ವಾರದಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರಿನ ಗುರುಪುರದಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದು 4 ಮನೆಗಳು ಸಂಪೂರ್ಣ ನೆಲಸವಾಗಿವೆ. ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಧಾರುಣವಾಗಿ ಮೃತಪಟ್ಟಿದ್ದಾರೆ.
ವಾರದಿಂದ ಸುರಿಯುತ್ತಿರುವ ಮಳೆ ಇಂದೂ ಜೋರಾಗಿದ್ದು, ಹಲವು ಆಸ್ತಿ ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಹಲುವ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ದುಸ್ತರವಾಗಿದೆ.
20 ವರ್ಷಗಳ ಹಿಂದೆ ಜಿಲ್ಲಾಡಳಿತ 14 ನಿರಾಶ್ರಿತ ಕುಟುಂಬಗಳಿಗೆ ಗುರುಪುರದ ಬಂಗ್ಲೆಗುಡ್ಡದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಿತ್ತು. ಹೀಗಾಗಿ ಈ ಭಾಗದಲ್ಲಿ ನಿರಾಶ್ರಿತರು ಮನೆ ಮಾಡಿಕೊಂಡಿದ್ದರು. ಇಲ್ಲಿ ನೆಲೆಸಿರುವ ಎಲ್ಲರೂ ಕೂಲಿ ಕೆಲಸ ಮಾಡುವವರಾಗಿದ್ದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಉಳಿದಿದ್ದರು. ಭಾರೀ ಪ್ರಮಾಣದ ಮಳೆಯಿಂದಾಗ ಗುಡ್ಡದ ಮಣ್ಣು ಕುಸಿದು ಮನೆಗಳ ಮೇಲೆ ಬಿದ್ದಿದೆ.
ಈ ಗುಡ್ಡದಲ್ಲಿ ಸದ್ಯಕ್ಕೆ 14 ಮನೆಗಳಿದ್ದು, ಭೂ ಕುಸಿತದಿಂದಾಗಿ 4 ಮನೆಗಳು ಸಂಪೂರ್ಣವಾಗಿ ಜಖಂ ಆಗಿವೆ. ಅಲ್ಲದೆ, ಈ ಮನೆಯಲ್ಲಿದ್ದ ಇಬ್ಬರು ಮಕ್ಕಳು ಭಾರೀ ಪ್ರಮಾಣದ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದು ಜಿಲ್ಲಾಡಳಿತ ಮತ್ತು ಎನ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು. 4 ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರವೂ ಮಕ್ಕಳನ್ನು ಜೀವ ಉಳಿಸಲು ಸಾಧ್ಯವಾಗಿಲ್ಲ.
ಕೆಸರಿನಿಂದ ಕೂಡಿದ್ದ ಮಣ್ಣಿನಲ್ಲಿ ಸಿಲುಕಿದ್ದರಿಂದ ಉಸಿರಾಡಲು ಸಾಧ್ಯವಾಗದೆ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಎನ್ನಲಾಗಿದೆ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು, ಮೃತ ಮಕ್ಕಳ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಈ ಗುಡ್ಡದ ಮೇಲಿನ ಎಲ್ಲರನ್ನೂ ಗಂಜಿ ಕೇಂದ್ರಕ್ಕೆ ರವಾನಿಸಲಾಗಿದೆ. ಅಲ್ಲದೆ, ಇಲ್ಲಿನ ಎಲ್ಲಾ ನಿರಾಶ್ರಿತ ಕುಟುಂಬಗಳಿಗೂ ಬೇರೆ ಮನೆ ಮಾಡಿಕೊಳ್ಳಲು ನಿವೇಶನ ನೀಡಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: 16 ತಿಂಗಳಿಂದ ಬಾರದ ಶಿಷ್ಯವೇತನ: ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ 7ನೇ ದಿನಕ್ಕೆ