ರಾಜ್ಯದ ಕಾಲೇಜು ಕ್ಯಾಂಪಸ್ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿತ್ತು. ಸರ್ಕಾರದ ನಿರ್ಧಾರವನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡದಿತ್ತು. ಇದೀಗ ಹಿಜಾಬ್ ಪ್ರಕರಣದ ವಿಚಾರಣೆಗೆ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಪಿಎಸ್ ನರಸಿಂಹ ಅವರ ಪೀಠದ ಮುಂದೆ ಉಲ್ಲೇಖಿಸಲಾಗಿದ್ದು, ”ಪರೀಕ್ಷೆಗಳು ನಡೆಯುತ್ತಿರುವುದರಿಂದ ಹಿಜಾಬ್ ಧರಿಸಲು ಅನುಮತಿ ನೀಡದ ಸರ್ಕಾರಿ ಶಾಲೆಗಳ ಹೆಣ್ಣುಮಕ್ಕಳು ಮತ್ತೊಂದು ವರ್ಷ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಮಹಿಳಾ ವಕೀಲರು ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿದರು. ಆಗ ಪೀಠವು “ನಾನು ಪೀಠವನ್ನು ರಚಿಸುತ್ತೇನೆ” ಎಂದು ಹೇಳಿದೆ.
ಆರಂಭದಲ್ಲಿ, ಈ ಪ್ರಕರಣವನ್ನು ಹೋಳಿ ರಜೆಯ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಹೇಳಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಸುಪ್ರೀಂ ಮೆಟ್ಟಿಲೇರಿದ ರಾಜ್ಯದ ವಿದ್ಯಾರ್ಥಿನಿಯರು
5 ದಿನಗಳ ನಂತರ ಆ ಮಕ್ಕಳ ಪರೀಕ್ಷೆಗಳು ಬರುತ್ತೀವೆ ಎಂದು ವಕೀಲರು ಹೇಳಿದರು. ಅದಕ್ಕೆ ಸಿಜೆಐ, ನೀವು ಕೊನೆಯ ದಿನ ಇರುವಾಗ ಬಂದರೆ ಹೇಗೆ? ಎಂದು ಪ್ರಶ್ನಿಸಿದರು.
ಈಗಾಗಲೇ ಈ ಪ್ರಕರಣವನ್ನು ಜನವರಿ 23 ಮತ್ತು ಫೆಬ್ರವರಿ 22ರಂದು ಎರಡು ಸಂದರ್ಭಗಳಲ್ಲಿ ಉಲ್ಲೇಖಿಸಲಾಗಿತ್ತು ಎಂದು ವಕೀಲರು ಉತ್ತರಿಸಿದರು.
ಸರಿ, ನಾನು ಪೀಠವನ್ನು ರಚಿಸುತ್ತೇನೆ ಮತ್ತು ಆಗ ವಿಚಾರಣೆ ನಡೆಸಲಾಗುತ್ತದೆ ಎಂದು ಸಿಜೆಐ ಭರವಸೆ ನೀಡಿದರು.
ರಾಜ್ಯ ಸರ್ಕಾರ ಹೊರಡಿಸಿದ್ದ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವೂ ವಿಭಿನ್ನವಾಗಿ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಹೇಮಂತ್ ಗುಪ್ತಾ (ಈಗ ನಿವೃತ್ತರಾಗಿದ್ದಾರೆ) ನಿಷೇಧವನ್ನು ಎತ್ತಿಹಿಡಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಅದನ್ನು ರದ್ದುಗೊಳಿಸಿದರು. ಹಾಗಾಗಿ ದೊಡ್ಡ ಪೀಠದಿಂದ ಪ್ರಕರಣದ ವಿಚಾರಣೆಯ ಅಗತ್ಯವಿತ್ತು.
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ನ ವಿಭಿನ್ನ ತೀರ್ಪಿನ ನಂತರ ಸಂತ್ರಸ್ತ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಂದ ಖಾಸಗಿ ಕಾಲೇಜುಗಳಿಗೆ ತೆರಳಿದ್ದಾರೆ. ಆದರೆ, ಸರಕಾರಿ ಕಾಲೇಜುಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸಬಹುದಾಗಿರುವುದರಿಂದ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವಂತೆ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿದಾರರು ಪರ ವಕೀಲರು ವಾದಿಸಿದರು.