ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪ ರಾಜ್ಯ ಸರ್ಕಾರದ ವತಿಯಿಂದ ನಡೆದ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಸ್ಥಾಪನೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಿ ಹಿಂದಿಯಲ್ಲಿ ಬ್ಯಾನರ್, ನಿರೂಪಣೆ ಸೇರಿದಂತೆ ಇಡೀ ಕಾರ್ಯಕ್ರಮ ನಡೆಸಿದ್ದಕ್ಕೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣ ಸರ್ಕಾರದ ಬೇಜವಾನ್ದಾರಿಯುತ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದ ಕಾರಣಕರ್ತರಾದ ಅಧಿಕಾರಿ/ನೌಕರರ ಮೇಲೆ ತ್ರಿಭಾಷಾ ನಿಯಮದ ಉಲ್ಲಂಘನೆ ಸಂಬಂಧ ಶಿಸ್ತುಕ್ರಮ ಜರುಗಿಸುವಂತೆ ಟಿ.ಎಸ್.ನಾಗಾಭರಣ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: ಬಿಎಸ್ವೈ, ಅಮಿತ್ ಶಾ ವಿರುದ್ಧ ಕಿಡಿ
“ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಆಡಳಿತದಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬದ್ಧತೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯದಂತೆ 2020-21ನ್ನು ಕನ್ನಡ ಕಾಯಕ ವರ್ಷಾಚರಣೆ ಎಂದು ಘೋಷಿಸಿ ಕನ್ನಡಪರ ಚಟುವಟಿಕೆಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳುವಂತೆ ನಿರ್ದೇಶಿಸಿ, ಈಗಾಗಲೇ ಆದೇಶವನ್ನೂ ಹೊರಡಿಸಲಾಗಿದೆ. ಮಾನ್ಯ ಕೇಂದ್ರ ಗೃಹಮಂತ್ರಿಗಳು ಆರ್.ಎ.ಎಫ್ (ಕ್ಷಿಪ್ರ ಕಾರ್ಯಪಡೆ) ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಫಲಕದಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಪರಿಗಣಿಸಲಾಗಿದೆ. ಪ್ರಧಾನವಾಗಿ ಬಳಸಬೇಕಿದ್ದ ರಾಜ್ಯಭಾಷೆಯಾದ ಕನ್ನಡವನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತ್ರಿಭಾಷಾನೀತಿಯನ್ನು ಉಲ್ಲಂಘಿಸಿದಂತಾಗಿದೆ” ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ನಾಗಾಭರಣ, “ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕನ್ನಡ ಭಾಷೆಯ ಹೆಜ್ಜೆ ಗುರುತುಗಳು ಈಗಾಗಲೇ ವಿಶ್ವದಾದ್ಯಂತ ಪಸರಿಸಿದೆ. ಕರ್ನಾಟಕದಲ್ಲಿ ‘ಕನ್ನಡವೇ ಸಾರ್ವಭೌಮ’ ಭಾಷೆ. ಕನ್ನಡವನ್ನು ಆಡಳಿತ, ಶಿಕ್ಷಣ, ತಂತ್ರಜ್ಞಾನ ಹಾಗೂ ಸಾರ್ವಜನಿಕವಾಗಿ ಬಳಕೆಯಲ್ಲಿರುವಂತೆ ನೋಡಿಕೊಳ್ಳಲು ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಭಾಷಾನೀತಿ ಅನ್ವಯ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ 350ಕ್ಕೂ ಹೆಚ್ಚು ಕನ್ನಡಪರ ಆಜ್ಞೆ, ಆದೇಶಗಳನ್ನು ಹೊರಡಿಸಿ ಕನ್ನಡದ ಬಗೆಗಿನ ತನ್ನ ಬದ್ಧತೆಯನ್ನು ತೋರಿದೆ. ಕೇಂದ್ರವು ಕೂಡ ರಾಜ್ಯದಲ್ಲಿರುವ ಕೇಂದ್ರ ಸ್ವಾಮ್ಯದ ಕಛೇರಿ/ಸಂಸ್ಥೆಗಳಲ್ಲಿ ತ್ರಿಭಾಷಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದ್ದರೂ ಕ್ಷಿಪ್ರ ಕಾರ್ಯಪಡೆ ಘಟಕದ ಶಂಕುಸ್ಥಾಪನೆ ಅಡಿಗಲ್ಲಿನಲ್ಲಿ ಮತ್ತು ಸದರಿ ಕಾರ್ಯಕ್ರಮಗಳ ವೇದಿಕೆ ಫಲಕಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಅಧಿಕಾರಿಗಳ ಉದ್ಧಟತನವನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್!
“ಅಧಿಕಾರಿಗಳ ಇಂತಹ ಧೋರಣೆಯಿಂದಾಗಿ ಕನ್ನಡಪರ ಮನಸ್ಸುಗಳು ರಾಜ್ಯ ಸರ್ಕಾರದ ಭಾಷಾನೀತಿಯ ಅನುಷ್ಠಾನದ ಬದ್ಧತೆಯ ಬಗ್ಗೆ ಪ್ರಶ್ನಿಸುವಂತಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ, ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಆಡಳಿತ ಕನ್ನಡ ಬದ್ಧತೆಗೆ ಚ್ಯುತಿ ಉಂಟು ಮಾಡಿದ್ದು, ಖೇದಕರ ಸಂಗತಿಯಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ. ಅಶ್ವತ್ಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಸಂಗಮೇಶ್ ಭಾಗವಹಿಸಿದ್ದು ಅಮಿತ್ ಶಾರನ್ನು ಒಲೈಸಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ಹಿಂದಿಯಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಕನ್ನಡಿಗರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಹಿಂದಿ ಹೇರಿಕೆ ವಿರೋಧಿ ಚಿತ್ರಗಳನ್ನು ರೈತರ ಅರಾಜಕತೆ ಎಂದು ಪೋಸ್ಟ್ ಮಾಡಿದ ಬಿಜೆಪಿಗರು!
ನಾಗಾಬರಣರಿಗೇನಾದರೂ ಸ್ವಾಭಿಮಾನ ಇದ್ದರೆ, ಈ ಕೂಡಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ಕೊಟ್ಟು, ಆನಂತರ ರಾಜ್ಯ ಸರ್ಕಾರದ ವಿರುದ್ದ ಮಾತನಾಡಬೇಕು. ಡಬ್ಬಲ್ ಗೇಮ್ ಬೇಡ.