇಳಿದ್ದರು.
“ನಾಯಿ ಕಚ್ಚಿ ಸತ್ತವರಿಗೂ ಸಂತಾಪ ಸೂಚಿಸುವವರಿಗೆ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿ ಮಡಿದ 600ಕ್ಕೂ ಹೆಚ್ಚು ರೈತರು ಕಾಣದಿರುವುದು ದುರಂತ ಎಂದು ಮೋದಿ ವಿರುದ್ಧ 2021ರ ನವೆಂಬರ್ನಲ್ಲಿ ಕಿಡಿಕಾರಿದ್ದ ಅವರು, ಕೇಂದ್ರ ಸರ್ಕಾರದಲ್ಲಿ ಬಹಳಷ್ಟು ಮಂದಿ ರೈತರ ಪರವಾಗಿದ್ದಾರೆ. ಆದರೆ ಒಂದಿಬ್ಬರ ಅಹಂನಿಂದಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ” ಎಂದಿದ್ದರು.
ಇದನ್ನೂ ಓದಿ: ಒಂದಿಬ್ಬರ ಅಹಂನಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ: ಕೇಂದ್ರದ ವಿರುದ್ಧ ಕಿಡಿಕಾರಿದ ಮೇಘಾಲಯ ರಾಜ್ಯಪಾಲ